ಪಶ್ಚಿಮ ಬಂಗಾಳದ ಟೋಲ್ ಪ್ಲಾಜಾಗಳಲ್ಲಿ ನಿಯೋಜಿಸಲಾಗಿದ್ದ ಸೈನಿಕರು
ಕೋಲ್ಕತ್ತಾ: ಪಶ್ಚಿಮ ಬಂಗಾಳದ ಟೋಲ್ ಪ್ಲಾಜಾಗಳಲ್ಲಿ ನಿಯೋಜಿಸಲಾಗಿದ್ದ ಸೈನಿಕರು ಟ್ರಕ್ ಚಾಲಕರಿಂದ ಒತ್ತಾಯಪೂರ್ವಕವಾಗಿ ಹಣ ಪಡೆದಿದ್ದಾರೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ ಬೆನ್ನಲ್ಲೇ, ಭಾರತೀಯ ಸೇನೆಯ ಹೆಸರಿಗೆ 'ಮಸಿ ಬಳಿಯುವುದರ' ಮತ್ತು 'ಗೌರವವನ್ನು ಹಾಳುಮಾಡುವುದರ' ವಿರುದ್ಧ ರಾಜ್ಯಪಾಲ ಕೆ ಎನ್ ತ್ರಿಪಾಠಿ ಎಚ್ಚರಿಸಿದ್ದಾರೆ.
"ಭಾರತೀಯ ಸೇನೆಯಂತಹ ಜವಾಬ್ದಾರಿ ಸಂಸ್ಥೆಗಳ ವಿರುದ್ಧ ಮಾತನಾಡುವಾಗ ಎಲ್ಲರು ಎಚ್ಚರಿಕೆಯಿಂದಿರಬೇಕು. ಸೇನೆಯ ಗೌರವಕ್ಕೆ ಚ್ಯುತಿ ತರಬೇಡಿ. ಸೇನೆಯ ಹೆಸರಿಗೆ ಮಸಿ ಬಳಿಯಬೇಡಿ" ಎಂದು ಬ್ಯಾನರ್ಜಿ ಮಾಡಿರುವ ಆಪಾದನೆಯ ಬಗ್ಗೆ ಪ್ರಶ್ನಿಸಿದಾಗ ತ್ರಿಪಾಠಿ ಹೇಳಿದ್ದಾರೆ.
ಸರ್ಕಾರಕ್ಕೆ ಯಾವುದೇ ಮಾಹಿತಿ ನೀಡದೆ ಟೋಲ್ ಪ್ಲಾಜಾಗಳಲ್ಲಿ ಸೇನೆಯನ್ನು ನಿಯೋಜಿಸಲಾಗಿದೆ ಎಂದು ಆರೋಪಿಸಿ ರಾಜ್ಯ ಸೆಕ್ರೆಟೇರಿಯಟ್ ನಿಂದ ಗುರುವಾರ ರಾತ್ರಿ ಹೊರಬರದ ಮುಖ್ಯಮಂತ್ರಿ ಪ್ರತಿಭಟಿಸಿದ್ದರು. ಇದು ಸಂಸತ್ತಿನಲ್ಲಿಯೂ ಕೋಲಾಹಲಕ್ಕೆ ಕಾರಣವಾಗಿತ್ತು.
ಕೇಂದ್ರ ಸರ್ಕಾರ ಮತ್ತು ಸೇನೆ ಈ ಆರೋಪವನ್ನು ಅಲ್ಲಗೆಳೆದಿತ್ತಲ್ಲದೆ, ಇದು ಮಾಮೂಲಿ ತರಬೇಕಿ ಪ್ರಕ್ರಿಯೆ ಎಂದಿದ್ದವು.
ಲೋಕಸಭೆಯಲ್ಲಿ ಪ್ರತಿಕ್ರಿಯಿಸಿದ್ದ ಭದ್ರತಾ ಸಚಿವ ಮನೋಹರ್ ಪರ್ರಿಕರ್ ಕೋಲ್ಕತ್ತಾದಲ್ಲಿ ಸೇನೆ ಮಾಮೂಲಿ ತರಬೇತಿ ಪ್ರಕ್ರಿಯೆಯಲ್ಲಿ ಭಾಗವಹಿಸಿತ್ತು. ಪ್ರಾದೇಶಿಕ ಪೊಲೀಸರು ಮತ್ತು ಸೇನೆಯ ನಡುವೆ ಈ ವಿಷಯವಾಗಿ ನಡೆದಿದ್ದ ಪತ್ರ ವ್ಯವಹಾರವನ್ನು ಪ್ರದರ್ಶಿಸಿದ್ದ ಈಸ್ಟರ್ನ್ ಕಮಾಂಡ್, ರಾಜ್ಯ ಸರ್ಕಾರ ಮತ್ತು ಪೊಲೀಸರಿಗೆ ಈ ಚಟುವಟಿಕೆಯ ಬಗ್ಗೆ ಈ ಮೊದಲೇ ತಿಳಿದಿತ್ತು ಎಂದಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos