ಯರವಾಡ ಜೈಲಿನಿಂದ ಬಿಡುಗಡೆಯಾದ ಸಂಜಯ್ ದತ್ ಜೈಲಿಗೆ ಸೆಲ್ಯೂಟ್ ಹೊಡೆದರು..
ಪುಣೆ: 1993ರ ಮುಂಬೈ ಸರಣಿ ಬಾಂಬ್ ಸ್ಪೋಟ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ಪುಣೆಯ ಯರವಾಡ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ನಟ ಸಂಜಯ್ ದತ್ ಅವರನ್ನು ಸನ್ನಡತೆ ಆಧಾರದ ಮೇಲೆ ಗುರುವಾರ ಬಿಡುಗಡೆಗೊಳಿಸಲಾಗಿದೆ.
ಪುಣೆಯ ಯರವಾಡಾ ಜೈಲಿನಿಂದ ಬೆಳಿಗ್ಗೆ ಸಂಜಯ್ ದತ್ ಬಿಡುಗಡೆಯಾಗಿ ಬರುವಾಗ ನೆಲಮುಟ್ಟಿ ನಮಸ್ಕರಿಸಿದ್ದು, ಜೈಲಿಗೆ ಸೆಲ್ಯೂಟ್ ಹೊಡೆದಿದ್ದಾರೆ. ನಂತರ ದತ್ ಅವರನ್ನು ಪತ್ನಿ ಮಾನ್ಯತಾ ಬರಮಾಡಿಕೊಂಡಿದ್ದಾರೆ. ಖ್ಯಾತ ನಿರ್ದೇಶಕ ರಾಜ್ ಕುಮಾರ್ ಇರಾನಿ ಉಪಸ್ಥಿತರಿದ್ದರು.
56 ವರ್ಷದ ಸಂಜಯ್ ದತ್ ಕಳೆದ 5 ವರ್ಷಗಳಿಂದ ಜೈಲುವಾಸ ಅನುಭವಿಸುತ್ತಿದ್ದರು. ಜೈಲಿನಿಂದ ಬಿಡುಗಡೆಯಾದ ಸಂಜಯ್ ದತ್ ಮುಂಬೈನತ್ತ ಪ್ರಯಾಣ ಬೆಳೆಸಿದ್ದು, ವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿ ನಂತರ ತಾಯಿ ನರ್ಗೀಸ್ ಸಮಾಧಿ ಬಳಿ ತೆರಳಿ ನಮನ ಸಲ್ಲಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಸಂಜಯ್ ದತ್ ಬಂಧಿತರಾಗಿ 1996ರಲ್ಲಿ ಜೈಲು ಸೇರಿದ್ದರು. ಆಗ 18 ತಿಂಗಳ ಜೈಲುವಾಸದ ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಬಳಿಕ 2013ರಲ್ಲಿ ಪ್ರಕರಣ ಅಂತಿಮ ತೀರ್ಪು ಹೊರಬಿದ್ದಿತ್ತು. ದತ್ ಅವರಿಗೆ ಐದು ವರ್ಷಗಳ ಜೈಲುವಾಸ ವಿಧಿಸಿ ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು.
ಮೊದಲೇ 18 ತಿಂಗಳು ಜೈಲಿನಲ್ಲಿ ಕಳೆದಿದ್ದರಿಂದ 42 ತಿಂಗಳು ಶಿಕ್ಷೆ ಅನುಭವಿಸಬೇಕಿತ್ತು. ಆದರೆ, ಶಿಕ್ಷೆ ಕಡಿತದ ನಿರ್ಧಾರದಿಂದಾಗಿ ಫೆಬ್ರುವರಿ ಅಂತ್ಯದ ವೇಳೆಗೆ ದತ್ ಅವರು ಬಿಡುಗಡೆಯಾಗಲಿದ್ದಾರೆ. ಇದೇ ಲೆಕ್ಕಾಚಾರ ಪಕ್ಕಾ ಆದರೆ, ದತ್ ಅವರು 42 ತಿಂಗಳ ಪೈಕಿ 33 ತಿಂಗಳ 25 ದಿನ ಶಿಕ್ಷೆ ಅನುಭವಿಸದಂತಾಗುತ್ತದೆ. ಈ ಅವಧಿಯಲ್ಲಿ ತಲಾ ಎರಡು ಬಾರಿ ಪರೋಲ್ ಹಾಗೂ ಫರ್ಲೋ ರಜೆ ಮೇಲೆ ದತ್ ಅವರು ಜೈಲಿನಿಂದ ಹೊರಗಿದ್ದರು ಎಂಬುದು ವಿಶೇಷ. 2013ರ ಮೇ ತಿಂಗಳಲ್ಲಿ ದತ್ ಮತ್ತೆ ಜೈಲು ಸೇರಿದ್ದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos