ನವದೆಹಲಿ: ಭಾರತದ ವೇಗದ ಓಟಗಾರ್ತಿ ದ್ಯುತಿ ಚಾಂದ್ ಅವರನ್ನು ಈ ವರ್ಷವೂ ಅರ್ಜುನ ಪ್ರಶಸ್ತಿಗೆ ಶಿಫಾರಸ್ಸು ಮಾಡಿಲ್ಲ. ಜತೆಗೆ, ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಸಲ್ಲಿಕೆಯಾಗಿದ್ದ ಅರ್ಜಿ ಕೇಂದ್ರ ಕ್ರೀಡಾ ಸಚಿವಾಲಯದಿಂದ ತಿರಸ್ಕೃತವಾಗಿದೆ.
ಏಷ್ಯನ್ ಕ್ರೀಡಾಕೂಟದ 800 ಮೀ ಚಾಂಪಿಯನ್ ಮಂಜಿತ್ ಸಿಂಗ್ ಅವರಿಗೂ ಅರ್ಜುನ ಪ್ರಶಸ್ತಿಗೆ ಶಿಫಾರಸ್ಸು ಮಾಡಲಾಗಿಲ್ಲ. ಆದ್ದರಿಂದ ಈ ಬಾರಿ ದ್ಯುತಿ ಚಾಂದ್ ಜತೆ ಇವರಿಗೆ ಈ ಬಾರಿ ಅರ್ಜುನ ಪ್ರಶಸ್ತಿ ಗೌರವ ಇಲ್ಲದಂತಾಗಿದೆ.
ಅಥ್ಲೆಟಿಕ್ಗಳು ಹಾಗೂ ಕ್ರಿಡಾಪಟುಗಳಿಂದ ಅರ್ಜುನ ಪ್ರಶಸ್ತಿ ಹಾಗೂ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗಳಿಗೆ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಕೇಂದ್ರ ಕ್ರೀಡಾ ಸಚಿವಾಲಯ ಪರಿಶೀಲನೆ ಮಾಡುತ್ತಿದೆ. ಪಟ್ಟಿ ಒಮ್ಮೆ ಸಿದ್ಧವಾದ ಬಳಿಕ ಅಂತಿಮವಾಗಿ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜುಗೆ ಅಂತಿಮ ಮುದ್ರೆಗೆ ಕಳುಹಿಸಲಾಗುತ್ತದೆ.
ಭಾರತ ತಂಡದ ವೇಗಿ ಜಸ್ಪ್ರಿತ್ ಬುಮ್ರಾ, ಮೊಹಮ್ಮದ್ ಶಮಿ, ಆಲ್ರೌಂಡರ್ ರವೀಂದ್ರ ಜಡೇಜಾ ಹಾಗೂ ಮಹಿಳಾ ಕ್ರಿಕೆಟ್ ಆಟಗಾರ್ತಿ ಪೂನಮ್ ಯಾದವ್ ಅವರನ್ನು ಬಿಸಿಸಿಐ ಪ್ರಸಕ್ತ ವರ್ಷದಲ್ಲಿ ಅರ್ಜುನ ಪ್ರಶಸ್ತಿಗೆ ಶಿಫಾರಸ್ಸು ಮಾಡಿದೆ. ಆದರೆ, ಈ ಬಾರಿ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಯಾರನ್ನೂ ಶಿಫಾರಸ್ಸು ಮಾಡಿಲ್ಲ.
ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಭಾರತ ತಂಡದ ಮಾಜಿ ಸ್ಪಿನ್ನರ್ ಹರಭಜನ್ ಸಿಂಗ್ ಅವರ ಹೆಸರನ್ನು ಪಂಜಾಬ್ ಸರ್ಕಾರ ಜೂನ್ 25ರಂದು ಶಿಫಾರಸ್ಸು ಮಾಡಿತ್ತು. ಆದರೆ, ಅರ್ಜಿ ಸಲ್ಲಿಸಲು ಏಪ್ರಿಲ್ 30 ಕೊನೆಯ ದಿನಾಂಕವಾಗಿತ್ತು. ಹಾಗಾಗಿ, ಅವರ ಅರ್ಜಿ ತಿರಸ್ಕೃತವಾಯಿತು.
ಕ್ರೀಡಾ ಒಕ್ಕೂಟ ಒಟ್ಟು ಮೂರು ಅಥ್ಲಿಟ್ಗಳ ಹೆಸರನ್ನು ಮಾತ್ರ ಶಿಫಾರಸ್ಸು ಮಾಡಲು ಅವಕಾಶವಿದೆ. ಆದರೆ, ಭಾರತೀಯ ಅಥ್ಲೆಟಿಕ್ಸ್ ಒಕ್ಕೂಟ ಶಾಟ್ಪೂಟರ್ ತೇಜೆಂದರ್ ಪಾಲ್ ಸಿಂಗ್, ಹೆಪ್ತಾಥ್ಲೆಟ್ ಸ್ವಪ್ನ ಬರ್ಮನ್, ತ್ರಿಪಲ್ ಜಂಪರ್ ಅರ್ಪಿಂದರ್ ಸಿಂಗ್ ಅವರೊಂದಿಗೆ ದ್ಯುತಿ ಚಾಂದ್ ಹಾಗೂ ಮಂಜೀತ್ ಸೇರಿ ಒಟ್ಟು ಐದು ಮಂದಿ ಹೆಸರನ್ನು ಶಿಫಾರಸ್ಸು ಮಾಡಿತ್ತು. ಹಾಗಾಗಿ, ದುತಿ ಹಾಗೂ ಮಂಜಿತ್ ಅವರಿಗೆ ಶಿಫಾರಸ್ಸು ಮಾಡಲಾಗಲಿಲ್ಲ.
ಅಂತಾರಾಷ್ಟ್ರೀಯ ಕ್ರಿಡಾಕೂಟಗಳಲ್ಲಿ ಪ್ರದರ್ಶನದ ಆಧಾರದ ಮೇಲೆ ಅಥ್ಲಿಟ್ಗಳನ್ನು ಶ್ರೇಯಾಂಕದ ಆಧಾರದ ಮೇಲೆ ಪಟ್ಟಿ ಮಾಡಲಾಗುತ್ತದೆ. ಈ ಪಟ್ಟಿಯಲ್ಲಿ ಮಂಜಿತ್ ಸಿಂಗ್ ನಾಲ್ಕನೇ ಸ್ಥಾನ ಹಾಗೂ ದ್ಯುತಿ ಚಾಂದ್ ಅವರು ಐದನೇ ಸ್ಥಾನ ಪಡೆದಿದ್ದರು. ಜಕಾರ್ತದಲ್ಲಿ ನಡೆದಿದ್ದ ಏಷ್ಯನ್ ಕ್ರೀಡಾಕೂಟ ಹಾಗೂ ಇತರೆ ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಜಯಿಸಿದ್ದರಿಂದ ತೇಜೇಂದರ್ ಸಿಂಗ್ ಪಾಲ್, ಸ್ವಪ್ನ ಬರ್ಮಾನ್ ಹಾಗೂ ಅರ್ಪಿಂದರ್ ಅವರು ಕ್ರಮವಾಗಿ ಒಂದರಿಂದ ಮೂರನೇ ಸ್ಥಾನ ಪಡೆದಿದ್ದರು. ಹಾಗಾಗಿ, ಅವರ ಹೆಸರು ಅರ್ಜುನ ಪ್ರಶಸ್ತಿಗೆ ಶಿಫಾರಸ್ಸು ಮಾಡಲು ಸಾಧ್ಯವಾಗಿದೆ.
ದ್ಯುತಿ ಚಾಂದ್ ಏಷ್ಯನ್ ಕ್ರೀಡಾಕೂಟದಲ್ಲಿ 100ಮೀ ಹಾಗೂ 200ಮೀ ಓಟದಲ್ಲಿ ಎರಡು ಬೆಳ್ಳಿ ಪದಕ ಗೆದ್ದಿದ್ದರು. ಆದರೆ, ಚಿನ್ನದ ಪದಕ ಗೆಲ್ಲುವಲ್ಲಿ ವಿಫಲರಾಗಿದ್ದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos