ಸ್ಪೇನ್: ವೀಸಾ ನಿರಾಕರಣೆ ವಿವಾದದ ನಡುವೆಯೇ 23 ವರ್ಷದೊಳಗಿನ ವಿಶ್ವ ಕುಸ್ತಿ ಚಾಂಪಿಯನ್ಶಿಪ್ನಲ್ಲಿ ಭಾರತ ಐತಿಹಾಸಿಕ ಪದಕ ಸಾಧನೆ ಮಾಡಿದ್ದು, ಸಜನ್ ಭನ್ವಾಲಾ ಮೂಲಕ ಮೊದಲ ಪದಕ ಪಡೆದಿದೆ.
77 ಕೆಜಿ ವಿಭಾಗದಲ್ಲಿ ಭಾರತದ ಗ್ರೀಕೋ ರೋಮನ್ ಕುಸ್ತಿಪಟು ಸಜನ್ ಭನ್ವಾಲಾ ಉಕ್ರೇನ್ ಆಟಗಾರನನ್ನು ಮಣಿಸಿ ಕಂಚಿನ ಪದಕ ಪಡೆದಿದ್ದಾರೆ. ರಿಪಿಚೇಜ್ ಸುತ್ತಿನಲ್ಲಿ ಗ್ರೀಕೋ- ರೋಮನ್ ಕುಸ್ತಿಪಟು ಸಜನ್ ಭನ್ವಾಲಾ, ಉಕ್ರೇನ್ನ ಡಿಮಿಟ್ರೊ ವಸೆಟ್ಸ್ಕಿ ಅವರನ್ನು 10-10 ಪಾಯಿಂಟ್ಗಳಿಂದ ಸೋಲಿಸಿದರು. ಈ ಟೂರ್ನಿಯಲ್ಲಿ ಇದು ಭಾರತಕ್ಕೆ ಬಂದ ಮೊದಲ ಪದಕವಾಗಿದೆ.
ಇದನ್ನೂ ಓದಿ: ರೆಸ್ಲಿಂಗ್ ಫೆಡರೇಶನ್ ಮಾಡಲಾಗದ್ದನ್ನು ವಾರದಲ್ಲಿ ಮಾಡಿಕೊಟ್ಟ ಟ್ರಾವೆಲ್ ಏಜೆಂಟ್, ರಾಯಭಾರ ಕಚೇರಿಯಲ್ಲೇ ಭ್ರಷ್ಟಾಚಾರ!!
ಸಜನ್ ಭನ್ವಾಲಾ ಅವರು ಮೊದಲ ಸುತ್ತಿನಲ್ಲಿ ಲಿಥುವೇನಿಯಾದ ಐಸ್ಟಿಸ್ ಲಿಯಾಗ್ಮಿನಾಸ್ ವಿರುದ್ಧ 3- 0 ಅಂತರದ ಗೆಲುವು ಸಾಧಿಸಿದ ನಂತರ, ಮೊಲ್ಡೊವಾದ ಅಲೆಕ್ಸಾಂಡ್ರಿನ್ ಗುಟು ವಿರುದ್ಧ ಪ್ರಿ ಕ್ವಾರ್ಟರ್ನಲ್ಲಿ 0-8 ಅಂತರದಲ್ಲಿ ಸೋತಿದ್ದರು. ಬಳಿಕ ಕಝಾಕಿಸ್ತಾನದ ರಸುಲ್ ಝುನಿಸ್ ವಿರುದ್ಧ 9-6 ಗೆಲುವಿನೊಂದಿಗೆ ಮತ್ತೆ ಭನ್ವಾಲಾ ಸ್ಪರ್ಧೆಗೆ ಮರಳಿದ್ದರು.
