ಪ್ರಧಾನ ಸುದ್ದಿ

ದೆಹಲಿಯಲ್ಲಿ ಮತದಾರರನ್ನು ಸೆಳೆಯಲು ತಾರೆಯರನ್ನು ಪ್ರಚಾರಕ್ಕಿಳಿಸಿದ ಬಿಜೆಪಿ

Guruprasad Narayana

ನವದೆಹಲಿ: ಮುಂಬರುತ್ತಿರುವ ದೆಹಲಿ ವಿಧಾನಸಭಾ ಚುನಾವಣೆಗಳಲ್ಲಿ ಮತದಾರರನ್ನು ಸೆಳೆಯಲು ದೇಶದ ರಾಜಧಾನಿಯಲ್ಲಿ ಪ್ರಚಾರ ಸಭೆಗಳನ್ನು ನಡೆಸಲಿರುವ ಬಿಜೆಪಿ ಪಕ್ಷ ತಾರಾ ಲೋಕಸಭಾ ಸದಸ್ಯರಾದ ಹೇಮ ಮಾಲಿನಿ, ಶತುಘ್ನ ಸಿನ್ಹಾ, ವಿನೋದ್ ಖನ್ನ ಮತ್ತು ಸ್ಮೃತಿ ಇರಾನಿ ಇವರುಗಳಿಗೆ ದೆಹಲಿಯಲ್ಲಿ ಬೀಡುಬಿಟ್ಟು ಹೆಚ್ಚೆಚ್ಚು ಪ್ರಚಾರಸಭೆಗಳನ್ನು ನಡೆಸುವಂತೆ ಸೂಚಿಸಿದೆ.

ಬಿಜೆಪಿ ಹಿರಿಯ ಮುಖಂಡರೊಬ್ಬರ ಪ್ರಕಾರ, ಪಕ್ಷ ಇಲ್ಲಿಯವರೆಗೂ ೧೮ ತಾರಾ ಪ್ರಚಾರಕರನ್ನು ಪಟ್ಟಿ ಮಾಡಿದ್ದು, ಈ ನಡೆ ಮತದಾರರನ್ನು ಸೆಳೆಯಲಿದೆ ಎಂದಿದ್ದಾರೆ. ಈ ಪಟ್ಟಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಕೂಡ ಇದ್ದಾರೆ.

"ಆಮ್ ಆದ್ಮಿ ಪಕ್ಷದ ಮುಖಂಡ ಅರವಿಂದ್ ಖೇಜ್ರಿವಾಲ್ ಅವರ ಪ್ರಚಾರ ಸಭೆಗಳನ್ನು ಮೀರಿಸಲು ಪಕ್ಷ ಸನ್ನದ್ಧವಾಗಿದ್ದು, ನಮ್ಮ ತಾರಾ ಪ್ರಚಾರಕರು ಹೆಚ್ಚಿನ ಸಂಖ್ಯೆಯಲ್ಲಿ ಮತದಾರರನ್ನು ಸೆಳೆಯಲಿದ್ದಾರೆ" ಎಂದು ಬಿಜೆಪಿ ಮುಖಂಡ ತಿಳಿಸಿದ್ದಾರೆ.

ಈಶಾನ್ಯ ದೆಹಲಿಯ ಲೋಕಸಭಾ ಸದಸ್ಯ ಹಾಗೂ ಭೋಜ್ ಪುರಿ ಗಾಯಕ ಮನೋಜ್ ತಿವಾರಿ ಕೂಡ ಈ ಪಟ್ಟಿಯಲ್ಲಿದ್ದಾರೆ ಎಂದು ತಿಳಿದು ಬಂದಿದೆ. ೧೬ ವರ್ಷದ ನಂತರ ಅಧಿಕಾರಕ್ಕೆ ಹಿಂದಿರುಗಲು ಹಾತೊರೆಯುತ್ತಿರುವ ಬಿಜೆಪಿ ಪಕ್ಷ ತನ್ನೆಲ್ಲ ಶಕ್ತಿಯನ್ನು ಈ ಚುನಾವಣೆಗೆ ತೊಡಗಿಸಲಿದೆ. ಜನವರಿ ೧೦ ರಂದು ರಾಮಲೀಲ ಮೈದಾನದಲ್ಲಿ ಪ್ರಧಾನಿ ಮೋದಿ ಅವರು ಬೃಹತ್ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡುವುದರೊಂದಿಗೆ ಪ್ರಚಾರಕ್ಕೆ ಅಧಿಕೃತ ಚಾಲನೆ ಸಿಗಲಿದೆ ಎಂದು ಮೂಲಗಳು ತಿಳಿಸಿವೆ.

SCROLL FOR NEXT