ಪ್ರಧಾನ ಸುದ್ದಿ

ಕಸ್ತೂರಿ ರಂಗನ್ ಕುರಿತ ವರದಿ ಸಲ್ಲಿಸಿದ್ದೇವೆ: ರಮಾನಾಥ್ ರೈ

Srinivasamurthy VN

ಬೆಂಗಳೂರು: ಕಸ್ತೂರಿ ರಂಗನ್ ವರದಿ ಅನುಷ್ಠಾನದ ಬಗ್ಗೆ ರಾಜ್ಯ ಸರ್ಕಾರ ತನ್ನ ವರದಿಯನ್ನು ಈಗಾಗಲೇ ಕಳುಹಿಸಿಕೊಟ್ಟಿದೆ ಎಂದು ಅರಣ್ಯ ಸಚಿವ ಬಿ. ರಮಾನಾಥ್ ರೈ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಈ ಬಗ್ಗೆ ಗ್ರಾಮ ಸಭೆಗಳನ್ನು ನಡೆಸಿ ಮಾಹಿತಿ ಸಂಗ್ರಹಿಸಿದೆ. ತಜ್ಞರ ಜತೆ ಸಮಾಲೋಚನೆ ನಡೆಸಿ ಸಚಿವ ಸಂಪುಟ ಸಭೆಯ ಒಪ್ಪಿಗೆ ಪಡೆದು ಏ.24 ರಂದೇ ವರದಿ ಕಳುಹಿಸಿದೆ ಎಂದು ಹೇಳಿದರು.

ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಯಾವ ಅರ್ಥದಲ್ಲಿ ಈ ಹೇಳಿಕೆ ನೀಡಿದ್ದಾರೆ ಎಂಬುದು ನನಗೆ ಗೊತ್ತಿಲ್ಲ ಕೇರಳ ಮತ್ತು ಕರ್ನಾಟಕ ರಾಜ್ಯಗಳು ಮಾತ್ರ ಕೇಂದ್ರಕ್ಕೆ ಇದುವರೆಗೆ ವರದಿ ಕಳುಹಿಸಿವೆ. ಪರಿಸರ ಸೂಕ್ಷ್ಮ ವಲಯದ ವರದಿಯನ್ನು ಇನ್ನೂ ಕಳುಹಿಸಿಲ್ಲ. ಇದನ್ನೇ ತಪ್ಪಾಗಿ ಭಾವಿಸಿರಬೇಕು ಅಥವಾ ಗಮನಕ್ಕೆ ಬಾರದೇ ಇರಬಹುದು. ರಾಜ್ಯ ಸರ್ಕಾರ ತನ್ನ ಜವಾಬ್ದಾರಿ ನಿಭಾಯಿಸಿದೆ ಎಂದರು.

ಏಳು ನೂರು ಕೋಟಿ ಕನಸು, ಒಂದೇ ಪೃಥ್ವಿ ಕಾಳಜಿಯಿಂದ ಬಳಸಿ ಎಂಬ ವಿಶ್ವಸಂಸ್ಥೆಯ ಘೋಷವಾಕ್ಯದೊಂದಿಗೆ ಜೂನ್ 5 ರಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಹಯೋಗದೊಂದಿಗೆ ಜೂನ್ 5 ರಂದು ವಿಶ್ವ ಪರಿಸರ ದಿನ ಆಚರಿಸಲಾಗುವುದು. ಸಿಎಂ ಸಿದ್ದರಾಮಯ್ಯ ಅವರು ಕಾರ್ಯಕ್ರಮ ಉದ್ಗಾಟಿಸಲಿದ್ದು, ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದಗೊಡ, ರಸಗೊಬ್ಬರ ಸಚಿವ ಅನಂತ್ ಕುಮಾರ್, ಗೃಹ ಸಚಿವ ಕೆ.ಜೆ.ಜಾರ್ಜ್, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ದಿನೇಶ್ ಗುಂಡೂರಾವ್, ಕೃಷಿ ಸಚಿವ ಕೃಷ್ಣ ಭೈರೇಗೌಡ, ಯುವಜನ ಸೇವಾ ಸಚಿವ ಅಭಯ್ ಚಂದ್ರ ಜೈನ್, ಸಂಸದ ಪಿ.ಸಿ.ಮೋಹನ್, ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಡಾ.ವಾಮನ್ ಆಚಾರ್ಯ ಮೊದಲಾದವರು ಭಾಗವಹಿಸುತ್ತಾರೆ ಎಂದರು.

ಪರಿಸರ ಪ್ರಶಸ್ತಿ: ಇದರ ಜತೆಗೆ ಪ್ರಸಕ್ತ ಸಾಲಿನ ಪರಿಸರ ಪ್ರಶಸ್ತಿಯನ್ನು ರಾಜ್ಯ ಸರ್ಕಾರ ಘೋಷಿಸಿದೆ. ದಕ್ಷಿಣ ವಲಯದಿಂದ ಪರಿಸರ ಸಾಹಿತಿ ಸಿ. ಲಕ್ಷ್ಮಣ್, ಉತ್ತರ ವಲಯದಿಂದ ಡಾ. ಆರ್.ಪರಿಮಳ, ಮಲೆನಾಡು ವಿಭಾಗದಿಂದ ಡಾ.ಎಸ್. ಹರೀಶ್ ಜೋಷಿ, ದಕ್ಷಿಣ ವಲಯ ಸಂಸ್ಥೆ ವಿಭಾಗದಲ್ಲಿ ಸಾಲಿಡ್ ವೇಸ್ಟ್ ಮ್ಯಾನೇಜ್ಮೆಂಟ್ ರೌಂಡ್ ಟೇಬಲ್ ಬೆಂಗಳೂರು, ಉತ್ತರ ವಲಯದಲ್ಲಿ ಬಂಟನೂರು ಗ್ರಾಮ ಅರಣ್ಯ ಸಮಿತಿ ಮುಧೋಳ ಮಲೆನಾಡು ವಿಭಾಗದಲ್ಲಿ ಇಕೋ ಡೆವಲಪ್ ಮೆಂಟ್ ಕಮಿಟಿ ಅವುರಾಲಿ,  ಫಾಂಸೋಲಿ ವನ್ಯಜೀವಿ ವಲಯ ದಾಂಡೇಲಿಗೆ ನೀಡಲಾಗಿದೆ.

ಪ್ರಶಸ್ತಿಯು ರು.1ಲಕ್ಷ ನಗದು ಹಾಗೂ ಸ್ಮರಣಿಕೆಯನ್ನು ಒಳಗೊಂಡಿರುತ್ತದೆ ಎಂದರು.  ಪತ್ರಿಕಾಗೋಷ್ಠಿಯಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಡಾ. ವಾಮನ್ ಆಚಾರ್ಯ, ಅರಣ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮದನ್‍ಗೋಪಾಲ್ ಉಪಸ್ಥಿತರಿದ್ದರು.

SCROLL FOR NEXT