ಪ್ರಧಾನ ಸುದ್ದಿ

ಜಾತಿಗಣತಿಗೆ ಹೈಕೋರ್ಟ್ ಅನುಮೋದನೆ; ಇಂದಿನಿಂದ ಪ್ರಾರಂಭ

Guruprasad Narayana

ಬೆಂಗಳೂರು: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಏಪ್ರಿಲ್ ೧೧ ರಿಂದ ೩೦ ರವರೆಗೆ ನಡೆಸುವ ಜಾತಿಗಣತಿಗೆ ಹೈಕೋರ್ಟ್ ಶುಕ್ರವಾರ ಅನುಮೋದನೆ ನೀಡಿದ್ದು ಜಾತಿಗಣನೆ ಇಂದಿನಿಂದ ಪ್ರಾರಂಭವಾಗಲಿದೆ.

ಜಾತಿಗಣತಿ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದ ಶಿವರಾಜ್ ಕಂಶೆಟ್ಟಿ ಮತ್ತು ಇತರರು ಅರ್ಜಿಯನ್ನು ವಿಚಾರಣೆ ಮಾಡಿದ ಕೋರ್ಟ್, ಜಾತಿಗಣತಿಯ ನಿಷೇಧಕ್ಕೆ ನಿರಾಕರಿಸಿದೆ. ವಿಚಾರಣೆಯನ್ನು ಜುಲೈ ೭ಕ್ಕೆ ಮುಂದೂಡಿದ ನ್ಯಾಯಾಲಯ ಇದು ಜನಗಣತಿಗಿಂತಲು ವಿಭಿನ್ನ ಎಂದು ಮುಖ್ಯ ನ್ಯಾಯಾಧೀಶ ಡಿ ಎಚ್ ವಘೇಲಾ ಹಾಗು ನ್ಯಾಯಮೂರ್ತಿ ರಾಮ ಮೋಹನ್ ರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ.

ಈ ಗಣನೆ ಮಾಡುವುದರ ಉದ್ದೇಶವನ್ನು ವಿವರಿಸುವಂತೆ ಸರ್ಕಾರಕ್ಕೆ ಗುರುವಾರ ಕೋರ್ಟ್ ಸೂಚನೆ ನೀಡಿತ್ತು.

ಶುಕ್ರವಾರ ಇದಕ್ಕೆ ಪ್ರತಿಕ್ರಿಯಿಸಿದ ಅಟಾರ್ನಿ ಜನರಲ್ ರವಿವರ್ಮ ಕುಮಾರ್ ಈ ಸರ್ವೇ ನಡೆಸಲು ಸರ್ಕಾರಕ್ಕೆ ಅಧಿಕಾರ ಇದೆ. ಆದುದರಿಂದ ಹಲವಾರು ದಿನಗಳಿಂದ ಮಾಡದೆ ಉಳಿದಿದ್ದ ಈ ಕೆಲಸವನ್ನು ಕೈಗೆತ್ತಿಕೊಂಡಿದ್ದೇವೆ ಎಂದು ವಿವರಿಸಿದ್ದಾರೆ.

ಈ ಗಣನೆಯಿಂದ ಸಮಾಜದಲ್ಲಿ ಅಶಾಂತಿ ಉಂಟಾಗುತದೆ ಎಂಬ ಅರ್ಜಿದಾರನ ಆತಂಕವನ್ನು ತಳ್ಳಿಹಾಕಿದ ಅವರು ಆಯೋಗ ಸರ್ವೇ ಮಾಡುತ್ತಿದ್ದು ಇದು ಸಂಪೂರ್ಣ ಜನಗಣತಿ ಅಲ್ಲ ಎಂದಿದೆ. ಅಲ್ಲದೆ ಸರ್ಕಾರಕ್ಕೆ ರಾಜ್ಯಾದಂತ ಜನರ ಜಾತಿಗಳ ಮಾಹಿತಿ ಇಲ್ಲವಾದ್ದರಿಂದ ಈ ಸರ್ವೇ ಕೈಗೆತ್ತಿಕೊಂಡಿದ್ದೇವೆ ಎಂದು ತಿಳಿಸಿದ್ದಾರೆ. ಸದ್ಯಕ್ಕೆ ಯಾರಾದರು ಮಾಹಿತಿ ಹಕ್ಕು ಕಾಯ್ದೆಯಡಿ ಜಾತಿ ಆಧಾರಿತ ಜನಸಂಖ್ಯೆ ಕೇಳಿದಾಗ ನಾವೂ ತಿರಸ್ಕರಿಸುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಇದಕ್ಕೂ ಮೊದಲು ವಾದ ಮಾಡಿದ ವಕೀಲರ ಬಳಗ ರಾಜ್ಯ ಸರ್ಕಾರಕ್ಕೆ ಈ ಗಣತಿ ಮಾಡಲು ಯಾವುದೇ ಅಧಿಕಾರವಿಲ್ಲ. ಕೇಂದ್ರ ಸರ್ಕಾರ ಮಾತ್ರ ಈ ಗಣತಿ ಮಾಡಬಲ್ಲುದು ಆದುದರಿಂದ ಈ ಗಣತಿಯಿಂದ ಹಣ ಮತ್ತು ಸಮಯ ನಷ್ಟವಾಗುತ್ತದೆ ಎಂದಿದ್ದರು.

SCROLL FOR NEXT