ವರುಣನ ಆರ್ಭಟಕ್ಕೆ ಶರಣಾಗಿರುವ ಚೆನ್ನೈಯ ಪ್ರವಾಹಪೀಡಿತ ಪ್ರದೇಶದಲ್ಲಿ ಸೇತುವೆಗಳೆರಡು ನೀರಲ್ಲಿ ಸಂಪೂರ್ಣ ಮುಳುಗಿಹೋಗಿರುವ ಒಂದು ನೋಟ.
ಚೆನ್ನೈ/ನವದೆಹಲಿ: ಹಿಂದೆಂದೂ ಕಂಡರಿಯದಂಥ ಜಲಪ್ರಳಯಕ್ಕೆ ನಡುಗಿರುವ ತಮಿಳುನಾಡಿನಲ್ಲಿ ಈಗ ಸಾಂಕ್ರಾಮಿಕ ರೋಗಗಳ ಭೀತಿ ಆವರಿಸುತ್ತಿದೆ. ಈ ಬೆಳವಣಿಗೆಯು ಇಲ್ಲಿವ ವೈದ್ಯರನ್ನು ಆತಂಕಕ್ಕೆ ನೂಕಿದೆ. ದೀರ್ಘಕಾಲ ಪ್ರವಾಹದ ನೀರಿನಲ್ಲಿ ನಡೆದ ಕಾರಣ ಹಲವರಿಗೆ ಫಂಗಲ್ ಇನ್ಫೆಕ್ಷನ್ ಆಗಿದೆ.
ಚರ್ಮರೋಗ, ಜ್ವರ, ಅತಿಸಾರ ಮತ್ತಿತರ ಸಮಸ್ಯೆಗಳೊಂದಿಗೆ ಜನ ಆಸ್ಪತ್ರೆಗಳಿಗೆ ಧಾವಿಸುತ್ತಿದ್ದಾರೆ. ಪ್ರವಾಹ ಪರಿಸ್ಥಿತಿ ಹೀಗೇ ಮುಂದುವರಿದರೆ, ರಾಜ್ಯಾದ್ಯಂತ ಸಾಂಕ್ರಾಮಿಕ ರೋಗಗಳು ವ್ಯಾಪಿಸುವ ಸಾಧ್ಯತೆಯಿದೆ. ಒಟ್ಟಿನಲ್ಲಿ ತಾತ್ಕಾಲಿಕವಾಗಿ ಹೆಚ್ಚುವರಿ ಆಸ್ಪತ್ರೆಗಳನ್ನು ನಿರ್ಮಾಣ ಮಾಡುವ ಅನಿವಾರ್ಯತೆಯಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಕಶ್ಮಲ ನೀರು, ಆಹಾರದಿಂದ ಆರೋಗ್ಯಸಮಸ್ಯೆ ಹೆಚ್ಚುತ್ತವೆ. ನೀರಿನಿಂದ ಉಂಟಾಗುವ ಕಾಯಿಲೆಗಳೇ ಹೆಚ್ಚು ಅಪಾಯಕಾರಿ. ಹೀಗಾಗಿ, ನಾವು ರೋಗಿಗಳಿಗೆ ಸ್ವಚ್ಛ ನೀರನ್ನು ಒದಗಿಸುತ್ತಿದ್ದೇವೆ ಎಂದೂ ಅವರು ಮಾಹಿತಿ ನೀಡಿದ್ದಾರೆ.
ಸಿಬ್ಬಂದಿ ಸಂಖ್ಯೆ ದುಪ್ಪಟ್ಟು: ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ(ಎನ್ಡಿಆರ್ಎಫ್ ) ಪ್ರವಾಹ ಪೀಡಿತ ಚೆನ್ನೈನಲ್ಲಿ ತನ್ನ ಸಿಬ್ಬಂದಿಯ ಸಂಖ್ಯೆಯನ್ನು ರಾತ್ರೋರಾತ್ರಿ ದುಪ್ಪಟ್ಟುಗೊಳಿಸಿದೆ. ಗುರುವಾರ ಹೆಚ್ಚುವರಿ 1200 ಸಿಬ್ಬಂದಿಯನ್ನು ಅಂದರೆ 15 ತಂಡಗಳನ್ನು ಸೇರಿಸಲಾಗಿದ್ದು, ರಕ್ಷಣಾ ಕಾರ್ಯ ಭರದಿಂದ ನಡೆದಿದೆ.
7 ತಿಂಗಳ ಗಬಿರ್sಣಿ ಸೇರಿ 100ರಷ್ಟು ಮಂದಿಯನ್ನು ರಕ್ಷಿಸಲಾಗಿದೆ. ಜತೆಗೆ, ಗುರುವಾರ ಬೆಳಗ್ಗೆ ರಕ್ಷಣೆ, ಆಹಾರ, ರೇಲ್ವೆ, ಕೃಷಿ, ಆರೋಗ್ಯ, ಟೆಲಿಕಮ್ಯೂನಿಕೇಷನ್ ಇಲಾಖೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ, ಭಾರತೀಯ ಹವಾಮಾನ ಇಲಾಖೆ ಮತ್ತು ಎನ್ ಡಿಆರ್ಎಫ್ ಅಧಿಕಾರಿಗಳು ಸಭೆ ನಡೆಸಿ, ಮುಂದಿನ ಕ್ರಮಗಳ ಬಗ್ಗೆ ಚರ್ಚಿಸಿದ್ದಾರೆ. ಇದೇ ವೇಳೆ, ರಾಜ್ಯಕ್ಕೆ ರು.5 ಸಾವಿರ ಕೋಟಿ ಪರಿಹಾರ ಮೊತ್ತ ಒದಗಿಸುವಂತೆ ಸಿಎಂ ಜಯಲಲಿತಾ ಅವರು ಪ್ರಧಾನಿ ಮೋದಿ ಅವರನ್ನು ಕೇಳಿಕೊಂಡಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos