ಕ್ರೀಡೆ

ಸ್ವಾಗತಿಸಲು ಯಾರೂ ಬಾರದ ಕಾರಣ ವಿಮಾನ ನಿಲ್ದಾಣದಲ್ಲಿ ಕಿವುಡರ ಒಲಿಂಪಿಕ್ಸ್ ತಂಡ ಅಸಮಾಧಾನ

Sumana Upadhyaya
ನವದೆಹಲಿ: ತಮ್ಮ ಗೆಲುವಿನ ಸಂಭ್ರಮಾಚರಣೆಗೆ ಸ್ವಾಗತಿಸಲು ಯಾರೂ ಬಂದಿರಲಿಲ್ಲ ಎಂದು ಬೇಸರಿಸಿ ಭಾರತೀಯ ಕಿವುಡರ ಒಲಿಂಪಿಕ್ಸ್ ತಂಡ (Indian Deaflympics team) ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತೊರೆಯಲು ನಿರಾಕರಿಸಿದ ಘಟನೆ ಇಂದು ಬೆಳಗ್ಗೆ ನಡೆದಿದೆ. ಇವರು ಟರ್ಕಿಯ ಸ್ಯಾಮ್ಸನ್ ನಲ್ಲಿ ಬೇಸಿಗೆ ಡೆಫ್ಲಾಲಿಂಕ್ಸ್ ನ 23ನೇ ಆವೃತ್ತಿಯಲ್ಲಿ ಭಾಗವಹಿಸಿದ್ದರು.
ಪಂದ್ಯದಲ್ಲಿ ಒಂದು ಚಿನ್ನ ಸೇರಿದಂತೆ ನಾಲ್ಕು ಪದಕಗಳನ್ನು ಗೆದ್ದು ಯಶಸ್ಸಿಯಾಗಿ ಭಾರತಕ್ಕೆ ಹಿಂತಿರುಗಿದರೆ ತಮ್ಮನ್ನು ಸರ್ಕಾರದ ವತಿಯಿಂದ ಯಾರೊಬ್ಬರೂ ಸ್ವಾಗತಿಸಿಲ್ಲ ಎಂದು 46 ಕ್ರೀಡಾಪಟುಗಳು ಮತ್ತು ಅವರ ಬೆಂಬಲಿತ ಸಿಬ್ಬಂದಿ ಬೇಸರ ವ್ಯಕ್ತಪಡಿಸಿದರು.
ಕೇಂದ್ರ ಕ್ರೀಡಾ ಸಚಿವ ವಿಜಯ್ ಗೋಯೆಲ್ ಅವರನ್ನು ಭೇಟಿ ಮಾಡಬೇಕೆಂದು ತಾವು ಇಚ್ಛಿಸಿದರೂ ತಮ್ಮ ಮನವಿಯನ್ನು ಅವರು ಸ್ವೀಕರಿಸಿಲ್ಲ ಎಂದರು.
ಕಿವುಡರ ಒಲಿಂಪಿಕ್ಸ್ ಪಂದ್ಯದಲ್ಲಿ ಭಾರತ ಒಟ್ಟು 8 ವಿಭಾಗಗಳಲ್ಲಿ ಸ್ಪರ್ಧಿಸಿದ್ದು ಅವುಗಳಲ್ಲಿ ಮೂರರಲ್ಲಿ ಪದಕ ಗೆದ್ದಿದೆ. ಕುಸ್ತಿ ವಿಭಾಗದಲ್ಲಿ ಚಿನ್ನ ಮತ್ತು ಕಂಚಿನ ಪದಕ, ಲಾನ್ ಟೆನ್ನಿಸ್ ನಲ್ಲಿ ಕಂಚಿನ ಪದಕ ಮತ್ತು ಗಾಲ್ಫ್ ನಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದೆ ಎಂದು ತಂಡದ ವಿವರಕ ಕೇತನ್ ಶಾ ಎಎನ್ಐ ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿದರು.
ನಾವು ಆಗಸ್ಟ್ 1ಕ್ಕೆ ದೇಶಕ್ಕೆ ಮರಳುತ್ತೇವೆ ಎಂದು ಸರ್ಕಾರಕ್ಕೆ ಮಾಹಿತಿ ನೀಡಿದ್ದೆವು. ಆದರೆ ಅಧಿಕಾರಿಗಳಿಂದ ನಮಗೆ ಉತ್ತರ ಬಂದಿಲ್ಲ. ಅಧಿಕಾರಿಗಳನ್ನು ಪ್ರಯತ್ನಿಸಲು ಯತ್ನಿಸಿದರೆ ಅವರು ಲಭ್ಯರಿಲ್ಲ ಎಂಬ ಮಾಹಿತಿ ಬಂದಿದೆ. ಮೂರು ಪದಕಗಳನ್ನು ಗೆದ್ದು ದೇಶಕ್ಕೆ ನಮ್ಮ  ತಂಡದ ಆಟಗಾರರು ಕೀರ್ತಿ ತಂದಿದ್ದಾರೆ. ಆದರೆ ನಮ್ಮನ್ನು ಸರ್ಕಾರದ ಮಟ್ಟದಲ್ಲಿ ಗುರುತಿಸಿ ಪ್ರೋತ್ಸಾಹಿಸುವವರು ಯಾರೂ ಇಲ್ಲ. ಹೀಗಾಗಿ ನಮ್ಮನ್ನು ಕ್ರೀಡಾ ಸಚಿವರು ಅಥವಾ ಸರ್ಕಾರದ ಅಧಿಕಾರಿಗಳು ಬಂದು ಸ್ವಾಗತಿಸಬೇಕು ಎಂದು ಕ್ರೀಡಾಪಟುಗಳು ಒತ್ತಾಯಿಸಿದರು.
SCROLL FOR NEXT