ಮುರಳಿ ಮನೋಹರ್ ಜೋಶಿ - ಎಲ್.ಕೆ.ಆಡ್ವಾಣಿ
ನವದೆಹಲಿ: ಪಕ್ಷದ ನಾಯಕತ್ವದ ವಿರುದ್ಧ ಧ್ವನಿ ಎತ್ತಿದ್ದ ಬಿಜೆಪಿ ಹಿರಿಯ ನಾಯಕರಾದ ಎಲ್.ಕೆ.ಆಡ್ವಾಣಿ, ಮುರಳಿ ಮನೋಹರ್ ಜೋಶಿ, ಶಾಂತ ಕುಮಾರ್ ಹಾಗೂ ಯಶವಂತ್ ಸಿನ್ಹಾ ಅವರು ಗುರುವಾರ ಸಭೆ ಸೇರಿ, ಬಿಜೆಪಿ ಸಂಸದ ಕೀರ್ತಿ ಆಜಾದ್ ಅಮಾನತು ಕುರಿತು ಚರ್ಚಿಸಿದ್ದಾರೆ.
ಆಡ್ವಾಣಿ, ಜೋಶಿ, ಅಟಲ್ ಬಿಹಾರಿ ವಾಜಪೇಯಿ, ಪ್ರಧಾನಿ ನರೇಂದ್ರ ಮೋದಿ, ಹಾಗೂ ಗೃಹ ಸಚಿವ ರಾಜನಾಥ್ ಸಿಂಗ್ ಅವರನ್ನೊಳಗೊಂಡ 'ಮಾರ್ಗದರ್ಶಕ ಮಂಡಳಿ' ತಮ್ಮ ಅಮಾನತು ವಿಚಾರದಲ್ಲಿ ಮಧ್ಯ ಪ್ರವೇಶಿಸಬೇಕು ಎಂದು ಆಜಾದ್ ಅವರು ಕೇಳಿಕೊಂಡಿದ್ದರು.
ಈ ಹಿನ್ನೆಲೆಯಲ್ಲಿ ಇಂದು ಆಡ್ವಾಣಿ ಅವರು ಜೋಶಿ ಅವರ ನಿವಾಸಕ್ಕೆ ತೆರಳಿದರು. ನಂತರ ಶಾಂತ ಕುಮಾರ್ ಹಾಗೂ ಯಶವಂತ ಸಿನ್ಹಾ ಅವರು ಆಗಮಿಸಿದರು. ಜೋಶಿ ಅವರ ನಿವಾಸದಲ್ಲಿ ಬಿಜೆಪಿ ಹಿರಿಯ ನಾಯಕರು ಸುಮಾರು ಒಂದು ಗಂಟೆಗಳ ಕಾಲ ಸಭೆ ನಡೆಸಿದರು. ಈ ವೇಳೆ, ಬಿಹಾರ ಚುನಾವಣೆ ಸೋಲಿನ ನಂತರವೂ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಪಾಠ ಕಲಿತಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು ಎನ್ನಲಾಗಿದೆ. ಅಲ್ಲದೆ ಆಜಾದ್ ಅಮಾನತು ಬಗ್ಗೆಯೂ ಬಿಜೆಪಿ ಹಿರಿಯ ನಾಯಕರು ಚರ್ಚಿಸಿದರು ಎಂದು ಮೂಲಗಳು ತಿಳಿಸಿವೆ.
ಡಿಡಿಸಿಎ ಹಗರಣ ಸಂಬಂಧ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ವಿರುದ್ಧ ಬಹಿರಂಗ ಆರೋಪ ಮಾಡಿದ್ದ ಕೀರ್ತಿ ಆಜಾದ್ ಅವರನ್ನು ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ಅವರನ್ನು ನಿನ್ನೆ ಪಕ್ಷದಿಂದ ಅಮಾನತುಗೊಳಿಸಲಾಗಿತ್ತು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos