ಕ್ರೀಡೆ

'ಬೇಸರಪಟ್ಟು ಕೂರುವ ಸಮಯ ಇದಲ್ಲ, ಕಂಚಿನ ಪದಕ ಪಂದ್ಯದತ್ತ ಗಮನಹರಿಸೋಣ': ಹಾಕಿ ತಂಡದ ನಾಯಕ ಮನ್ ಪ್ರೀತ್ ಕಿವಿಮಾತು

Sumana Upadhyaya

ಟೋಕಿಯೊ: ಮಂಗಳವಾರ ನಡೆದ ಸೆಮಿ ಫೈನಲ್ ಪಂದ್ಯದಲ್ಲಿ ಭಾರತದ ಪುರುಷರ ಹಾಕಿ ತಂಡಕ್ಕೆ 2-5 ಗೋಲುಗಳ ಅಂತರದಲ್ಲಿ ಸೋಲು ಉಂಟಾಗಿದೆ, ಇದು ತಂಡದ ಆಟಗಾರರಿಗೆ ಮತ್ತು ಕೋಟ್ಯಂತರ ಭಾರತೀಯರ ನಿರಾಶೆಗೆ ಕಾರಣವಾಯಿತಾದರೂ ಇದು ಬೇಸರಪಟ್ಟುಕೊಂಡು ಕೂರುವ, ಸಮಯ ಹಾಳು ಮಾಡುವ ಸಮಯವಲ್ಲ, ಗುರುವಾರ ನಡೆಯುವ ಪ್ಲೇ ಆಫ್ ಕಂಚಿನ ಪದಕದ ಹೋರಾಟಕ್ಕೆ ಅಣಿಯಾಗಬೇಕೆಂದು ತಂಡದ ಸಹ ಆಟಗಾರರಿಗೆ ನಾಯಕ ಮನ್ ಪ್ರೀತ್ ಸಿಂಗ್ ಮತ್ತು ಮುಖ್ಯ ಉಸ್ತುವಾರಿ ಪಿ ಆರ್ ಸ್ರೀಜೇಶ್ ಹೇಳಿದ್ದಾರೆ.

ಭಾರತದ ಪುರುಷರ ಹಾಕಿ ತಂಡ 1980ರ ದಶಕದವರೆಗೆ 8 ಬಾರಿ ಒಲಿಂಪಿಕ್ ನಲ್ಲಿ ಚಿನ್ನ ಗೆದ್ದುಕೊಂಡಿತ್ತು.ಅದಾದ ಬಳಿಕ 40 ದಶಕಗಳಲ್ಲಿ ಒಂದು ಬಾರಿಯೂ ಸೆಮಿ ಫೈನಲ್ ವರೆಗೆ ಹೋಗಿರಲಿಲ್ಲ. ಈ ಬಾರಿ ಸೆಮಿ ಫೈನಲ್ ನಲ್ಲಿ ಬೆಲ್ಜಿಯಂ ವಿರುದ್ಧ 2-5 ಗೋಲುಗಳ ಅಂತರದಲ್ಲಿ ಸೋಲು ಕಂಡಿದೆ.

ನಾವು ಗೆಲ್ಲುವ ಮನಸ್ಥಿತಿಯನ್ನಿಟ್ಟುಕೊಂಡೇ ಮೈದಾನಕ್ಕೆ ಇಳಿದಿದ್ದೆವು. ಆದರೆ ದುರುದೃಷ್ಟವಶಾತ್ ಪಂದ್ಯ ಗೆಲ್ಲಲು ಸಾಧ್ಯವಾಗಲಿಲ್ಲ. ಇದೀಗ ನಾಡಿದ್ದಿನ ಕಂಚಿನ ಪದಕದ ಹೋರಾಟದತ್ತ ನಮ್ಮ ಗಮನವನ್ನು ಸಂಪೂರ್ಣವಾಗಿ ಹರಿಸಬೇಕು. ಅದರೆಡೆಗೆ ನಾವು ಕೆಲಸ ಮಾಡಬೇಕು ಎಂದು ನಾಯಕ ಮನ್ ಪ್ರೀತಿ ತಂಡದ ಸಹ ಆಟಗಾರರಿಗೆ ಹೇಳಿದ್ದಾರೆ.

ದಶಕಗಳ ಬಳಿಕ ಒಲಿಂಪಿಕ್ ನಲ್ಲಿ ಸೆಮಿ ಫೈನಲ್ ಹಂತ ತಲುಪಿದ್ದು ನಮಗೆ ಸಿಕ್ಕ ಅತಿ ದೊಡ್ಡ ಗೌರವ ಮತ್ತು ಗೆಲುವು. ಮುಂದಿನ ಆಟ ನಮಗೆ ಬಹಳ ಮುಖ್ಯ. ದೇಶಕ್ಕೆ ನಾವು ಕಂಚು ಪದಕವನ್ನಾದರೂ ಗೆದ್ದು ತರಬೇಕು ಎಂದು ಹೇಳಿದ್ದಾರೆ. ಒಲಿಂಪಿಕ್ ನಲ್ಲಿ ಈ ಮಟ್ಟಕ್ಕೆ ಬರಲು ಕಳೆದ ನಾಲ್ಕೈದು ವರ್ಷಗಳಿಂದ ಸಾಕಷ್ಟು ಪರಿಶ್ರಮ ಹಾಕಿದ್ದೇವೆ. ಇನ್ನೂ ಉತ್ತಮ ಸಾಧನೆ ಮಾಡಬೇಕಾಗಿತ್ತು. ದುರುದೃಷ್ಟವಶಾತ್ ಸಾಧ್ಯವಾಗಲಿಲ್ಲ ಎಂದು ನಾಯಕ ಸಿಂಗ್ ಹೇಳಿಕೊಂಡಿದ್ದಾರೆ.

ಇನ್ನು ತಂಡದ ಮುಖ್ಯ ಮಾರ್ಗದರ್ಶಕ ಸ್ರೀಜೇಶ್, ಬೆಲ್ಜಿಯಂ ವಿರುದ್ಧ ಸೋಲು ಇನ್ನು ಕಳೆದುಹೋದ ವಿಷಯ. ನಾವು ಪದಕ ಗೆದ್ದುಕೊಂಡೇ ದೇಶಕ್ಕೆ ವಾಪಸಾಗಬೇಕು, ನಿಮಗೆಲ್ಲಾ ಇಂದು ಬೇಸರವಾಗಿರಬಹುದು, ಆದರೆ ಆತಂಕ, ಬೇಸರಪಟ್ಟುಕೊಂಡು ಕೂರುವ ಸಮಯ ಇದಲ್ಲ. ಹಿಂದಿನ ಸೋಲನ್ನು ಮರೆತು ಭವಿಷ್ಯದ ಬಗ್ಗೆ ಯೋಚಿಸೋಣ. ಇನ್ನೂ ನಮಗೆ ಪದಕ ಗೆಲ್ಲುವ ಅವಕಾಶವಿದೆ. ಅದು ನಮಗೆ ಬಹಳ ಮುಖ್ಯ, ಈ ಸಮಯದಲ್ಲಿ ಅದು ಮುಖ್ಯ ಎಂದಿದ್ದಾರೆ.

SCROLL FOR NEXT