ಪ್ರಧಾನ ಸುದ್ದಿ

ಟಿಪ್ಪುವನ್ನು ಹಿಟ್ಲರ್'ಗೆ ಹೋಲಿಕೆ ಮಾಡಿದ ಚಿದಾನಂದ ಮೂರ್ತಿ

Manjula VN

ಬೆಂಗಳೂರು: ಟಿಪ್ಪು ಸುಲ್ತಾನ್ ಅವರನ್ನು ಹಿಟ್ಲರ್'ಗೆ ಹೋಲಿಕೆ ಮಾಡುವ ಮೂಲಕ ಸಾಹಿತಿ ಚಿದಾನಂದ ಮೂರ್ತಿ ಅವರು ಗುರುವಾರ ಹೊಸ ವಿವಾದವೊಂದನ್ನು ಸೃಷ್ಟಿಸಿದ್ದಾರೆ,

ಈ ಕುರಿತಂತೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ಟಿಪ್ಪುವಿಗೂ ಹಿಟ್ಲರ್ ಗೂ ಯಾವುದೇ ವ್ಯತ್ಯಾಸವಿಲ್ಲ. ಈ ಹಿಂದೆ ಜರ್ಮನ್ ರಾಜಕಾರಣಿ ಹಿಟ್ಲರ್ ಅವರು ಸಾಕಷ್ಟು ಹಿಂದುಗಳನ್ನು ಹತ್ಯೆ ಮಾಡಿದ್ದರು. ಅದರಂತೆಯೇ ಟಿಪ್ಪು ಸಹ ಹಲವರನ್ನು ಹತ್ಯೆ ಮಾಡಿದ್ದಾರು. ಹಿಂದೂ ದೇವಾಲಯಗಳನ್ನು ನಾಶಪಡಿಸಿ ಮಸೀದಿಗಳನ್ನು ಕಟ್ಟಿದ್ದರು ಎಂದು ಹೇಳಿದ್ದಾರೆ.

ಟಿಪ್ಪು ಸುಲ್ತಾನ್ ಅವರ ಜನ್ಮದಿನವನ್ನು ಆಚರಣೆ ಮಾಡುವ ರಾಜ್ಯ ಸರ್ಕಾರದ ನಿರ್ಧಾರದ ವಿರುದ್ಧ ಕಿಡಿಕಾರಿದ ಅವರು, ಟಿಪ್ಪು ಸುಲ್ತಾನ್ ಅವರ ಜನ್ಮದಿನವನ್ನು ರಾಜ್ಯದಲ್ಲಿ ಆಚರಣೆ ಮಾಡಿದರೆ ಅದು ನಿಜಕ್ಕೂ ಹಿಂದೂ ಜನರಿಗೆ ಅವಮಾನ ಮಾಡಿದಂತೆ. ರಾಜ್ಯ ಸರ್ಕಾರ ತನ್ನ ನಿರ್ಧಾರವನ್ನು ಹಿಂಪಡೆಯಬೇಕಿದೆ ಎಂದು ಹೇಳಿದ್ದಾರೆ.

ನಂತರ ವಿಮರ್ಶಕ ಕೆ.ಎಸ್.ಭಗವಾನ್ ಅವರು ಹಿಂದೂಗಳ ವಿರುದ್ಧ ನೀಡಿದ್ದ ಹೇಳಿಕೆ ಕುರಿತಂತೆ ವಾಗ್ದಾಳಿ ನಡೆಸಿದ ಅವರು, ಭಗವಾನ್ ಅವರು ಹಿಂದುತ್ವ ಹಾಗೂ ಹಿಂದು ದೇವರುಗಳ ಬಗ್ಗೆಯೂ ಕೆಟ್ಟದಾಗಿ ಅವಹೇಳನಕಾರಿಯಾಗಿ ಮಾತನಾಡಿದ್ದರು. ಭಗವಾನ್ ಅವರು ತಮ್ಮ ಮಾನಸಿಕ ಸಮತೋಲನವನ್ನು ಕಳೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗೋಮಾಂಸ ಹೇಳಿಕೆ ಕುರಿತಂತೆ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡುವ ಹೇಳಿಕೆಯನ್ನು ನೀಡಿದ್ದಾರೆ. ಅವರಿಗೆ ಮಾಂಸ ತಿನ್ನಲೇಬೇಕು ಎನಿಸಿದರೆ ನರಮಾಂಸವನ್ನು ತಿನ್ನಲಿ. ಮುಖ್ಯಮಂತ್ರಿಗಳು ನಿಜಕ್ಕೂ ಒಬ್ಬ ಹಿಂದೂವಾಗಿದ್ದರೆ ಈ ರೀತಿಯ ಹೇಳಿಕೆ ನೀಡುತ್ತಿರಲಿಲ್ಲ. ಹೇಳಿಕೆಯನ್ನು ಕೂಡಲೇ ಸಿದ್ದರಾಮಯ್ಯ ಅವರು ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.

SCROLL FOR NEXT