ನವದೆಹಲಿ: ಉಗ್ರರ ದಾಳಿಗೊಳಗಾದ ಪಠಾಣ್ಕೋಟ್ ವಾಯುನೆಲೆಯಲ್ಲಿ ಭದ್ರತಾಲೋಪವಿದೆ ಎಂದು ಉಗ್ರ ದಾಳಿ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ ಹೇಳಿಕೆ ನೀಡಿದೆ. ಅದೇ ವೇಳೆ ರು. 50 ನೀಡಿದರೆ ಯಾರಿಗೆ ಬೇಕಾದರೂ ವಾಯುನೆಲೆಯ ಆವರಣದಲ್ಲಿ ಹಸುಗಳನ್ನು ಮೇಯಿಸಲು ಅನುಮತಿ ಇದೆ ಎಂಬ ವಿಷಯವೀಗ ಬಹಿರಂಗವಾಗಿದೆ. ವಾಯುನೆಲೆಗೆ ಈ ರೀತಿ ಅಕ್ರಮವಾಗಿ ಪ್ರವೇಶಿಸಲು ಅನುಮತಿ ನೀಡಿರುವ ನಡೆ ಬಗ್ಗೆ ಈಗ ತನಿಖೆಗಳು ನಡೆದುಬರುತ್ತಿವೆ. ಅಷ್ಟೇ ಅಲ್ಲದೆ ಉಗ್ರ ದಾಳಿಗೆ ಉಗ್ರರಿಗೆ ವಾಯುನೆಲೆಯಿಂದಲೇ ಸಹಾಯ ಲಭಿಸಿದೆ ಎಂದು ಎನ್ಐಎ ತಂಡ ಅನುಮಾನ ವ್ಯಕ್ತ ಪಡಿಸಿದೆ.
ಉಗ್ರರಿಗೆ ವಾಯುನೆಲೆಯ ಒಳಗಿನಿಂದಲೇ ಸಹಾಯ ಸಿಕ್ಕಿದೆ ಎಂಬ ಅನುಮಾನ ಈ ಮೊದಲೇ ವ್ಯಕ್ತವಾಗಿತ್ತು. ವಾಯುನೆಲೆಯ ಹೊರಗಿರುವ 11 ಅಡಿ ಎತ್ತರದಲ್ಲಿರುವ ಆವರಣ ಗೋಡೆಯನ್ನು ಏರಿ ಕಂಬಿ ಬೇಲಿಯನ್ನು ಕತ್ತರಿಸಿ ಉಗ್ರರು ಒಳ ನುಗ್ಗಿದ್ದರು. ಈ ಭಾಗದಲ್ಲಿ ಫ್ಲಡ್ ಲೈಟ್ಗಳ ಬೆಳಕೂ ಹಾಯುತ್ತಿರಲಿಲ್ಲ. ಆವರಣ ಗೋಡೆಯ ಮೇಲೆ ಬೇಳಬೇಕಿದ್ದ ಲೈಟ್ಗಳು ಆ ಭಾಗದಲ್ಲಿ ಮಾತ್ರ ಬೇರೆ ದಿಶೆಯಲ್ಲಿದ್ದವು ಎಂದು ತನಿಖಾ ತಂಡ ಹೇಳಿದೆ. ಈ ವಿಷಯಕ್ಕೆ ಸಂಬಂಧಪಟ್ಟಂತೆ ಸೇನೆಯ ಇಂಜಿನಿಯರಿಂಗ್ ಸರ್ವೀಸ್ ವಿಭಾಗದ ನೌಕರರನ್ನು ಎನ್ಐಎ ವಿಚಾರಣೆಗೊಳಪಡಿಸಿತ್ತು.