ಕ್ರೀಡೆ

ನನ್ನ ಮಗನಿಗೆ ಭಾರತೀಯ ವಾಯುಸೇನೆ ಬಗ್ಗೆ ಆಸಕ್ತಿಯಿದೆ: ಸಚಿನ್ ತೆಂಡೂಲ್ಕರ್

ನವದೆಹಲಿ: ಸೆಲೆಬ್ರಿಟಿಗಳ ಮಕ್ಕಳು ಹೇಗಿರುತ್ತಾರೆ...ಅವರ ಮಕ್ಕಳು ಮುಂದೆ ಏನಾಗುತ್ತಾರೆ ಎಂಬ ಬಗ್ಗೆ ಹಲವರಲ್ಲಿ ಕುತೂಹಲವಿರುವುದು ಸಾಮಾನ್ಯ ಇದೇ ರೀತಿ ಭಾರತೀಯ ಕ್ರಿಕೆಟ್ ದೇವರು ಎಂದೇ ಖ್ಯಾತಿ ಹೊಂದಿರುವ ಸಚಿನ್ ತೆಂಡೂಲ್ಕರ್ ಅವರ ಪುತ್ರ ಮುಂದೆ ಏನಾಗುತ್ತಾನೆ ಎಂಬುದರ ಬಗ್ಗೆ ಹಲವರಲ್ಲಿ ಸಾಕಷ್ಟು ಕುತೂಹಲಗಳಿವೆ. ಇದೀಗ ಎಲ್ಲಾ ಅನುಮಾನ ಹಾಗೂ ಕುತೂಹಲಗಳಿಗೆ ಸ್ವತಃ ಸಚಿನ್ ಅವರೇ ತೆರೆ ಎಳೆದಿದ್ದು, ತಮ್ಮ ಪುತ್ರನಿಗೆ ಭಾರತೀಯ ವಾಯುಸೇನೆ ಬಗ್ಗೆ ಆಸಕ್ತಿಯಿದೆ ಎಂದು ಗುರುವಾರ ಹೇಳಿದ್ದಾರೆ.

ಹಿಂಡಾನ್ ವಾಯುನೆಲೆಯಲ್ಲಿ ಆಚರಿಸಲಾಗುತ್ತಿರುವ 83ನೇ ವಾಯುಸೇನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, ನನ್ನ ಮಗನಿಗೆ ವಾಯುಸೇನೆ ಎಂದರೆ ಬಹಳ ಆಸಕ್ತಿ. ಅವನನ್ನು ಇಲ್ಲಿಗೆ ಕರೆತರಲು ಇಚ್ಛಿಸಿದ್ದೆ ಎಂದು ಹೇಳಿದ್ದಾರೆ. ಇದೇ ವೇಳೆ ಅರ್ಜುನ್ ವಾಯುಸೇನೆಯನ್ನು ಸೇರಲು ಇಚ್ಛಿಸುತ್ತಾನೆಯೇ ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು, ಈ ಪ್ರಶ್ನೆಗೆ ಇಷ್ಟು ಬೇಗ ಉತ್ತರ ಹೇಳುವುದು ಬಹಳ ಕಷ್ಟ. ಆದರೆ, ನನ್ನ ಮಗನಿಗೆ ವಾಯುಸೇನೆ ಬಗ್ಗೆ ಆಸಕ್ತಿಯಿದೆ ಎಂದು ಹೇಳಿದ್ದಾರೆ.

ಇದಲ್ಲದೇ ತಮ್ಮ ಫೇಸ್ ಬುಕ್ ಪೇಜ್ ನಲ್ಲಿಯೂ ಭಾರತೀಯ ವಾಯುಸೇನೆ ಕುರಿತಂತೆ ಹೇಳಿಕೊಂಡಿರುವ ಸಚಿನ್, ವಾಯುಸೇನೆಯಲ್ಲಿರುವ ಪ್ರತಿಯೊಬ್ಬ ಸಿಬ್ಬಂದಿಯೂ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ದೇಶಕ್ಕಾಗಿ ಅವರ ತ್ಯಾಗ ಹಾಗೂ ವಚನ ಬದ್ಧತೆಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು ಎಂದು ಹೇಳಿದ್ದಾರೆ.

ಭಾರತೀಯ ವಾಯುಸೇನೆಯ ಗೌರವಾನ್ವಿತ ಗ್ರೂಪ್ ಕ್ಯಾಪ್ಟನ್ ಆಗಿರುವ ಸಚಿನ್ ಅವರು 2014ರಲ್ಲಿ ಪತ್ನಿ ಅಂಜಲಿ ಜತೆಗೂಡಿ ಈ ವಾಯುನೆಲೆಗೆ ಭೇಟಿ ನೀಡಿದ್ದರು.

SCROLL FOR NEXT