ಪ್ರಧಾನ ಸುದ್ದಿ

ರಾಹುಲ್ ಮರುಸ್ಥಾಪನೆಗೆ ಕಾಂಗ್ರೆಸ್ ರೈತರ ಸ್ಥಿತಿಯನ್ನು ಉಪಯೋಗಿಸಿಕೊಳ್ಳುತ್ತಿದೆ: ಬಿಜೆಪಿ

Guruprasad Narayana

ಧರ್ಮಶಾಲ: ರಾಹುಲ್ ಗಾಂಧಿ ಅವರನ್ನು ಮತ್ತೆ ಮುಂಚೂಣಿಗೆ ತರಲು ಕಾಂಗ್ರೆಸ್ ರೈತರ ದೈನ್ಯ ಸ್ಥಿತಿಯನ್ನು ಉಪಯೋಗಿಸಿಕೊಳ್ಳುತ್ತಿದೆ ಹಾಗೂ ಭೂಕಾಯ್ದೆಯನ್ನು ಸುಮ್ಮನೆ ವಿರೋಧಿಸುವುದಕ್ಕೆ ವಿರೋಧಿಸುತ್ತಿದೆ ಎಂದು ಬಿಜೆಪಿ ಲೋಕಸಭಾ ಸದಸ್ಯ ಶಾಂತ ಕುಮಾರ್ ಹೇಳಿದ್ದಾರೆ.

"ಕಾಂಗ್ರೆಸ್ ಪಕ್ಷ ದೇಶದ ರೈತರ ಸದ್ಯದ ದಯನೀಯ ಪರಿಸ್ಥಿತಿಯನ್ನು, ಗೈರಿನಿಂದ ಎರಡು ತಿಂಗಳ ನಂತರ ವಾಪಸ್ ಬಂದಿರುವ ರಾಹುಲ್ ಗಾಂಧಿ ಅವರ ಮರುಸ್ಥಾಪನೆಗೆ ಬಳಸುತ್ತಿದೆ. ಸರ್ಕಾರಗಳ ಕಡೆಗಣನೆ ಮತ್ತು ಹವಾಮಾನದ ವೈಪರೀತ್ಯಗಳಿಂದ ರೈತರ ಕೆಟ್ಟ ಪರಿಸ್ಥಿತಿಯನ್ನು ವಿಪಕ್ಷ ದುರ್ಬಳಕೆ ಮಾಡುತ್ತಿದೆ" ಎಂದು ಅವರು ತಿಳಿಸಿದ್ದಾರೆ.

ಸುಮ್ಮನೆ ವಿರೋಧಿಸುವುದಕ್ಕೆ ಭೂಸ್ವಾಧೀನ ಕಾಯ್ದೆಯ ಬಗ್ಗೆ ಕಾಂಗ್ರೆಸ್ ಗಲಭೆ ಎಬ್ಬಿಸುತ್ತಿದೆ ಎಂದು ಕೂಡ ಕುಮಾರ್ ದೂರಿದ್ದಾರೆ.

"ಭೂಸ್ವಾಧೀನ ಕಾಯ್ದೆಯಲ್ಲಿ ತಿದ್ದುಪಡಿ ತರಲು ಸೂಚಿಸುವಂತೆ ನರೇಂದ್ರ ಮೋದಿ ತಿಳಿಸಿದ್ದಾರೆ. ಈಗಾಗಲೇ ೯ ತಿದ್ದುಪಡಿಗಳನ್ನು ಮಾಡಲಾಗಿದೆ. ಆದರೆ ಕಾಂಗ್ರೆಸ್ ಪಟ್ಟು ಹಿಡಿದಿರುವುದೇಕೆ? ಸುಮ್ಮನೆ ವಿರೋಧಿಸುವುದಕ್ಕೆ ಭೂಸ್ವಾಧೀನ ಕಾಯ್ದೆಯ ಬಗ್ಗೆ ಕಾಂಗ್ರೆಸ್ ವಿರೋಧಿಸುತ್ತಿದೆ" ಎಂದು ಮಾಜಿ ಮುಖ್ಯಮಂತ್ರಿ ಹೇಳಿದ್ದಾರೆ.

ಧರ್ಮಶಾಲದಲ್ಲಿ ನಾಳೆಯಿಂದ ಎರಡು ದಿನ ನಡೆಯಲಿರುವ ಹಿಮಾಚಲ ಪ್ರದೇಶ ಬಿಜೆಪಿ ಕಾರ್ಯಕಾರಿಣಿ ಸಮಿತಿಯ ಸಭೆಯ ಸಿದ್ಧತೆಗಳನ್ನು ಪರಿವೀಕ್ಷಿಸಲು ಕುಮಾರ್ ದೆಹಲಿಯಿಂದ ಇಲ್ಲಿಗೆ ಬಂದಿಳಿದಿದ್ದಾರೆ.

SCROLL FOR NEXT