ಚಿತ್ರದುರ್ಗದಲ್ಲಿ ಕನಕದಾಸರ ಜಯಂತಿಯಂದು ಶ್ರೀ ಮುರುಘ ರಾಜೇಂದ್ರ ಮಠದ 'ಜಮುರಾ ಸುತ್ತಾಟ' ತಂಡ 'ತಲ್ಲಣಿಸದಿರು ಕಂಡ್ಯಾ ತಾಳು ಮನವೆ' ನಾಟಕವನ್ನು ಪ್ರದರ್ಶಿಸಿತು...
ರಂಗಭೂಮಿ ಮನುಷ್ಯನ ಸೃಜನಶೀಲತೆಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆಧುನಿಕತೆಯ ಬಿರುಗಾಳಿಯಲ್ಲಿ ಸಿಲುಕಿರುವವರನ್ನೂ ತನ್ನತ್ತ ಸೆಳೆದು ಸಾಂತ್ವನ ಹೇಳುತ್ತದೆ. ಇತ್ತೀಚೆಗೆ ಕನಕದಾಸರ ವಿಚಾರಗಳೂ ಹೀಗೆ ಸಮಾಧಾನದ ಸಂಗತಿಯಾಗಿ ಕಲಾಪ್ರೇಮಿಗಳನ್ನು ತಲುಪಿದವು.
ಚಿತ್ರದುರ್ಗದಲ್ಲಿ ಕನಕದಾಸರ ಜಯಂತಿಯಂದು ಶ್ರೀ ಮುರುಘ ರಾಜೇಂದ್ರ ಮಠದ 'ಜಮುರಾ ಸುತ್ತಾಟ' ತಂಡ ಈ ಕೆಲಸ ಮಾಡಿತು. ಡಾ. ಜಿ.ಎನ್. ಮಲ್ಲಿಕಾರ್ಜುನ್ ಅವರ ಕನಕದಾಸರ ವ್ಯಕ್ತಿತ್ವ ಕುರಿತಾದ 'ತಲ್ಲಣಿಸದಿರು ಕಂಡ್ಯಾ ತಾಳು ಮನವೆ' ನಾಟಕ ಪ್ರದರ್ಶನವಾಯಿತು. ಮಹದೇವ್ ಹಡಪದ ಅವರ ನಿರ್ದೇಶನ. 'ನನ್ನ ಕೈಯಿಂದ ರಕ್ತತರ್ಪಣವಾಯಿತು' ಎಂದು ಕನಕನು ಬೇಸತ್ತು ಅಲ್ಲಿಂದ ಹೊರಬಂದು ಹರಿಭಕ್ತನಾಗುತ್ತಾನೆ. ಕನಕದಾಸರು ಕೇವಲ ಸಮುದಾಯಕ್ಕೆ ಸೀಮಿತರಾಗದೆ ವಿಶ್ವಮಾನವರಾಗುವುದನ್ನು ಇಲ್ಲಿ ಕಾಣಬಹುದು. ಕನಕರ ಬದುಕಿನ ಸತ್ವಗಳಿಂದ ಹೇಗೆ ಬದುಕು ಕಟ್ಟಿಕೊಳ್ಳಬಹುದೆಂಬುದನ್ನೂ ಇಲ್ಲಿ ಚಿತ್ರಿಸಲಾಗಿದೆ. ಮೊದಲ ದೃಶ್ಯದಲ್ಲಿ ಒಂದು ತುಂಬು ಕುಟುಂಬ ಆಧುನಿಕತೆಯ ಸೆಳೆತಕ್ಕೆ ಸಿಲುಕಿ ವಿಭಕ್ತವಾಗುವ ಸನ್ನಿವೇಶದ ಮೂಲಕ ಕನಕರ ಕಥೆ ಆರಂಭ. ಕನಕರು ದಂಡನಾಯಕನಾಗಿದ್ದು, ನಂತರ ಯುದ್ಧ ತ್ಯಜಿಸಿ ಕೇಶವರ ಭಕ್ತರಾಗುವುದು- ಹೀಗೆ ದೃಶ್ಯಗಳು ತೆರೆದುಕೊಳ್ಳುತ್ತಾ ಸಾಗುತ್ತವೆ. ನಾಟಕದಲ್ಲಿ ಕನಕರ ಕೀರ್ತನೆಯ ಸಾಲೇ ನಾಟಕದ ಶೀರ್ಷಿಕೆಯಾಗಿರುವುದು ವಿಶೇಷ. ನಾಟಕ ಆರಂಭದಿಂದ ಕೊನೆಯವರೆಗೆ ಕನಕರ ಕೀರ್ತನೆಗಳನ್ನು ಬಳಸಿಕೊಳ್ಳಲಾಗಿದೆ. ನಿರ್ದೇಶಕರು ಕನಕನಾಯಕರು ಕನಕದಾಸ ಆಗುವ ಸನ್ನಿವೇಶವನ್ನು ಕ್ರಿಯಾಶೀಲ ಕಲ್ಪನೆಯಲ್ಲಿ ತೋರಿಸಿ ಮೆಚ್ಚುಗೆಯಾಗುತ್ತಾರೆ. ಉಮೇಶ ಪತ್ತಾರರು ಸಂಗೀತ ನೀಡಿದ್ದಲ್ಲದೇ, ತಾವೇ ಸೊಗಸಾಗಿ ಹಾಡಿರುವ ಕೀರ್ತನೆಗಳು ಕೇಳುಗರನ್ನು ಹಿಡಿದಿಡುತ್ತವೆ. ರಾಜು ಅವರ ಬೆಳಕಿನ ಸಂಯೋಜನೆ ವಿಶಿಷ್ಟವಾಗಿ ಮೂಡಿಬಂದಿದೆ. ಸಹ ನಿರ್ದೇಶಕ ಮಾರಪ್ಪರ ವಸ್ತ್ರ ವಿನ್ಯಾಸವೂ ಸಮಯೋಚಿತ. ಹೀಗೆ ಹಲವು ಮಜಲುಗಳಲ್ಲಿ ನಾಟಕ ಮುಖ್ಯವೆನಿಸುತ್ತದೆ. ಕೀ.ರಂ.ನಾಗರಾಜು ಅವರ 'ಕಾಲಜ್ಞಾನಿ ಕನಕ' ನಾಟಕದ ನೆನಪು ಕಂಡರೂ ಈ ನಾಟಕದಲ್ಲಿ ಕನಕರು ವ್ಯಕ್ತಿತ್ವವನ್ನು ಕೆಲವೇ ಗಂಟೆಗಳಲ್ಲಿ ಸವಿಸ್ತಾರವಾಗಿ ಪರಿಚಯಿಸಿದ್ದಲ್ಲದೆ, ಹೊರನಡೆದ ನಂತರವೂ ದೃಶ್ಯಗಳು ಕಾಡುತ್ತವೆ.
- ಸ. ವಸಂತಕುಮಾರ್ ಹುಲ್ಲೂರು