ಲಕನೌ: ವಾರಣಾಸಿಯ ಹನುಮಾನ್ ದೇವಾಲಯದಲ್ಲಿ ನಿಗದಿಯಾಗಿರುವ ಪಾಕಿಸ್ತಾನಿ ಗಜಲ್ ಗಾಯಕ ಗುಲಾಂ ಅಲಿ ಅವರ ಪ್ರದರ್ಶನವನ್ನು ಕೆಲವರು ವಿರೋಧಿಸುತ್ತಿರುವುದು ದುರದೃಷ್ಟಕರ ಎಂದಿದ್ದಾರೆ ಖ್ಯಾತ ಹಿಂದೂಸ್ತಾನಿ ಗಾಯಕ ಜಸರಾಜ್.
ಉತ್ತರ ಪ್ರದೇಶದ ವಾರಣಾಸಿಯಲ್ಲಿ ನಡೆಯಲಿರುವ ಆರು ದಿನಗಳ 'ಸಂಕಟಮೋಚನ್ ಸಂಗೀತ ಸಮಾರೋಹ'ದ ಮೊದಲನೇ ದಿನವಾದ ಮಂಗಳವಾರ ಗುಲಾಂ ಅಲಿ ಪ್ರದರ್ಶನ ನೀಡಲಿದ್ದಾರೆ.
"ಸಂಗೀತಕ್ಕೆ ಯಾವುದೇ ಗಡಿಗಳಿಲ್ಲ" ಎಂದಿರುವ ಜಸರಾಜ್, ಕೆಲವು ಹಿಂದು ಸಂಘಟನೆಗಳು ಗುಲಾಂ ಅಲಿ ಪ್ರದರ್ಸನಕ್ಕೆ ಅಡ್ಡಿ ಪಡಿಸುವ ಬೆದರಿಕೆಯನ್ನು ಖಂಡಿಸಿದ್ದಾರೆ.
ಆಂಜನೇಯನ ಗುಡಿಯಲ್ಲಿ ಜಸರಾಜ್ ಕೂಡ ಪ್ರದರ್ಶನ ನೀಡಲಿದ್ದಾರೆ. ಪವಿತ್ರ ರಂಜಾನ್ ಸಮಯದಲ್ಲಿ ಪಾಕಿಸ್ತಾನದಲ್ಲಿ ಹಾಡಲು ನನ್ನನ್ನು ಆಹ್ವಾನಿಸಬಹುದಾಗಿದ್ದರೆ ಆಂಜಿನೇಯನ ಪಾದದಲ್ಲಿ ಹಾಡಲು ಗುಲಾಂ ಅಲಿ ಅವರನ್ನು ನಿರಾಕರಿಸಲು ಹೇಗೆ ಸಾಧ್ಯ ಎಂದು ಜಸರಾಜ್ ಕೇಳಿದ್ದಾರೆ.
"೧೯೯೮ರಲ್ಲಿ ಲಾಹೋರ್ ನಲ್ಲಿ ಪ್ರದರ್ಶನ ನೀಡಲು ಪಾಕಿಸ್ತಾನ ಸರ್ಕಾರ ನನ್ನನ್ನು ಆಹ್ವಾನಿಸಿತ್ತು. ಅದು ರಂಜಾನ್ ನ ಪವಿತ್ರ ತಿಂಗಳಿನಲ್ಲಿ. ಅವರ ಪ್ರಾರ್ಥನೆಗಳಲ್ಲೂ ಭಾಗಿಯಾದೆ. ಅಲ್ಲಿ ಹಿರಿಯ ಅಧಿಕಾರಿಗಳು ಸಚಿವರು ಕೂಡ ಉಪಸ್ಥಿತರಿದ್ದರು" ಎಂದು ಹಿಂದೂಸ್ತಾನಿ ಗಾಯಕ ಹೇಳಿದ್ದಾರೆ.
"ಕ್ರಿಕೆಟ್ ಕ್ರೀಡೆ ಎರಡು ದೇಶದ ಜನಗಳನ್ನು ಒಟ್ಟಿಗೆ ತರಬಹುದಾದರೆ ಸಂಗೀತಕ್ಕೆ ಏಕಾಗಬಾರದು" ಎಂದು ಕೂಡ ಅವರ ಕೇಳಿದ್ದಾರೆ.
ಶಿವಸೇನೆ ಮತ್ತಿತರ ಹಿಂದು ಸಂಘಟನೆಗಳು ಗುಲಾಂ ಅಲಿ ಪ್ರದರ್ಶನಕ್ಕೆ ಅಡ್ಡಿಪಡಿಸುವ ಬೆದರಿಕೆ ಹಾಕಿದ್ದರು ಅಲ್ಲಿನ ಸಂಘಟಕರು ಈ ಬೆದರಿಕೆಗೆ ಸೊಪ್ಪು ಹಾಕದೆ "ವಾರಣಾಸಿ ವಿಶಾಲ ಹೃದಯಿಗಳ ನೆಲ. ಇಂತಹ ಸಣ್ಣ ಮನಸ್ಸಿನ ಜರನ್ನು ಉದಾಸೀನ ಮಾಡಬೇಕು" ಎಂದಿದ್ದರು.
ಸೋಮವಾರ ಗುಲಾಂ ಅಲಿ ವಾರಣಾಸಿಗೆ ಬಂದಿಳಿದಿದ್ದಾರೆ.