ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು, ಇವತ್ತು ಭಾರತದಲ್ಲಿ ಪ್ರತಿಭಟನೆ ನಡೆಸೋದು ದೇಶದ್ರೋಹವಾಗುತ್ತೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇಂದು ಲೋಕಸಭೆಯಲ್ಲಿ ಅಸಹಿಷ್ಣುತೆ ಕುರಿತ ಚರ್ಚೆಯ ವೇಳೆ ಮಾತನಾಡಿಡ ರಾಹುಲ್, ಗುಜರಾತ್ ನಲ್ಲಿ ಪಟೇಲ್ ಸಮುದಾಯದ ಮೀಸಲಾತಿಗಾಗಿ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಆದಕ್ಕೆ ಸರ್ಕಾರದಿಂದ ದೊರೆತ ಪ್ರತಿಕ್ರಿಯೆ ಏನು ಗೊತ್ತಾ? 20 ಸಾವಿರ ಎಫ್ ಐಆರ್ ದಾಖಲು ಮತ್ತು ದೇಶದ್ರೋಹದ ಆರೋಪ. ಹಾಗಾಗಿ ಇವತ್ತಿನ ಭಾರತದಲ್ಲಿ ಪ್ರತಿಭಟನೆ ನಡೆಸುವುದೆಂದರೆ ಅದರ ಅರ್ಥ ದೇಶದ್ರೋಹದ ಆರೋಪವನ್ನು ಮೈಮೇಲೆ ಎಳೆದುಕೊಂಡಂತೆ ಎಂದು ರಾಹುಲ್ ಕಿಡಿಕಾರಿದರು.
ನಾನು ಪ್ರಧಾನಿ ಮೋದಿ ಅವರಲ್ಲಿ ಮನವಿ ಮಾಡಿಕೊಳ್ಳುವುದೇನೆಂದರೆ, ನೆರೆಯ ಪಾಕಿಸ್ತಾನದಿಂದ ತಪ್ಪು ಪಾಠವನ್ನು ಕಲಿಯಬೇಡಿ. ಏಕೆಂದರೆ, ಭಾರತದ ಅತಿ ದೊಡ್ಡ ಶಕ್ತಿ ಯಾವುದೆಂದರೆ ಅದು ಸಹಿಷ್ಣುತೆ, ಪಾಕಿಸ್ತಾನದ ಅತಿ ದೊಡ್ಡ ದೌರ್ಬಲ್ಯವೇ ಅಸಹಿಷ್ಣುತೆ ಎಂದು ರಾಹುಲ್ ಈ ಸಂದರ್ಭದಲ್ಲಿ ಹೇಳಿದರು.
ನಿಮ್ಮದೇ ಸಂಪುಟದ ಸಚಿವರೊಬ್ಬರು(ವಿಕೆ ಸಿಂಗ್) ದಲಿತ ಸಮುದಾಯದ ಮಕ್ಕಳನ್ನು ನಾಯಿ ಮರಿಗಳಿಗೆ ಹೋಲಿಸಿದರು. ಆದರೆ ಅಸಹಿಷ್ಣುತೆ ಬಗ್ಗೆ ಯಾಕೆ ಆಕ್ಷೇಪ ಎತ್ತಲಿಲ್ಲ ಎಂದು ಪ್ರಶ್ನಿಸಿದ ರಾಹುಲ್ ಗಾಂಧಿ, ಪ್ರಧಾನಿಯವರು ಅಸಹಿಷ್ಣುತೆ ಕುರಿತು ಮಾತನಾಡುತ್ತ ಎಲ್ಲ ವಿಷಯವನ್ನು ಹೇಳಿದ್ದಾರೆ. ಆದರೆ ಅದರಲ್ಲಿ ಜನಸಾಮಾನ್ಯರ ಬಗ್ಗೆ ಕಳಕಳಿ ಇಲ್ಲ, ವಿಕೆ ಸಿಂಗ್ ಅವರಂತಹವರ ಅಸಹಿಷ್ಣುತೆ ಕುರಿತ ಹೇಳಿಕೆಗೆ ಎಚ್ಚರಿಕೆಯೂ ಇಲ್ಲ ಎಂದು ಟೀಕಿಸಿದರು.