ಏತನ್ಮಧ್ಯೆ, 72 ಕೆಜಿ ವಿಭಾಗದಲ್ಲಿ ಕ್ರೊಯೇಷಿಯಾದ ಪಾವೆಲ್ ಪುಕ್ಲಾವೆಕ್ ವಿರುದ್ಧ ಭಾರತದ ವಿಕಾಸ್ ಸೆಮಿಫೈನಲ್ನಲ್ಲಿ ಸೋತಿದ್ದು, ಇದೀಗ ಕಂಚಿಗಾಗಿ ಹೋರಾಡಲಿದ್ದಾರೆ. ಅವರು ಜಾರ್ಜಿಯೊಸ್ ಥಿಯೋಡೊರೊಸ್ ಸೊಟಿರಿಯಾಡಿಸ್ ಮತ್ತು ಜ್ಪಾನಾದ ಡೈಗೊ ಕೊಬಯಾಶಿ ನಡುವಿನ ರಿಪೆಚೇಜ್ ಸ್ಪರ್ಧೆಯ ವಿಜೇತರ ವಿರುದ್ಧ ಸೆಣಸಲಿದ್ದಾರೆ.
ಇದನ್ನೂ ಓದಿ: U-23 ವಿಶ್ವ ಚಾಂಪಿಯನ್ಶಿಪ್: 21 ಭಾರತೀಯ ಕುಸ್ತಿಪಟುಗಳಿಗೆ ಸಿಕ್ಕಿಲ್ಲ ವೀಸಾ; ವಿಲಕ್ಷಣ ಕಾರಣ ಕೊಟ್ಟ ಸ್ಪೇನ್!
ಅಂತೆಯೇ 60 ಕೆಜಿ ವಿಭಾಗದಲ್ಲಿ, ಸುಮಿತ್ ಅವರು ರಿಪೆಚೇಜ್ ಸುತ್ತಿನಲ್ಲಿ ಪದಕದ ಲೆಕ್ಕಾಚಾರಕ್ಕೆ ಮರಳಿದ್ದು, ಅವರು ಕಜಕಸ್ತಾನದ ಓಲ್ಜಾಸ್ ಸುಲ್ತಾನ್ ವಿರುದ್ಧ ಸೆಣಸಲಿದ್ದಾರೆ. 67 ಕೆಜಿ ಸ್ಪರ್ಧೆಯಲ್ಲಿ, ಆಶು ಅವರು ಜಾರ್ಜಿಯಾದ ಡಿಯಾಗೋ ಚ್ಖಿಕ್ವಾಡ್ಜೆ ವಿರುದ್ಧ ತಮ್ಮ ಅರ್ಹತಾ ಪಂದ್ಯದಲ್ಲಿ ಸೋತಿದ್ದಾರೆ.
ವೀಸಾ ನಿರಾಕರಣೆ ಶಾಕ್
23 ವರ್ಷದೊಳಗಿನ ವಿಶ್ವ ಕುಸ್ತಿ ಚಾಂಪಿಯನ್ಶಿಪ್ಗೆ 30 ಸದಸ್ಯರ ತಂಡವನ್ನು ಸಜ್ಜುಗೊಳಿಸಲಾಗಿತ್ತು. ಆದರೆ, ಸ್ಪೇನ್ ರಾಯಭಾಗಿ 21 ಮಂದಿಗೆ ವೀಸಾ ನಿರಾಕರಿಸಿತ್ತು. ಇದರಿಂದ 9 ಜನರು ಮಾತ್ರ ಚಾಂಪಿಯನ್ಶಿಪ್ನಲ್ಲಿ ಭಾಗವಹಿಸುವಂತಾಯಿತು. ಭಾರತೀಯರು ವೀಸಾ ಅವಧಿ ಮುಗಿದರೂ ಅಲ್ಲಿಂದ ವಾಪಸ್ ಬರುವುದಿಲ್ಲ ಎಂಬ ಕಾರಣ ನೀಡಿ ಭಾರತೀಯ ಕ್ರೀಡಾಪಟುಗಳಿಗೆ ಅಲ್ಲಿನ ರಾಯಭಾರಿ ವೀಸಾ ನೀಡಿಲ್ಲ. ಇದು ಭಾರತ ಕುಸ್ತಿ ಫೆಡರೇಷನ್ಗೆ ಭಾರೀ ಆಘಾತ ಉಂಟು ಮಾಡಿತ್ತು. 6 ಗ್ರೀಕೋ-ರೋಮನ್, ಮೂವರು ಫ್ರೀಸ್ಟೈಲ್ ಕುಸ್ತಿಪಟುಗಳು ಸೇರಿ ಕೇವಲ 9 ಜನರಿಗೆ ವೀಸಾ ನೀಡಲಾಗಿದೆ.