ನವದೆಹಲಿ: ಭಾರತದ ಯುವ ಸ್ಕ್ವಾಶ್ ಆಟಗಾರ ರವಿ ದೀಕ್ಷಿತ್ ತನಗೆ ಪ್ರಾಯೋಜಕರು ಸಿಗುತ್ತಿಲ್ಲ, ಆದ್ದರಿಂದ ಕಿಡ್ನಿ ಮಾರಲು ತೀರ್ಮಾನಿಸಿದ್ದೀನಿ ಎಂದು ಸಾಮಾಜಿಕ ತಾಣದಲ್ಲಿ ಬರೆದುಕೊಂಡಿದ್ದರು. ಸ್ಕ್ವಾಶ್ ಆಟಗಾರನೊಬ್ಬನಿಗೆ ಒದಗಿ ಬಂದಿರುವ ಈ ಅವಸ್ಥೆ ಬಗ್ಗೆ ಮಾಧ್ಯಮಗಳು ಸುದ್ದಿ ಮಾಡುತ್ತಿದ್ದಂತೆ ರವಿ, ತಮ್ಮ ಸೋಷ್ಯಲ್ ಮೀಡಿಯಾ ಪೋಸ್ಟ್ ಬಗ್ಗೆ ಸ್ಪಷ್ಟನೆ ನೀಡಲು ಮುಂದೆ ಬಂದಿದ್ದಾರೆ.
ಫೇಸ್ಬುಕ್ ನಲ್ಲಿ ಹಾಕಿದ ಸ್ಟೇಟಸ್ ಈ ಮಟ್ಟದಲ್ಲಿ ಸುದ್ದಿಯಾಗುತ್ತದೆ ಎಂದು ನನಗೆ ಗೊತ್ತಿರಲಿಲ್ಲ. ವರದಿಗಾರರೊಬ್ಬರು ಫೋನ್ ಮಾಡಿದ ನಂತರವೇ ಆ ಪೋಸ್ಟ್ ಇಷ್ಟೊಂದು ಸುದ್ದಿ ಮಾಡುತ್ತಿದೆ ಎಂಬುದು ಗೊತ್ತಾಗಿದ್ದು ಎಂದು ಮಾಜಿ ಏಷ್ಯನ್ ಜೂನಿಯರ್ ಚಾಂಪಿಯನ್ ರವಿ ಹೇಳಿದ್ದಾರೆ. ಮುಂದಿನ ತಿಂಗಳು ನಡೆಯಲಿರುವ ಸೌತ್ ಏಷ್ಯನ್ ಗೇಮ್ಸ್ ನಲ್ಲಿ ರವಿ ಪಾಲ್ಗೊಳ್ಳಲಿದ್ದಾರೆ.
ಫೆಬ್ರವರಿ ತಿಂಗಳಿನಲ್ಲಿ ನಡೆಯಲಿರುವ ಸೌತ್ ಏಷ್ಯನ್ ಗೇಮ್ಸ್ನಲ್ಲಿ ಭಾಗವಹಿಸಲು ತರಬೇತಿ ಪಡೆಯುವುದಕ್ಕೆ ಮತ್ತು ಪ್ರಚಾರಕ್ಕಾಗಿ ಹಣ ಬೇಕಾಗಿದೆ. ಆ ಹಣ ಹೊಂದಿಸಲು ತಾನು ಕಿಡ್ನಿಯನ್ನು ಹರಾಜಿಗಿಡುವುದಾಗಿ ರವಿ ಫೇಸ್ಬುಕ್ನಲ್ಲಿ ಪೋಸ್ಟ್ ಹಾಕಿದ್ದರು.
ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ರವಿ ತಾನು ಆ ಕ್ಷಣದಲ್ಲಿ ತೋಚಿದ್ದನ್ನು ಬರೆದಿದ್ದೆ. ಸ್ಕ್ವಾಶ್ ಎಂಬುದು ನನ್ನ ಬದುಕು, ನಾನು ಅದನ್ನು ಮುಂದುವರಿಸಲು ಬಯಸುತ್ತನೆ. ನಾನು ನನ್ನ ಕಿಡ್ನಿಯನ್ನು ಮಾರಲು ಬಯಸಿಲ್ಲ, ಎಲ್ಲವೂ ಆ ಕ್ಷಣಕ್ಕೆ ತೋಚಿದ್ದು. ನನಗೆ ಪ್ರಾಯೋಜಕರು ಬೇಕಾಗಿದ್ದಾರೆ. ನಾನು ಹಾಗೆ ಬರೆದದ್ದಕ್ಕೆ ಕ್ಷಮಿಸಿ. ನನಗೆ ಪ್ರೋತ್ಸಾಹ ನೀಡಿದ್ದ ನನ್ನ ಕುಟುಂಬ ಮತ್ತು ಜನರಲ್ಲಿ ನಾನು ಕ್ಷಮೆಯಾಚಿಸುತ್ತೇನೆ ಎಂದು ರವಿ ಹೇಳಿದ್ದಾರೆ.