ಪ್ರಧಾನ ಸುದ್ದಿ

ಮೋದಿ ತಮ್ಮ ಸಿದ್ಧಾಂತವನ್ನು ಜನರ ಮೇಲೆ ಹೇರುತ್ತಿದ್ದಾರೆ: ಸೋನಿಯಾ ಗಾಂಧಿ

Shilpa D

ಬಕ್ಸರ್‌/ಬಿಹಾರ : ನರೇಂದ್ರ ಮೋದಿ  ತನ್ನ ಸಿದ್ಧಾಂತವನ್ನು ಜನರ ಮೇಲೆ ಹೇರಲು ಹೊರಟಿದ್ದಾರೆ ಎಂದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಆರೋಪಿಸಿದ್ದಾರೆ.

ಬಿಹಾರದಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇದ್ದುದರಿಂದಲೇ ಮೋದಿ ಅವರು ದೇಶದ ಪ್ರಧಾನಿಯಾದರು. ಆದರೆ, ಈಗ ಅವರ ಸರ್ಕಾರದ ನೀತಿಗಳು ಪ್ರಜಾಪ್ರಭುತ್ವ ವಿರೋಧಿಯಾಗಿವೆ. ಇದು ಅತ್ಯಂತ ಕಳವಳಕಾರಿ ಸಂಗತಿ ಎಂದು ಅವರು ಆರೋಪಿಸಿದರು.

ದೇಶದಲ್ಲಿ ಕೋಮು ದ್ವೇಷ ಬಿತ್ತಲಾಗುತ್ತಿದ್ದು ಅಮಾಯಕರು ಬಲಿಯಾಗುತ್ತಿದ್ದಾರೆ. ಬುದ್ಧಿಜೀವಿಗಳು ಜೀವ ಭಯದಲ್ಲಿ ಬದುಕುವ ವಾತಾವರಣ ಸೃಷ್ಟಿಯಾಗಿದೆ ಎಂದು ಸೋನಿಯಾ ಗಾಂಧಿ ಆತಂಕ ವ್ಯಕ್ತ ಪಡಿಸಿದರು.

ಚುನಾವಣೆ ವೇಳೆ ಮೋದಿ ರೈತರು, ಮಹಿಳೆಯರು ಹಾಗೂ ಯುವ ಜನತೆಗೆ ನೀಡಿದ್ದ ಭರವಸೆಗಳನ್ನು ಈಡೇರಿಸಲು ವಿಫಲರಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದ ಸೋನಿಯಾ ಗಾಂಧಿ, ಅಗತ್ಯ ವಸ್ತುಗಳ ಬೆಲೆ ಹಾಗೂ ತರಕಾರಿ ಬೆಲೆಗಳು ಗಗನಮುಖಿಯಾಗಿದ್ದು ಅವುಗಳನ್ನು ನಿಯಂತ್ರಿಸಲು ಮೋದಿ ವಿಫಲರಾಗಿದ್ದಾರೆ ಎಂದ ಆಪಾದಿಸಿದರು.



SCROLL FOR NEXT