ಬರ ಕಾಮಗಾರಿ ಪರಿಶೀಲಿಸುತ್ತಿರುವ ಸಿಎಂ ಹಾಗೂ ಸಚಿವ ಎಚ್.ಕೆ.ಪಾಟೀಲ್
ಕೊಪ್ಪಳ: ಮೊದಲ ಹಂತದ ಬರ ಪ್ರವಾಸದ ವೇಳೆ ರಾಜ್ಯದಲ್ಲಿ ತೀವ್ರತರವಾದ ಬರಗಾಲ ಸ್ಥಿತಿ ನಿರ್ಮಾಣವಾಗಿಲ್ಲ ಎಂದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈ ಬಾರಿ ಬರದ ಬಿಸಿ ಮುಟ್ಟಿದೆ.
ರಾಜ್ಯದಲ್ಲಿ 42 ವರ್ಷಗಳ ನಂತರ ಭೀಕರ ಬರಗಾಲ ಸ್ಥಿತಿ ನಿರ್ಮಾಣವಾಗಿದೆ. ಕರ್ನಾಟಕದಲ್ಲಿ 1972-73ರಲ್ಲಿ ಈ ರೀತಿಯ ಭೀಕರ ಬರ ಎದುರಾಗಿತ್ತು. ಈ ಮತ್ತೆ ರಾಜ್ಯದಲ್ಲಿ ಅಂತಹದ್ದೇ ಸ್ಥಿತಿ ಎದುರಾಗಿದೆ ಎಂದು ಸಿಎಂ ಹೇಳಿದ್ದಾರೆ.
ಎರಡನೇ ಹಂತದ ಬರ ಪ್ರವಾಸದಲ್ಲಿರುವ ಸಿದ್ದರಾಮಯ್ಯ ಅವರು ಇಂದು ಕೊಪ್ಪಳದಲ್ಲಿ, ಈ ವರ್ಷ ಮುಂಗಾರು ಹಾಗೂ ಹಿಂಗಾರು ಮಳೆ ಕೈ ಕೊಟ್ಟಿದೆ ಎಂದಿದ್ದಾರೆ.
ರಾಜ್ಯದ 176 ತಾಲೂಕುಗಳ ಪೈಕಿ 136 ತಾಲೂಕಿನಲ್ಲಿ ಭೀಕರ ಬರ ಇದ್ದು, ರಾಜ್ಯದಲ್ಲಿ ಹಲವು ಕೆರೆ ಮತ್ತು ನದಿಗಳು ಬರಿದಾಗುತ್ತಿವೆ. ಇದರಿಂದ ಜನ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ಹೀಗಾಗಿ ನಾವು ಟ್ಯಾಂಕರ್ ಮೂಲಕ 1,500 ಹಳ್ಳಿಗಳಿಗೆ ನೀರು ಪೂರೈಕೆ ಮಾಡುತ್ತಿದ್ದೇವೆ ಎಂದರು.
ಇಂದು ಬೆಳಗ್ಗೆ ಶಿರಹಟ್ಟಿ ತಾಲೂಕಿನ ಮಾಗಡಿ ಕೆರೆಯ ಹೂಳೆತ್ತುವ ಕಾಮಗಾರಿಯನ್ನು ವೀಕ್ಷಿಸಲು ಬೇಟಿ ನೀಡಿ, ಕೆರೆಯ ಕಟ್ಟೆ ಮೇಲೆ ನಿಂತಿದ್ದ ಸಿದ್ದರಾಮಯ್ಯರನ್ನು ರೈತರು ಮತ್ತು ಕಾರ್ಮಿಕರು ಕಟ್ಟೆಯಿಂದ ಇಳಿದು ಅವರ ತೊಂದರೆಗಳನ್ನು ಆಲಿಸಲು ಬರಬೇಕೆಂದು ಒತ್ತಾಯ ಮಾಡಿದ್ದರು. ಆದರೆ ಮೊದಲಿಗೆ ಇದಕ್ಕೊಪ್ಪದ ಸಿಎಂ ನಾನು ಮೇಲೆಯೇ ನಿಲ್ಲುತ್ತೇನೆ ಎಂದರಾದರು ಕಡೇಕ್ಷಣದಲ್ಲಿ ಕೆಳಕ್ಕೆ ಇಳಿದು ಬಂದರು. ಆದರೆ ಅಲ್ಲಿಯೂ ಸಹ ಕಾರ್ಮಿಕರ ತೊಂದರೆಯನ್ನು ಆಲಿಸದೇ ಕ್ಷಣಮಾತ್ರದಲ್ಲೇ ತೆರಳಿದ್ದಾರೆ.
ಈ ಕುರಿತು ಆಕ್ರೋಶಗೊಂಡ ಕಾರ್ಮಿಕರು, ಕಳೆದ ಒಂದು ವಾರದಿಂದ ಕೆರೆಯ ಹೂಳೆತ್ತುವ ಕೆಲಸ ಮಾಡುತ್ತಿದ್ದು ಮಾಡಿದ ಕೆಲಸಕ್ಕೆ ನಮಗೆ ಸರಿಯಾಗಿ ವೇತನ ಪಾವತಿಯಾಗಿತ್ತಿಲ್ಲ. ಈ ಬಗ್ಗೆ ಅನೇಕ ಅಧಿಕಾರಿಗಳ ಬಳಿಯೂ ಮನವಿ ಮಾಡಿದ್ದೇವೆ ಯಾರೊಬ್ಬರೂ ನಮ್ಮ ಮನವಿಯನ್ನೂ ಆಲಿಸಿಲ್ಲ. ರಾಜ್ಯದಲ್ಲಿ ನೀರಿಗೂ ಬರ ನಮ್ಮ ವೇತನಕ್ಕೂ ಬರ ಎಂದು ತಮ್ಮ ತಮ್ಮಲ್ಲೇ ಮಾತನಾಡಿಕೊಳ್ಳುತ್ತಿದ್ದರು.