ಪ್ರಧಾನ ಸುದ್ದಿ

ಕರ್ನಾಟಕ ವೈದ್ಯಕೀಯ ವಿಧೇಯಕಕ್ಕೆ ರಾಷ್ಟ್ರಪತಿ ಅಂಕಿತ, ವೈದ್ಯರಿಗೆ 1 ವರ್ಷ ಗ್ರಾಮೀಣ ಸೇವೆ ಕಡ್ಡಾಯ

Lingaraj Badiger

ನವದೆಹಲಿ: ಕರ್ನಾಟಕ ವೈದ್ಯಕೀಯ ಸೇವಾ ತರಬೇತಿ ವಿಧೇಯಕಕ್ಕೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಬುಧವಾರ ಅಂಕಿತ ಹಾಕಿದ್ದು, ಇನ್ನು ಮುಂದೆ ಎಂಬಿಬಿಎಸ್ ಪದವಿ ಮುಗಿದ ಕೂಡಲೇ ವೈದ್ಯರು ಒಂದು ವರ್ಷ ಗ್ರಾಮೀಣ ಸೇವೆ ಮಾಡುವುದು ಕಡ್ಡಾಯವಾಗಲಿದೆ.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಈ ವಿಧೇಯಕಕ್ಕೆ ರಾಜ್ಯದ ಉಭಯ ಸದನದಲ್ಲಿ ಅನುಮೋದಿಸಿ ರಾಷ್ಟ್ರಪತಿಗಳ ಅಂಕಿತಕ್ಕಾಗಿ ಕಳುಹಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ರಾಷ್ಟ್ರಪತಿಗಳು ಇಂದು ತಮ್ಮ ಅಂಕಿತ ಹಾಕಿದ್ದು, ಪ್ರಸಕ್ತ ಸಾಲಿನಲ್ಲಿಯೇ ಜಾರಿಗೆ ಬರಲಿದೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ವೈದ್ಯಕೀಯ ಸಚಿವ ಶರಣ ಪ್ರಕಾಶ್ ಪಾಟೀಲ್ ಅವರು, ಎಂಬಿಬಿಎಸ್ ಮುಗಿದ ತಕ್ಷಣ ಗ್ರಾಮೀಣ ಪ್ರದೇಶದಲ್ಲಿ ಒಂದು ವರ್ಷ ಸೇವೆ ಸಲ್ಲಿಸಬೇಕು. ಇಲ್ಲವಾದರೆ ಪದವಿ ನೀಡಬಾರದು ಎಂಬುದು ಕಾನೂನು. ಈ ವಿಧೇಯಕಕ್ಕೆ ಇಂದು ರಾಷ್ಟ್ರಪತಿಗಳು ಅಂಕಿತ ಹಾಕಿದ್ದಾರೆ ಎಂದರು.

ಕರ್ನಾಟಕದಲ್ಲಿ ಓದಿದ ಯಾವುದೇ ರಾಜ್ಯದ ವಿದ್ಯಾರ್ಥಿಗಳಿಗೂ ಗ್ರಾಮೀಣ ಸೇವೆ ಕಡ್ಡಾಯವಾಗಿದ್ದು, ಇನ್ನು ಮುಂದೆ ಗ್ರಾಮೀಣ ಭಾಗದಲ್ಲಿ ವೈದ್ಯರ ಕೊರೆತೆ ನೀಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವಿಧೇಯಕದಲ್ಲೇನಿದೆ?
ಕರ್ನಾಟಕ ರಾಜ್ಯದಲ್ಲಿ ಎಂಬಿಬಿಎಸ್ ಪದವಿ ಪಡೆದ ಎಲ್ಲಾ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ಅವಧಿ ಪೂರ್ಣಗೊಂಡ ಬಳಿಕ ರಾಜ್ಯದಲ್ಲಿ ಒಂದು ವರ್ಷಗಳ ಕಾಲ ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ಕಡ್ಡಾಯವಾಗಿ ಸೇವೆ ಸಲ್ಲಿಸಬೇಕು ಎಂಬುದು ವಿಧೇಯಕದ ಪ್ರಮುಖ ಅಂಶವಾಗಿದೆ. ಬೇರೆ ರಾಜ್ಯಗಳಿಂದ ಬಂದು ಅಭ್ಯಸಿಸುವ ವಿದ್ಯಾರ್ಥಿಗಳಿಗೂ ಇದು ಅನ್ವಯವಾಗಲಿದ್ದು, ಅವರೂ ಕೂಡ ಈ ನಿಯವನ್ನು ಪಾಲಿಸಲೇಬೇಕಿದೆ.

ಇನ್ನು ರಾಜ್ಯದಲ್ಲಿ ಕಳೆದ ಹಲವು ವರ್ಷಗಳಿಂದಲೂ ಕೂಡ ವೈದ್ಯರ ಕೊರತೆ ಇದ್ದು, ಈ ಮೂಲಕ ವೈದ್ಯಕೀಯ ತೊಂದರೆಗಳನ್ನು ನಿವಾರಿಸಬುದು ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಅಲ್ಲದೆ ರಾಜ್ಯದಿಂದ ವರ್ಷವೊಂದಕ್ಕೆ 5000ಕ್ಕೂ ಹೆಚ್ಚು ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣ ಪಡೆದು ನಿರ್ಗಮಿಸುತ್ತಿದ್ದಾರೆ ಎಂದು ಹೇಳಲಾಗಿದೆ.

SCROLL FOR NEXT