ಪ್ರಧಾನ ಸುದ್ದಿ

ಅಸಂಖ್ಯ ಜನರ ತ್ಯಾಗ, ಬಲಿದಾನ ಸಂಕೇತ ಗಣರಾಜ್ಯೋತ್ಸವ: ವಜುಭಾಯಿ ವಾಲಾ

Srinivasamurthy VN

ಬೆಂಗಳೂರು: ರಾಜ್ಯಾದ್ಯಂತ 67ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ವಿದ್ಯುಕ್ತವಾಗಿ ಆಚರಿಸಲಾಗುತ್ತಿದ್ದು, ಬೆಂಗಳೂರಿನಲ್ಲಿ ರಾಜ್ಯಪಾಲ ವಜುಭಾಯಿ ವಾಲಾ ಅವರು ಧ್ವಜಾರೋಹಣ  ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಇಂದು ರಾಜ್ಯಪಾಲ ವಜುಭಾಯಿ ವಾಲಾ ಅವರು ಧ್ವಜಾರೋಹಣ ನೆರವೇರಿಸಿ, ಸೈನಿಕರಿಂದ ಗೌರವ ರಕ್ಷೆ ಸ್ವೀಕರಿಸಿದರು. ಇದಕ್ಕೂ  ಮೊದಲು ಪೊಲೀಸ್ ಬ್ಯಾಂಡ್ ವೃಂದದಿಂದ ರಾಷ್ಟ್ರಗೀತೆಯನ್ನು ನುಡಿಸಲಾಯಿತು. ರಾಷ್ಟ್ರಧ್ವಜಾರೋಹಣವಾಗುತ್ತಿದ್ದಂತೆಯೇ ಸೇನೆಯ ಹೆಲಿಕಾಪ್ಟರ್ ರಾಷ್ಟ್ರಧ್ವಜದ ಮೇಲೆ ಪುಷ್ಪವೃಷ್ಟಿಯನ್ನು  ಸುರಿಸಿತು.

ಈ ವೇಳೆ ಮಾತನಾಡಿದ ರಾಜ್ಯಪಾಲ ವಜುಭಾಯಿ ವಾಲ ಅವರು, 67ನೇ ಗಣರಾಜ್ಯೋತ್ಸವ ಆಚರಿಸುತ್ತಿರುವ ಹಿನ್ನಲೆಯಲ್ಲಿ ದೇಶದ ಪ್ರಜೆಗಳಿಗೆ ಶುಭಾಷಯ ಕೋರಿದರು. ಹಿಂದಿಯಲ್ಲಿ ಭಾಷಣ  ಆರಂಭಿಸಿದ ರಾಜ್ಯಪಾಲರು, "67 ವರ್ಷಗಳ ಹಿಂದೆ ಭಾರತ ಗಣರಾಜ್ಯವಾಯಿತು. ಗಣರಾಜ್ಯೋತ್ಸವ ಅದೆಷ್ಟೋ ಜನರ ತ್ಯಾಗ ಮತ್ತು ಬಲಿದಾನದ ಪ್ರತೀಕವಾಗಿದ್ದು, ಭಾರತ ಸ್ವಾತಂತ್ರ್ಯಕ್ಕಾಗಿ  ಬಲಿದಾನ ನೀಡಿದವರಿಗೆ ಗೌರವ ಸೂಚಿಸುವ ಸಂದರ್ಭ ಇದು. ಬಲಿದಾನ ನೀಡಿದವರಿಗೆ ಈ ಮೂಲಕ ನಮನ ಸಲ್ಲಿಸುತ್ತೇವೆ ಎಂದರು.

ಕರ್ನಾಟಕದಲ್ಲಿ ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದ್ದು, ಡಿಜಿಟಲ್ ಇಂಡಿಯಾ ಯೋಜನೆಯನ್ನು ಉತ್ತಮವಾಗಿ ಅಳವಡಿಸಿಕೊಳ್ಳಲಾಗಿದೆ. ಮೊಬೈಲ್ ಗವರ್ನೆನ್ಸ್ ಗೆ  ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಈ ಯೋಜನೆಯಲ್ಲಿ ಸುಮಾರು 400ಕ್ಕೂ ಹೆಚ್ಚು ಸೇವೆಗಳು ಅಡಕವಾಗಿದೆ ಎಂದು ರಾಜ್ಯಪಾಲರು ಹೇಳಿದರು.

SCROLL FOR NEXT