ಕ್ರೀಡೆ

ಫೈನಲ್‍ಗೆ ಲಗ್ಗೆ ಇಟ್ಟ ಬಾಕ್ಸರ್ ವಿಕಾಸ್ ಕೃಷ್ಣನ್

Vishwanath S
ಬ್ಯಾಂಕಾಕ್: ಭಾರತದ ಪ್ರಮುಖ ಬಾಕ್ಸರ್ ಆಗಿರುವ ವಿಕಾಸ್ ಕೃಷ್ಣನ್ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‍ಶಿಪ್‍ನ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿದ್ದಾರೆ. 
ಇನ್ನು ಇತರೆ ಮೂವರು ಆಟಗಾರರು ಸೆಮಿಫೈನಲ್‍ನಲ್ಲಿ ಸೋತು ಕಂಚಿನ ಪದಕಕ್ಕೆ ತೃಪ್ತಿಪಟ್ಟಿದ್ದಾರೆ. ಶುಕ್ರವಾರ ನಡೆದ 75 ಕೆ.ಜಿ ವಿಭಾಗದಲ್ಲಿ ವಿಕಾಸ್ ಕೃಷ್ಣನ್ ತಮ್ಮ ಪ್ರತಿಸ್ಪರ್ಧಿ ಉಜ್ಬೇಕಿಸ್ತಾನದ ಬೆಕ್ತಿಮಿರ್ ಮೆಲಿಕುಜಿವ್ ವಿರುದ್ಧ 30 ಅಂಕಗಳ ಅಂತರದಲ್ಲಿ ಗೆಲವು ದಾಖಲಿಸಿದರು. ಆ ಮೂಲಕ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿ ಕನಿಷ್ಠ ಬೆಳ್ಳಿ ಪದಕವನ್ನು ಖಚಿತಪಡಿಸಿದ್ದಾರೆ.
ಇನ್ನು 91+ ಕೆ.ಜಿ ವಿಭಾಗದಲ್ಲಿ ಸತೀಶ್ ಕುಮಾರ್, 49 ಕೆ.ಜಿ ವಿಭಾಗದಲ್ಲಿ ಎಲ್ ದೇವೇಂದ್ರೂ ಹಾಗೂ 56 ಕೆ.ಜಿ ವಿಭಾಗದಲ್ಲಿ ಹಾಲಿ ಚಾಂಪಿಯನ್ ಶಿವಥಾಪ ತಮ್ಮ ಪಂದ್ಯಗಳಲ್ಲಿ ಪರಾಭವಗೊಂಡು ಕಂಚಿನ ಪದಕ ಗಳಿಸಲಷ್ಟೇ ಶಕ್ತರಾದರು. 
ಇನ್ನು ಕ್ವಾರ್ಟರ್ಫೈನಲ್ ಸುತ್ತಿನಲ್ಲಿ 52 ಕೆ.ಜಿ ವಿಭಾಗದಲ್ಲಿ ಮದನ್ ಲಾಲ್‍ರನ್ನು ಮಣಿಸಿದ್ದ ಶಕೊಬಿಡಿನ್ ಹಾಗೂ 64 ಕೆ.ಜಿ ವಿಭಾಗದಲ್ಲಿ ಮನೋಜ್ ಕುಮಾರ್ ಅವರನ್ನು ಮಣಿಸಿದ್ದ ಫಸ್‍ಲಿದ್ದೀನ್ ತಮ್ಮ ಸುತ್ತುಗಳಲ್ಲಿ ಫೈನಲ್ ಪ್ರವೇಶಿಸಿದ ಹಿನ್ನೆಲೆಯಲ್ಲಿ ಭಾರತದ ಬಾಕ್ಸರ್ ಗಳು ಮುಂದಿನ ತಿಂಗಳು ನಡೆಯಲಿರುವ ವಿಶ್ವ ಚಾಂಪಿಯನ್‍ಶಿಪ್‍ಗೆ ಅರ್ಹತೆ ಪಡೆದುಕೊಂಡಿದ್ದಾರೆ. ಶುಕ್ರವಾರ ದಿನದಲ್ಲಿ ಭಾರತದ ಪರ ಕಡೇಯದಾಗಿ ಕಣಕ್ಕಿಳಿದ ವಿಕಾಸ್, ಟೂರ್ನಿಯಲ್ಲಿ ಭಾರತದ ಆಸೆಯನ್ನು ಜೀವಂತವಾಗಿರಿಸಿದರು.
SCROLL FOR NEXT