ಬಿಂದ್ಯಾರಾಣಿ ದೇವಿಗೆ ಕಂಚು 
ಕ್ರೀಡೆ

CWC 2026: ಬಿಂದ್ಯಾರಾಣಿ ದೇವಿಗೆ ಕಂಚು; ಭಾರತಕ್ಕೆ 6ನೇ ಪದಕ, ಪ್ರಧಾನಿ ಮೋದಿ ಅಭಿನಂದನೆ

ಎಕ್ಸ್‌ (X) ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ ಪ್ರಧಾನಮಂತ್ರಿಗಳು, ಬಿಂದ್ಯಾರಾಣಿ ಅವರ ಕಠಿಣ ಪರಿಶ್ರಮ ಮತ್ತು ದೃಢ ಸಂಕಲ್ಪವನ್ನು ಶ್ಲಾಘಿಸಿ, ಮುಂದಿನ ದಿನಗಳಲ್ಲಿಯೂ ಇನ್ನಷ್ಟು ಯಶಸ್ಸು ಗಳಿಸಲಿ ಎಂದು ಹಾರೈಸಿದರು.

ನವದೆಹಲಿ: ಗ್ಲಾಸ್ಗೋದಲ್ಲಿ ನಡೆಯುತ್ತಿರುವ 2026ರ ಕಾಮನ್‌ವೆಲ್ತ್ ಕ್ರೀಡಾಕೂಟದ ಮಹಿಳೆಯರ 58 ಕೆಜಿ ವೇಟ್‌ಲಿಫ್ಟಿಂಗ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿರುವ ಭಾರತದ ವೇಟ್‌ಲಿಫ್ಟರ್ ಬಿಂದ್ಯಾರಾಣಿ ದೇವಿ ಸೊರೋಖೈಬಂ ಅವರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.

ಎಕ್ಸ್‌ (X) ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ ಪ್ರಧಾನಮಂತ್ರಿಗಳು, ಬಿಂದ್ಯಾರಾಣಿ ಅವರ ಕಠಿಣ ಪರಿಶ್ರಮ ಮತ್ತು ದೃಢ ಸಂಕಲ್ಪವನ್ನು ಶ್ಲಾಘಿಸಿ, ಮುಂದಿನ ದಿನಗಳಲ್ಲಿಯೂ ಇನ್ನಷ್ಟು ಯಶಸ್ಸು ಗಳಿಸಲಿ ಎಂದು ಹಾರೈಸಿದರು.

ವೇಟ್‌ಲಿಫ್ಟಿಂಗ್‌ನಲ್ಲಿ ಭಾರತಕ್ಕೆ ಮತ್ತೊಂದು ಪದಕ! ಗ್ಲಾಸ್ಗೋ ಕಾಮನ್‌ವೆಲ್ತ್ ಕ್ರೀಡಾಕೂಟದ ಮಹಿಳೆಯರ 58 ಕೆಜಿ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿರುವ ಬಿಂದ್ಯಾರಾಣಿ ದೇವಿ ಸೊರೋಖೈಬಂ ಅವರ ಬಗ್ಗೆ ಹೆಮ್ಮೆ ಇದೆ. ಅವರ ಈ ಸಾಧನೆ ಕಠಿಣ ಪರಿಶ್ರಮ, ಸಮರ್ಪಣೆ ಮತ್ತು ದೃಢ ಸಂಕಲ್ಪದ ಫಲವಾಗಿದೆ. ಮುಂದಿನ ದಿನಗಳಲ್ಲಿಯೂ ಅವರು ಇನ್ನಷ್ಟು ಯಶಸ್ಸು ಸಾಧಿಸಲಿ ಎಂದು ಹಾರೈಸುತ್ತೇನೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.

2026ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಪದಕಗಳ ಸಂಖ್ಯೆಯನ್ನು ಆರಕ್ಕೆ ಏರಿಸುವಲ್ಲಿ ವೇಟ್‌ಲಿಫ್ಟರ್ ಬಿಂದ್ಯಾರಾಣಿ ದೇವಿ ಸೊರೋಖೈಬಂ ಮಹತ್ವದ ಕೊಡುಗೆ ನೀಡಿದ್ದಾರೆ. ಮಹಿಳೆಯರ 58 ಕೆಜಿ ವಿಭಾಗದಲ್ಲಿ ಅವರು ಕಂಚಿನ ಪದಕ ಗೆದ್ದಿದ್ದಾರೆ. ಇದು ಗ್ಲಾಸ್ಗೋ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ವೇಟ್‌ಲಿಫ್ಟಿಂಗ್‌ನಲ್ಲಿ ಲಭಿಸಿದ ಐದನೇ ಪದಕವಾಗಿದ್ದು, ನಿನ್ನೆ ಸೋಮವಾರ ಒಂದೇ ದಿನದ ಎರಡನೇ ಪದಕವಾಗಿದೆ. ಇದಕ್ಕೂ ಮುನ್ನ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಜ್ಞಾನೇಶ್ವರಿ ಯಾದವ್ ಬೆಳ್ಳಿ ಪದಕ ಗೆದ್ದಿದ್ದರು.

