ಕ್ರೀಡೆ

ತಂಡದಲ್ಲಿ ಹೆಚ್ಚು ದಲಿತ ಆಟಗಾರರಿದ್ದರು ಆದ್ದರಿಂದ ಭಾರತಕ್ಕೆ ಸೋಲು: ಹಾಕಿ ತಾರೆಯ ಬಗ್ಗೆ ಜಾತಿ ನಿಂದನೆ!

Srinivas Rao BV

ಟೋಕಿಯೋ ಒಲಂಪಿಕ್ಸ್ ನಲ್ಲಿ ಭಾರತ ಮಹಿಳಾ ಹಾಕಿ ತಂಡ ಸೆಮಿ ಫೈನಲ್ ನಲ್ಲಿ ಪರಾಭವಗೊಂಡ ಬೆನ್ನಲ್ಲೇ ಕೆಲವು ಕಿಡಿಗೇಡಿಗಳು ಸ್ಟಾರ್ ಸ್ಟ್ರೈಕರ್ ವಂದನಾ ಕಟಾರಿಯಾ ಅವರ ನಿವಾಸದೆದುರು ಜಾತಿಗೆ ಸಂಬಂಧಿಸಿದ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದಾರೆ. 

ಮೇಲ್ವರ್ಗದ ಇಬ್ಬರು ವ್ಯಕ್ತಿಗಳು ಹರಿದ್ವಾರದ ರೋಷ್ನಾಬಾದ್ ಗ್ರಾಮದಲ್ಲಿನ ವಂದನಾ ಕಟಾರಿಯಾ ಅವರ ನಿವಾಸದ ಎದುರು ನಿಂತು ಜಾತಿಯ ನಿಂದನೆ ಮಾಡಿದ್ದಾರೆ. 

ವಂದನಾ ಕಟಾರಿಯಾ ಕುಟುಂಬ ಸದಸ್ಯರನ್ನು ಅವಹೇಳನ ಮಾಡುವುದಕ್ಕೆ ನಿಂತ ಕಿಡಿಗೇಡಿಗಳು ಪಟಾಕಿ ಹೊಡೆದು ಅವರನ್ನು ಟೀಕಿಸಿದ್ದಾರೆ. 

ವಂದನಾ ಅವರ ಕುಟುಂಬ ಸದಸ್ಯರು ನೀಡಿರುವ ಮಾಹಿತಿಯ ಪ್ರಕಾರ, "ಭಾರತದ ಸೋಲಿಗೆ ಮಹಿಳಾ ತಂಡದಲ್ಲಿ ಹೆಚ್ಚು ಮಂದಿ ದಲಿತ ಆಟಗಾರರು ಇದ್ದಿದ್ದೇ ಕಾರಣ" ಎಂದು ಹೇಳಿದ್ದಾರೆ. ಟೈಮ್ಸ್ ಆಫ್ ಇಂಡಿಯಾ ವರದಿಗಳ ಪ್ರಕಾರ, ಈ ಪೈಕಿ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ. 

ವಂದನಾ ಅವರ ಸಹೋದರ ಶೇಖರ್ ಮಾತನಾಡಿ, " ಸೋಲಿನಿಂದ ಬೇಸರಗೊಂಡಿದ್ದೆವು, ಆದರೆ ತಂಡ ಉತ್ತಮ ಹೋರಟ ನಡೆಸಿತ್ತು. ಆ ಬಗ್ಗೆ ನಮಗೆ ಹೆಮ್ಮೆ ಇದೆ. ಆದರೆ ಪಂದ್ಯದ ಬೆನ್ನಲ್ಲೇ ಜೋರು ಧ್ವನಿಗಳು ನಮಗೆ ಕೇಳಿಸಿತು. ನಮ್ಮ ಮನೆಯ ಎದುರು ಪಟಾಕಿ ಹೊಡೆಯಲಾಗುತ್ತಿತ್ತು. ನಾವು ಹೊರಗೆ ಹೋಗಿ ನೋಡುತ್ತಿದ್ದಂತೆಯೇ ನಮ್ಮದೇ ಗ್ರಾಮದಲ್ಲಿರುವ ಮೇಲ್ವರ್ಗದ ಇಬ್ಬರು ವ್ಯಕ್ತಿಗಳು ನಮ್ಮ ಮನೆಯ ಮುಂದೆ ಕುಣಿಯುತ್ತಿದ್ದರು. ವಂದನಾ ಅವರ ಕುಟುಂಬ ಸದಸ್ಯರು ಆಚೆ ಬರುತ್ತಿದ್ದಂತೆಯೇ ಜಾತಿ ನಿಂದನೆ ಪ್ರಾರಂಭಿಸಿದರು. ಈ ಸಂಬಂಧ ಶೇಖರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. "ದಲಿತರು ಹೆಚ್ಚಾಗಿದ್ದ ಕಾರಣ ಹಾಕಿ ತಂಡ ಸೋತಿತು, ಹಾಕಿಯಷ್ಟೇ ಅಲ್ಲದೇ, ಎಲ್ಲಾ ಕ್ರೀಡೆಗಳಿಂದಲೂ ದಲಿತರನ್ನು ದೂರ ಇಡಬೇಕು ಎಂದು ಹೇಳಿ ಬಟ್ಟೆ ತೆಗೆದು ಕುಣಿಯಲು ಪ್ರಾರಂಭಿಸಿದರು, ಅದು ಜಾತಿ ನಿಂದನೆಯಾಗಿತ್ತು" ಎಂದು ದೂರಿನಲ್ಲಿ ಆರೋಪಿಸಲಾಗಿದೆ. 

ದೂರಿನ ಆಧಾರದಲ್ಲಿ ಎಫ್ಐಆರ್ ನ್ನು ಇನ್ನಷ್ಟೇ ದಾಖಲಿಸಬೇಕಿದೆ. ಎಸ್ ಹೆಚ್ ಒ ಈ ಬಗ್ಗೆ ಮಾಹಿತಿ ನೀಡಿದ್ದು, ಪ್ರಕರಣದ ಸಂಬಂಧ ಓರ್ವ ವ್ಯಕ್ತಿಯನ್ನು ಬಂಧಿಸಲಾಗಿದೆ. ದೂರು ಸ್ವೀಕರಿಸಲಾಗಿದ್ದು ತನಿಖೆಗೆ ಆದೇಶಿಸಿದ್ದೇವೆ ಎಂದು ಹೇಳಿದ್ದಾರೆ. 

SCROLL FOR NEXT