ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದಿಂದ ವಿಭಜನೆ ಗೊಂಡಿರುವ ಎರಡೂ ನೂತನ ವಿವಿಗಳಲ್ಲಿ ಈಗ ವಿಶೇಷ ಅಧಿಕಾರಿ(ಎಸ್ಒ)ಯ ಹುದ್ದೆಯ ಆಕಾಂಕ್ಷಿಗಳ ಸಂಖ್ಯೆ ಹೆಚ್ಚುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರ ಮೂಲಕ ಲಾಬಿ ನಡೆಸುತ್ತಿದ್ದಾರೆ.
ಸ್ವತಃ ಮುಖ್ಯಮಂತ್ರಿಯೇ ವಿಶೇಷ ಅಧಿಕಾರಿಯ ನೇಮಕ ಮಾಡಿಕೊಳ್ಳುತ್ತಿದ್ದರೂ ಇಬ್ಬರು ಪ್ರೊಫೆಸರ್ ಗಳ ನೇಮಕಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಅವರು ತಮಗೆ ತಾವೇ ಶಿಫಾರಸು ಪತ್ರ ನೀಡಿದ್ದಾರೆ.
ತುಮಕೂರು ಸಿದ್ದಗಂಗಾ ಪ್ರಥಮದರ್ಜೆ ಕಾಲೇಜ್ ಸಹಾಯಕ ಪ್ರೊ.ಕೆ.ಟಿ ದುಗ್ಗಣ್ಣ ಹಾಗೂ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಡಾ.ಎನ್.ಲಕ್ಷ್ಮಸ್ವಾಮಿ ಅವರನ್ನು ವಿಶೇಷ ಅಧಿಕಾರಿಯಾಗಿ ನೇಮಕ ಮಾಡುವಂತೆ ಸಿದ್ದರಾಮಯ್ಯ ಅವರು ಸಿಎಂಗೆ ಶಿಫಾರಸು ಮಾಡಿದ್ದಾರೆ.
ಸಿಎಂ ಸಿದ್ದರಾಮಯ್ಯ ನೀಡಿದ ಶಿಫಾರಸು ಪತ್ರವನ್ನು ಈ ಇಬ್ಬರು ಪ್ರೊಫೆಸರ್ ಗಳು ತಮ್ಮ ಅರ್ಜಿಯೊಂದಿಗೆ ಲಗತ್ತಿಸಿರುವ ಮಾಹಿತ ಆರ್ ಟಿಐ ಕಾಯ್ದೆಯಡಿ ಲಭ್ಯವಾಗಿದೆ.
ಇನ್ನು ಕರ್ನಾಟಕ ವಿಶ್ವವಿದ್ಯಾಲಯದ ಮಾಜಿ ಕುಲಸಚಿವ ಡಾ.ಬಸವಣ್ಣ ಅವರು ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ, ಗಣಿ ಮತ್ತು ಭೂವಿಜ್ಞಾನ ಸಚಿವ ವಿನಯ್ ಕುಲಕರ್ಣಿ ಹಾಗೂ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಶಿಫಾರಸು ಪತ್ರವನ್ನು ಲಗತ್ತಿಸಿದ್ದಾರೆ.
ಉನ್ನತ ಶಿಕ್ಷಣ ಸಚಿವ ಟಿ.ಬಿ.ಜಯಚಂದ್ರ, ಕೈಗಾರಿಕೆ ಸಚಿವ ಆರ್.ವಿ.ದೇಶಪಾಂಡೆ, ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ, ಸಹಕಾರಿ ಸಚಿವ ಮಹದೇವ್ ಪ್ರಸಾದ್ ಹಾಗೂ ಮಾಜಿ ಮುಖ್ಯಮಂತ್ರಿ ಎನ್.ಧರ್ಮಸಿಂಗ್ ಅವರು ಸೇರಿದಂತೆ ಹಲವು ನಾಯಕರು ಇಂತಹ ಶಿಫಾರಸು ಪತ್ರಗಳನ್ನು ನೀಡಿದ್ದಾರೆ.
ರಾಜ್ಯ ಸರ್ಕಾರ ಇತ್ತೀಚಿಗಷ್ಟೇ ಬೆಂಗಳೂರು ವಿಶ್ವವಿದ್ಯಾಲಯವನ್ನು ಮೂರು ಭಾಗಗಳಾಗಿ ವಿಭಜನೆ ಮಾಡಿದ್ದು, ಹೊಸದಾಗಿ ಸ್ಥಾಪನೆಯಾಗಿ ಬೆಂಗಳೂರು ಉತ್ತರ ವಿವಿ ಹಾಗೂ ಕೇಂದ್ರ ವಿವಿಗಳಲ್ಲಿ ವಿಶೇಷ ಅಧಿಕಾರಿಗಳ ನೇಮಕ ಪ್ರಕ್ರಿಯೆ ನಡೆಯುತ್ತಿದೆ.