ಬಿಂದ್ಯಾರಾಣಿ ಒಟ್ಟು 199 ಕೆಜಿ (ಸ್ನ್ಯಾಚ್‌ನಲ್ಲಿ 87 ಕೆಜಿ + ಕ್ಲೀನ್ ಅಂಡ್ ಜರ್ಕ್‌ನಲ್ಲಿ 112 ಕೆಜಿ) ಭಾರ ಎತ್ತುವ ಮೂಲಕ ಕಂಚಿನ ಪದಕ ತಮ್ಮದಾಗಿಸಿಕೊಂಡರು. 2022ರ ಬರ್ಮಿಂಗ್‌ಹ್ಯಾಮ್ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಬಿಂದ್ಯಾರಾಣಿಗೆ ಇದು ಎರಡನೇ ಕಾಮನ್‌ವೆಲ್ತ್ ಪದಕವಾಗಿದೆ.

ನೈಜೀರಿಯಾದ ರಫಿಯಾತು ಫೋಲಾಶಾಡೆ ಲವಾಲ್ 220 ಕೆಜಿ ಭಾರ ಎತ್ತಿ ಚಿನ್ನದ ಪದಕ ಗೆದ್ದರೆ, ಕೆನಡಾದ ಆನ್-ಸೋಫಿ ಟಾಶೆರೋ 209 ಕೆಜಿ ಭಾರ ಎತ್ತಿ ಬೆಳ್ಳಿ ಪದಕ ಪಡೆದರು.

ಸ್ನ್ಯಾಚ್ ವಿಭಾಗದಲ್ಲಿ ಬಿಂದ್ಯಾರಾಣಿ ಮೊದಲ ಪ್ರಯತ್ನದಲ್ಲೇ 83 ಕೆಜಿ, ಎರಡನೇ ಪ್ರಯತ್ನದಲ್ಲಿ 85 ಕೆಜಿ ಹಾಗೂ ಮೂರನೇ ಪ್ರಯತ್ನದಲ್ಲಿ 87 ಕೆಜಿ ಯಶಸ್ವಿಯಾಗಿ ಎತ್ತಿದರು. ಬಳಿಕ ಕ್ಲೀನ್ ಅಂಡ್ ಜರ್ಕ್ ವಿಭಾಗದಲ್ಲಿ 112 ಕೆಜಿ ಭಾರ ಎತ್ತಿ ಒಟ್ಟು 199 ಕೆಜಿಯೊಂದಿಗೆ ಕಂಚಿನ ಪದಕವನ್ನು ಖಚಿತಪಡಿಸಿಕೊಂಡರು.

ಚೊಚ್ಚಲ ಕಾಮನ್‌ವೆಲ್ತ್‌ನಲ್ಲಿ ಜ್ಞಾನೇಶ್ವರಿಗೆ ಬೆಳ್ಳಿ

ಇದಕ್ಕೂ ಮುನ್ನ, ಛತ್ತೀಸ್‌ಗಢದ 23 ವರ್ಷದ ಜ್ಞಾನೇಶ್ವರಿ ಯಾದವ್ ತಮ್ಮ ಚೊಚ್ಚಲ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲೇ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದು ಗಮನ ಸೆಳೆದರು. ನೈಜೀರಿಯಾದ ಒನೋಮ್ ಒಮೊಲೊಲಾ ದಿದಿಹ್ ಅವರೊಂದಿಗೆ ಅವರು ಚಿನ್ನಕ್ಕಾಗಿ ತೀವ್ರ ಪೈಪೋಟಿ ನಡೆಸಿದರು.

ಸ್ನ್ಯಾಚ್ ವಿಭಾಗದಲ್ಲಿ ಜ್ಞಾನೇಶ್ವರಿ 82 ಕೆಜಿಯಿಂದ ಆರಂಭಿಸಿ, ಎರಡನೇ ಪ್ರಯತ್ನದಲ್ಲಿ 85 ಕೆಜಿ ಹಾಗೂ ಮೂರನೇ ಪ್ರಯತ್ನದಲ್ಲಿ 88 ಕೆಜಿ ಭಾರ ಎತ್ತಿ ಕಾಮನ್‌ವೆಲ್ತ್ ಕ್ರೀಡಾಕೂಟದ ಹೊಸ ದಾಖಲೆ ನಿರ್ಮಿಸಿದರು. ಆದರೆ ದಿದಿಹ್ 93 ಕೆಜಿ ಭಾರ ಎತ್ತಿ ಮುನ್ನಡೆ ಸಾಧಿಸಿದರು.

