ನವದೆಹಲಿ: ಜೀವನ ವಿಧಾನ ಬದಲಿಸುವ 'ಸ್ಟಾರ್ಟ್ ಅಪ್ ಇಂಡಿಯಾ'ಗೆ ಕೇಂದ್ರ ಸರ್ಕಾರ ಮೊದಲ ಆದ್ಯತೆ ನೀಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಹೇಳಿದ್ದಾರೆ.
ಇಂದು ದೆಹಲಿಯ ವಿಜ್ಞಾನ ಭವನದಲ್ಲಿ ಉದ್ಯಮಶೀಲತೆಗೆ ಪ್ರೋತ್ಸಾಹ ನೀಡುವ "ಸ್ಟಾರ್ಟ್ ಅಪ್ ಇಂಡಿಯಾ' ಅಭಿಯಾನಕ್ಕೆ ಚಾಲನೆ ನೀಡಿ ಮಾತಮಾಡಿದ ಮೋದಿ, 'ಸ್ಟಾರ್ಟ್ ಅಪ್ ಇಂಡಿಯಾ' ಯುವಕರಿಗೆ ಹೊಸ ಹಾದಿ ತೋರಿಸಲಿದೆ. ಯುವ ಜನಾಂಗದಲ್ಲಿ ಉದ್ಯಮ ಶೀಲತೆಯ ಹೊಸ ಆಲೋಚನೆಗಳು ಇರುತ್ತವೆ. ಆದರೆ ಕೆಲವರು ಅಂತಹ ಕನಸನ್ನು ಅರ್ಧದಲ್ಲೇ ಕೈಬಿಡುತ್ತಾರೆ; ಕೆಲವೇ ಕೆಲವರು ಮಾತ್ರವೇ ತಮ್ಮ ಆಲೋಚನೆಗಳನ್ನು ಸಂಪೂರ್ಣವಾಗಿ ಕಾರ್ಯಗತಗೊಳಿಸುವ ಸಂಕಲ್ಪ ಹೊಂದಿ ಯಶಸ್ವಿಯಾಗುತ್ತಾರೆ ಮತು ಕನಸನ್ನು ನನಸುಗೊಳಿಸುತ್ತಾರೆ' ಎಂದರು.
"ನಾವಿಲ್ಲಿ ಇರುವುದೇ ಯುವ ಜನಾಂಗದಲ್ಲಿನ ಉದ್ಯಮ ಶೀಲತೆಯ ಕನಸುಗಳನ್ನು ಸಾಕಾರಗೊಳಿಸುವ ಪ್ರಯತ್ನಕ್ಕೆ ನೆರವಾಗಲು; ಆದುದರಿಂದ ನಾವು ನಿಮಗಾಗಿ ಏನು ಮಾಡಬೇಕು ಎಂಬುದನ್ನು ನೀವು ಯುವಕರು ನಮಗೆ ಹೇಳಬೇಕು; ನಾನು ಈ ಹಿಂದೆಯೇ ಕೆಂಪುಕೋಟೆಯ ಮೇಲಿಂದ ಮಾಡಿದ ಭಾಷಣದಲ್ಲಿ ಸ್ಟಾರ್ಟ್ ಅಪ್ ಇಂಡಿಯಾ ಅಭಿಯಾನದ ಬಗ್ಗೆ ಹೇಳಿದ್ದೇನೆ. ಅದೇನೆಂಬುದನ್ನು ನಾವೀಗ ನೋಡುತ್ತಲಿದ್ದೇವೆ' ಎಂದು ಮೋದಿ ಹೇಳಿದರು.
ಹಣಕಾಸು ಸಚಿವ ಅರುಣ್ ಜೇತ್ಲಿ ಅವರು ಮಾತನಾಡಿ "1991ಕ್ಕೆ ಮುನ್ನ ಯಾವೆಲ್ಲ ಕಂಪೆನಿಗಳು ಅಗ್ರ ಸ್ಥಾನದಲ್ಲಿದ್ದವೋ ಅವೆಲ್ಲವೂ ಅನಂತರದಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬಂದ ಕಂಪೆನಿಗಳಿಂದ ಸ್ಥಾನಾಂತರಗೊಂಡಿವೆ. ಈ ಹೊಸ ಕಂಪೆನಿಗಳು ಮಾಡಿದವರಲ್ಲಿ ಹೆಚ್ಚಿನವರು ಉದ್ಯಮ-ಕುಟುಂಬಗಳಿಂದ ಬಂದವರಲ್ಲ' ಎಂದು ಹೇಳಿದರು.
ಇಂದಿನ ಈ ಸುದಿನವು ಯುವ ಉದ್ಯಮಶೀಲರಲ್ಲಿ ಹೊಸ ಮನೋಭಾವ ಸೃಷ್ಟಿಸುವಂತಿದೆ; ದೇಶದಲ್ಲಿ ಯುವ ಜನರಿಂದ ಹೊಸ ಔದ್ಯಮಿಕ ಕ್ರಾಂತಿಯಾಗಲಿದೆ ಎಂದು ಜೇಟ್ಲಿ ತಿಳಿಸಿದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos