ನವದೆಹಲಿ: ವಾರ್ಷಿಕ ಆರ್ಟಿಐ ಸಮ್ಮೇಳನದ ವಿಚಾರ ದಲ್ಲೂ ಕೇಂದ್ರದ ಮೋದಿ ಸರ್ಕಾರ ಎಡವಿದೆ. ಮಾಹಿತಿ ಹಕ್ಕು ಹೋರಾಟಗಾರರ ನಿವಾಸಕ್ಕೆ ಗುಪ್ತಚರ ಅಧಿಕಾರಿಗಳನ್ನು ಕಳುಹಿಸಿ, ಪರಿಶೀಲನೆ ನಡೆಸಿದ ಬಳಿಕ, ಬೆರಳೆಣಿಕೆಯಷ್ಟು ಮಂದಿಗೆ ಆಹ್ವಾನ ನೀಡಿರುವುದು ವಿವಾದಕ್ಕೆ ಕಾರಣವಾಗಿದೆ.
ಈ ಕ್ರಮದಿಂದ ಬೇಸತ್ತ 7 ಮಂದಿ ಆಹ್ವಾನಿತರು, ಸಮ್ಮೇಳನ ಬಹಿಷ್ಕರಿಸುವುದಾಗಿ ಘೋಷಿಸಿದ್ದಾರೆ. ಪಾರದರ್ಶಕ ಕಾನೂನು `ಮಾಹಿತಿ ಹಕ್ಕು ಕಾಯ್ದೆ' ಜಾರಿಗೆ ಬಂದು ಇದೀಗ 10 ವರ್ಷ ತುಂಬುತ್ತಿದೆ. ಈ ಹಿನ್ನೆಲೆಯಲ್ಲಿ ದೆಹಲಿಯ ವಿಜ್ಞಾನ ಭವನದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಉದ್ಘಾಟನಾ ಭಾಷಣ ಮಾಡಲಿದ್ದಾರೆ. ಆದರೆ, ಪ್ರತಿ ವರ್ಷ ಎಲ್ಲ ಆರ್ಟಿಐ ಹೋರಾಟಗಾರರೂ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದು, ಈ ಬಾರಿ ಭದ್ರತಾ ನೆಪವೊಡ್ಡಿ ಕೇವಲ 10 ಮಂದಿಗಷ್ಟೇ ಆಹ್ವಾನ ನೀಡಲಾಗಿದೆ. ಇದರಿಂದ ಬೇಸತ್ತಿರುವ ಲೋಕೇಶ್ ಬಾತ್ರಾ, ವೆಂಕಟೇಶ್ ನಾಯಕ್, ಅಂಜಲಿ ಭಾರದ್ವಾಜ್, ನಿಖಿಲ್ ಡೇ, ಅರುಣಾ ರಾಯ್ ಸೇರಿದಂತೆ 7 ಮಂದಿ ಆಹ್ವಾನಿತರೂ ಶುಕ್ರವಾರದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಘೋಷಿಸಿದ್ದಾರೆ. ಹೋರಾಟಗಾರರ ಹಿನ್ನೆಲೆ ಪರಿಶೀಲಿಸಿರುವ ಅಧಿಕಾರಿಗಳು, ಭದ್ರತೆ ಕಾರಣ ಹೇಳಿ ಹಲವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ. ಇಷ್ಟು ವರ್ಷಗಳಲ್ಲಿಲ್ಲದ ಪರಿಶೀಲನೆ ಈಗೇಕೆ ನಡೆಯುತ್ತಿದೆ? ಇಂಥ ಕ್ರಮದ ಅಗತ್ಯವೇನಿತ್ತು ಎಂದು ಅವರು ಪ್ರಶ್ನಿಸಿದ್ದಾರೆ.
ಎಡವಟ್ಟಿನ ಕ್ರಮ
-ಮನೆಗೆ ತೆರಳಿದ ಐ.ಬಿ. ಅಧಿಕಾರಿಗಳಿಂದ ಮಾಹಿತಿಸಂಗ್ರಹಣೆ
-ಏಳು ಮಂದಿ ಮಾಹಿತಿ ಹೋರಾಟಗಾರಿಂದ ಇಂದಿನ ಕಾರ್ಯಕ್ರಮಕ್ಕೆ ಬಹಿಷ್ಕಾರ
ಆರ್ಟಿಐ ಕಾರ್ಯಕರ್ತರ ಆಯ್ಕೆಗೂ ಮುನ್ನ ಅವರ ಪೂರ್ವಾಪರ ವಿಚಾರಿಸುವುದು, ಅವರು ಯಾವ ಸಿದ್ಧಾಂತ, ತತ್ವಗಳಲ್ಲಿ ನಂಬಿಕೆ ಹೊಂದಿದವರು ಎಂಬುದನ್ನು ಪರಿಶೀಲಿಸುವುದು ತಪ್ಪು. ಆಯ್ಕೆಯಲ್ಲಿ ಪಾರದರ್ಶ ಕತೆ ಇಲ್ಲ ಎಂಬ ಸಂಶಯ ಬರುತ್ತಿದೆ. ಇದೊಂದು ಸ್ವಘೋಷಿತ ಆರ್ಟಿಐ ಕಾರ್ಯಕರ್ತರ ಸಮಾವೇಶ ಇರಬಹುದು ಎಂಬ ಭಾವನೆಯೂ ಇದೆ. ನನಗೆ ಸಮಾವೇಶದ ಯಾವುದೇ ಮಾಹಿತಿ ಇಲ್ಲ.
- ಭೀಮಪ್ಪ ಗಡಾದ ಮಾಹಿತಿ ಹಕ್ಕು ಕಾರ್ಯಕರ್ತ
ಸಮ್ಮೇಳನದಲ್ಲಿ ಭಾಷಣ ಮಾಡುವಂಥ ಯಾವ ಸಾಧನೆಯನ್ನು ಮಾಡಿದ್ದಾರೆ ಪ್ರಧಾನಿ ಮೋದಿ? ಹಳ್ಳಿಹಳ್ಳಿಗಳಲ್ಲಿ ಹೋರಾಡುತ್ತಿರುವ ಆರ್ಟಿಐ ಕಾರ್ಯಕರ್ತರ ರಕ್ಷಣೆ ಹಾಗೂ ಅವರ ಧ್ಯೇಯಗಳನ್ನು ಬೆಂಬಲಿಸುವ ಯಾವ ಕೆಲಸವೂ ಕೇಂದ್ರದಿಂದ ನಡೆಯುತ್ತಿಲ್ಲ. ಹೀಗಿರುವಾಗ, ಕೇವಲ ಭಾಷಣಕ್ಕೆ ಸೀಮಿತವಾಗುವ ಅವರ ಹಾಜರಾತಿಯನ್ನು ಒಪ್ಪಲಾಗದು.
- ರುದ್ರಪ್ಪ ವಕೀಲರು, ಆರ್ಟಿಐ ಕಾರ್ಯಕರ್ತ