ಕ್ಲೀನ್ ಅಂಡ್ ಜರ್ಕ್‌ನಲ್ಲಿ ಜ್ಞಾನೇಶ್ವರಿ ಮೊದಲಿಗೆ 103 ಕೆಜಿ ಭಾರ ಎತ್ತಿ ಒಟ್ಟು 191 ಕೆಜಿಯೊಂದಿಗೆ ಮತ್ತೊಂದು ಕ್ರೀಡಾಕೂಟದ ದಾಖಲೆ ಬರೆದರು. ನಂತರ 107 ಕೆಜಿ ಹಾಗೂ ಅಂತಿಮ ಪ್ರಯತ್ನದಲ್ಲಿ 111 ಕೆಜಿ ಯಶಸ್ವಿಯಾಗಿ ಎತ್ತಿ ಒಟ್ಟು 199 ಕೆಜಿಯೊಂದಿಗೆ ಮತ್ತೊಮ್ಮೆ ಕಾಮನ್‌ವೆಲ್ತ್ ಹಾಗೂ ಕ್ರೀಡಾಕೂಟದ ದಾಖಲೆ ನಿರ್ಮಿಸಿದರು.

ದಿದಿಹ್ ಅಂತಿಮವಾಗಿ 113 ಕೆಜಿ ಭಾರ ಎತ್ತಿ ಒಟ್ಟು 206 ಕೆಜಿಯೊಂದಿಗೆ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರು.

ಈವರೆಗೆ ಭಾರತ ಪರವಾಗಿ ಮಹಿಳೆಯರ 48 ಕೆಜಿ ವಿಭಾಗದಲ್ಲಿ ಒಲಿಂಪಿಕ್ ಪದಕ ವಿಜೇತೆ ಮೀರಾಬಾಯಿ ಚಾನು ಏಕೈಕ ಚಿನ್ನದ ಪದಕ ಗೆದ್ದಿದ್ದಾರೆ. ಪುರುಷರ 60 ಕೆಜಿ ವಿಭಾಗದಲ್ಲಿ ರಿಷಿಕಾಂತ ಸಿಂಗ್ ಹಾಗೂ 65 ಕೆಜಿ ವಿಭಾಗದಲ್ಲಿ ಮುತ್ತುಪಾಂಡಿ ರಾಜಾ ಬೆಳ್ಳಿ ಪದಕಗಳನ್ನು ಗೆದ್ದಿದ್ದಾರೆ. ಪುರುಷರ ಹೆವಿವೇಟ್ ಪ್ಯಾರಾ ಪವರ್‌ಲಿಫ್ಟಿಂಗ್ ವಿಭಾಗದಲ್ಲಿ ಝಂಡು ಕುಮಾರ್ ಕಂಚಿನ ಪದಕ ಗೆದ್ದು ಭಾರತಕ್ಕೆ ಪದಕದ ಖಾತೆ ತೆರೆದಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮೇಕೆದಾಟು ಯೋಜನೆಗೆ ಸಿಕ್ಕಿತು ಕೇಂದ್ರದ ಬಲ; ಕರ್ನಾಟಕಕ್ಕೆ ಕಾನೂನುಬದ್ಧ ಹಕ್ಕಿದೆ, ತಮಿಳುನಾಡಿನ ಸಮ್ಮತಿ ಅಗತ್ಯವೇ ಇಲ್ಲ ಎಂದ ಜಲಶಕ್ತಿ ಸಚಿವಾಲಯ

ಮರಳು ಮಾಫಿಯಾ ಹೆಡೆಮುರಿ ಕಟ್ಟಲು ಸರ್ಕಾರ ನಿರ್ಧಾರ; ಗೂಂಡಾ ಕಾಯ್ದೆ ಅಸ್ತ್ರ ಪ್ರಯೋಗಕ್ಕೆ ಮುಂದು, ಕಣ್ಮುಚ್ಚಿ ಕೂರುವ ಪೊಲೀಸರಿಗೂ ತಟ್ಟಲಿದೆ ಬಿಸಿ..!

VB-G RAM G ಯೋಜನೆಗೆ ಹಣದ ಕೊರತೆಯೇ ಇಲ್ಲ, ಗ್ರಾಮೀಣ ಉದ್ಯೋಗಕ್ಕೆ 2,900 ಕೋಟಿ ರೂ. ಬಿಡುಗಡೆ: ರಾಜ್ಯ ಸರ್ಕಾರ

ಮೇಕೆದಾಟು ಯೋಜನೆಗೆ ಸಮ್ಮತಿ ಅಗತ್ಯವೇ ಇಲ್ಲ: ಕರ್ನಾಟಕದ ಹಕ್ಕು ಪುನರುಚ್ಚರಿಸಿದ ಕೇಂದ್ರ ಸರ್ಕಾರ ಡಿಕೆಶಿ ಧನ್ಯವಾದ

ತಮಿಳುನಾಡಿಗೆ ಹೆಚ್ಚುವರಿ ನೀರು ಬಿಡುಗಡೆ; ಕಾಂಗ್ರೆಸ್ ಸರ್ಕಾರ ಕರ್ನಾಟಕಕ್ಕೆ ದ್ರೋಹ ಮಾಡಿದೆ: ಆರ್. ಅಶೋಕ್ ಆರೋಪ