ಬೆಂಗಳೂರು: ಹಿಂದೂ ಸಮಾಜೋತ್ಸವ ಸಮಾರಂಭಕ್ಕೆ ಪೊಲೀಸರಿಂದ ನಗರ ಪ್ರವೇಶ ನಿರ್ಬಂಧಕ್ಕೊಳಗಾಗಿ ಗಡಿ ಭಾಗಕ್ಕೆ ಬಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಷಣ ಮಾಡಲು ಪ್ರಯತ್ನಿಸಿದ್ದ ವಿಶ್ವ ಹಿಂದೂ ಪರಿಷತ್ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಪ್ರವೀಣ್ಬಾಯಿ ತೊಗಾಡಿಯಾ ಅವರ ಪ್ರಯತ್ನವನ್ನು ವಿಫಲಗೊಳಿಸಿರುವ ಪೊಲೀಸರು ಅವರನ್ನು ಬಂದ ದಾರಿಯಲ್ಲೇ ವಾಪಸ್ ಕಳುಹಿಸಿದ್ದಾರೆ.
ನಿನ್ನೆ ಪ್ರವೀಣ್ ತೊಗಾಡಿಯಾ ದೇವನಹಳ್ಳಿಗೆ ಬಂದು ಅಲ್ಲಿಂದ ಹೊಸೂರಿನ ಹಿಂದೂ ಸಮಾಜೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅಲ್ಲೇ ಉಳಿದಿದ್ದರು. ಅಲ್ಲಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಷಣ ಮಾಡುವ ವ್ಯವಸ್ಥೆ ಮಾಡಲಾಗಿತ್ತು ಎನ್ನಲಾಗಿದೆ.
ವಿಡಿಯೋ ಕಾನ್ಫರೆನ್ಸ್ ಭಾಷಣವನ್ನೂ ಕೂಡ ಪೊಲೀಸರು ನಿಷೇಧಿಸಿದ್ದರು. ಹೊಸೂರಿನಲ್ಲಿದ್ದ ಪ್ರವೀಣ್ ಬಾಯಿ ತೊಗಾಡಿಯಾ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಷಣ ಮಾಡಲಿದ್ದಾರೆ ಎಂಬುದನ್ನು ಅರಿತು ಪೊಲೀಸರು ಅಲ್ಲಿಗೆ ತೆರಳಿದಾಗ ತೊಗಾಡಿಯಾ ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದೆ.
ಪೊಲೀಸರು ಅವರನ್ನು ವಾಪಸ್ ಕಳುಹಿಸಿದ್ದಾರೆ. ಅಲ್ಲಿಂದ ತೊಗಾಡಿಯಾ ನೇರವಾಗಿ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ತೆರಳಿದ್ದು, ಅಲ್ಲಿಂದ ತಮ್ಮ ಊರಿನತ್ತ ಪಯಣ ಬೆಳೆಸಿದ್ದಾರೆ ಎಂದು ತಿಳಿದು ಬಂದಿದೆ.
ಇಂದು ನಗರದ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡ ಹಿಂದೂ ಸಮಾಜೋತ್ಸವದಲ್ಲಿ ಪ್ರವೀಣ್ಬಾಯಿ ತೊಗಾಡಿಯಾ ಭಾಗವಹಿಸಬಾರದೆಂದು ನಗರ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ನಿರ್ಬಂಧ ಹಾಕಿದ್ದರು. ಫೆ.5 ರಿಂದ 11ರವರೆಗೆ ನಗರ ಪ್ರವೇಶಿಸದಂತೆ ನಿಷೇಧ ಹೇರಲಾಗಿತ್ತು.
ಇದನ್ನು ಪ್ರಶ್ನಿಸಿ ತಡೆಯಾಜ್ಞೆ ನೀಡಬೇಕೆಂದು ನ್ಯಾಯಾಲಯಕ್ಕೆ ಹೋಗಿದ್ದರು. ನ್ಯಾಯಾಲಯ ಇವರ ಮನವಿಯನ್ನು ಮಾನ್ಯ ಮಾಡಲಿಲ್ಲ. ಹಾಗಾಗಿ ಸಂಘಟಕರು ವಿಡಿಯೋ ಕಾನ್ಫರೆನ್ಸ್ ಮೂಲಕ ತೊಗಾಡಿಯಾ ಭಾಷಣ ಕೇಳಿಸುವ ವ್ಯವಸ್ಥೆ ಮಾಡುವುದಾಗಿ ಹೇಳಿದರು.
ಪೊಲೀಸರು ಪ್ರವೀಣ್ ಬಾಯಿ ತೊಗಾಡಿಯಾ ಅವರನ್ನು ವಿಚಾರಣೆಗೆ ಒಳಪಡಿಸಲು ಮುಂದಾದಾಗ ಪೊಲೀಸರು ನನ್ನನ್ನು ಬಂಧಿಸಲು ಬಂದಿದ್ದಾರೆಂದು ತಿಳಿದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು ಎಂದು ತಿಳಿದು ಬಂದಿದೆ.
ತೊಗಾಡಿಯಾ ಅವರನ್ನು ಬಂಧಿಸುವ ಪ್ರಯತ್ನ ನಾವು ಮಾಡಿಲ್ಲ ಎಂದು ಪೊಲೀಸ್ ಮೂಲಗಳು ಸ್ಪಷ್ಟಪಡಿಸಿವೆ. ಆದರೆ, ಇದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ತೊಗಾಡಿಯಾ, ಹೈಕೋರ್ಟ್ ಆದೇಶ ಪಾಲಿಸಿದ್ದೇನೆ. ನಾನು ನಗರ ಪ್ರವೇಶ ಮಾಡಿಲ್ಲ. ಆದರೂ ಪೊಲೀಸರು ಏಕೆ ಬಂದಿದ್ದಾರೆ ಎಂದು ಕಿಡಿ ಕಾರಿದ್ದಾರೆ ಎಂದು ಮೂಲಗಳು ತಿಳಿಸಿವೆ.