ಕ್ರೀಡೆ

'ಸೋಲಿನ ನೋವನ್ನು ಮರೆತು ಇಂದು ಹೊಸದಾಗಿ ಪಂದ್ಯವನ್ನು ತೆಗೆದುಕೊಂಡು ಆಡಬೇಕು': ಪಿ ವಿ ಸಿಂಧು ತಂದೆ ರಮಣ ಮಾತು

Sumana Upadhyaya

ಹೈದರಾಬಾದ್: ವಿಶ್ವದ ನಂಬರ್ 1 ಬ್ಯಾಡ್ಮಿಂಟನ್ ಆಟಗಾರ್ತಿ ತೈ ತ್ಸು ಯಿಂಗ್ ವಿರುದ್ಧ ಟೋಕಿಯೊ ಒಲಿಂಪಿಕ್ಸ್ ನ ಸೆಮಿ ಫೈನಲ್ ಹಂತದಲ್ಲಿ ಸೋಲು ಅನುಭವಿಸಿದ ಭಾರತದ ಆಟಗಾರ್ತಿ ಪಿ ವಿ ಸಿಂಧು ತಮ್ಮ ಸೋಲಿನಿಂದ ಕೂಡಲೇ ಹೊರಬಂದು ಭಾನುವಾರ ನಡೆಯಲಿರುವ ಪಂದ್ಯಕ್ಕೆ ಹೊಸ ಆರಂಭವನ್ನು ಕಂಡುಕೊಳ್ಳಬೇಕು, ಸೋಲನ್ನು ಮರೆತು ಇಂದು ಚೀನಾದ ಹೀ ಬಿಂಗ್ ಜಿಯಾವೋ ಎದುರು ಕಂಚಿನ ಪದಕಕ್ಕೆ ತನ್ನ ಸಾಮರ್ಥ್ಯವೆಲ್ಲವನ್ನೂ ಪಣಕ್ಕಿಟ್ಟು ಹೋರಾಟ ನಡೆಸಬೇಕು, ಹೀಗೆಂದು ಹೇಳಿದ್ದು ಸ್ವತಃ ಪಿ ವಿ ಸಿಂಧು ಅವರ ತಂದೆ ಪಿ ವಿ ರಮಣ.

ಸೆಮಿ ಫೈನಲ್ ವರೆಗೆ ಉತ್ತಮ ಆಟ ಪ್ರದರ್ಶಿಸುತ್ತಾ ಬಂದಿದ್ದ ಪಿ ವಿ ಸಿಂಧು ಈ ಬಾರಿಯ ಒಲಿಂಪಿಕ್ಸ್ ನಲ್ಲಿ ಚಿನ್ನ ಗೆಲ್ಲುವ ನಿರೀಕ್ಷೆಯಲ್ಲಿದ್ದರು. ಆದರೆ ಅವರ ಕನಸು ನಿನ್ನೆಯ ಪಂದ್ಯದಲ್ಲಿ ನುಚ್ಚು ನೂರಾಗಿದೆ. ಹಾಗೆಂದು ವಿಚಲಿತರಾಗಬೇಕಿಲ್ಲ, ಇಂದು ಸಾಯಂಕಾಲ ನಡೆಯುವ ಕಂಚಿನ ಸೆಣಸಾಟಕ್ಕೆ ಹೊಸದಾಗಿ ಆರಂಭಿಸಲಿ ಎಂದು ತಂದೆ ನಿನ್ನೆ ಮಾಧ್ಯಮಗಳೊಂದಿಗೆ ಮಾತನಾಡುವ ವೇಳೆ ಹೇಳಿದ್ದಾರೆ.

ಕಳೆದ ರಿಯೊ ಒಲಿಂಪಿಕ್ಸ್ ನಲ್ಲಿ ಪಿ ವಿ ಸಿಂಧುಗೆ ಬೆಳ್ಳಿ ಪದಕ ಬಂದಿತ್ತು, ಕಳೆದ ಐದು ವರ್ಷಗಳಲ್ಲಿ ನಡೆದಿರುವ ಪ್ರಮುಖ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಪಂದ್ಯಗಳಲ್ಲೆಲ್ಲಾ ಸಿಂಧು ಉತ್ತಮ ಸಾಧನೆ ತೋರಿದ್ದಾರೆ. ಇಂದು ಸಂಜೆ ನಡೆಯಲಿರುವ ಕಂಚಿನ ಪದಕಕ್ಕೆ ಚೀನಾದ ಹೀ ಬಿಂಗ್ ಜಿಯಾವೊ ಅವರನ್ನು ಎದುರಿಸಲಿದ್ದಾರೆ.

ಇಂದು ನಡೆಯಲಿರುವ ಪಂದ್ಯದಲ್ಲಿ ಸಿಂಧು ಇನ್ನಷ್ಟು ಜಾಗ್ರತೆಯಿಂದ ಆಟವಾಡಿ ದೇಶಕ್ಕೆ ಕಂಚು ಪದಕ ಗೆದ್ದು ತರಬೇಕು ಎಂದು ಭಾರತದ 1986ರ ಏಷ್ಯನ್ ಗೇಮ್ಸ್ ನಲ್ಲಿ ಭಾರತದ ವಾಲಿಬಾಲ್ ತಂಡಕ್ಕೆ ಕಂಚು ಪದಕ ಗೆದ್ದು ತಂದಿರುವ ರಮಣ ಅವರು ಹೇಳಿದ್ದಾರೆ.

ಯಾವುದೇ ಆಟಗಾರನು ಮೂರನೇ ಮತ್ತು ನಾಲ್ಕನೇ ಸ್ಥಾನಕ್ಕಾಗಿ ಆಡುವುದು ನೋವಿನ ಸಂಗತಿಯಾದರೂ ಅವಳು ಸೋಲನ್ನು ಮರೆತು ಇಂದಿನ ಸ್ಪರ್ಧೆಯನ್ನು ತಾಜಾ ಪಂದ್ಯವಾಗಿ ತೆಗೆದುಕೊಳ್ಳಬೇಕು ಎಂದು ಮಗಳಿಗೆ ಕಿವಿಮಾತು ಹೇಳಿದ್ದಾರೆ. 

SCROLL FOR NEXT