ಗುಜರಾತ್ ನಲ್ಲಿ ದಲಿತರ ಮೇಲೆ ಹಲ್ಲೆಯ ವಿರುದ್ಧ ಪ್ರತಿಭಟನೆ
ಅಹಮದಾಬಾದ್: ದಲಿತರ ಮೇಲಿನ ದೌರ್ಜನ್ಯ ವಿರೋಧಿಸಿ ಗುಜರಾತಿನ ಹಲವೆಡೆ ಬುಧವಾರ ನಡೆಸಿದ ಪ್ರತಿಭಟನೆಯ ಬಿಸಿ ಸರ್ಕಾರಕ್ಕೆ ತಟ್ಟಿದೆ. ಸತ್ತ ಗೋವಿನ ಚರ್ಮ ಸುಲಿದು ಸಾಗಾಣೆ ಮಾಡುತ್ತಿದ್ದಾಗ ಜುಲೈ 11 ರಂದು ನಾಲ್ಕು ದಲಿತ ಯುವಕರನ್ನು ಸವರ್ಣಿಯರು ಥಳಿಸಿದ್ದ ಪ್ರಕರಣ ರಾಜ್ಯಸಭೆಯಲ್ಲಿಯೂ ಗದ್ದಲ ಎಬ್ಬಿಸಿತ್ತು. ಈಗ ಮುಖ್ಯಮಂತ್ರಿ ಆನಂದಿಬೇನ್ ಪಟೇಲ್ ಸಂತ್ರಸ್ತ ದಲಿತರ ಗ್ರಾಮಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ.
ಸೌರಾಷ್ಟ್ರ ಪ್ರದೇಶ ಮತ್ತಿತರ ಭಾಗದಲ್ಲಿ ಸರ್ಕಾರಿ ಬಸ್ಸುಗಳನ್ನು ರದ್ದುಗೊಳಿಸಲಾಗಿತ್ತು ಮತ್ತು ಶಾಲೆಗಳನ್ನು ಮುಚ್ಚಲಾಗಿತ್ತು. ಹಾಗೆಯೇ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು.
ಕಳೆದ ಸೌರಾಷ್ಟ್ರದ ಉನಾ ನಗರದಲ್ಲಿ ನಾಲ್ಕು ದಲಿತ ಯುವಕರ ಮೇಲೆ ನಡೆದ ಹಲ್ಲೆ ವಿರೋಧಿಸಿ ಹಲವೆಡೆ ನಡೆದ ಪ್ರತಿಭಟನೆಗಳಲ್ಲಿ 12 ದಲಿತ ಯುವಕರು ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ಅವರಲ್ಲಿ ಒಬ್ಬರು ಮಂಗಳವಾರ ಮೃತಪಟ್ಟಿದ್ದರು.
ಹಾಗೆಯೇ ಮಂಗಳವಾರ ಕಲ್ಲೆಸತಕ್ಕೆ ಗಾಯಗೊಂಡು ಅಮರೇಲಿಯಲ್ಲಿ ಪೊಲೀಸ್ ಪೇದೆಯೊಬ್ಬರು ಮೃತಪಟ್ಟಿದ್ದರು. ಬುಧವಾರದ ಪ್ರತಿಭಟನೆಗಳಲ್ಲಿ ಯಾವುದೇ ಅಹಿತಕರ ಘಟನೆ ವರದಿಯಾಗಿಲ್ಲ.
ಬುಧವಾರವೂ ಬೆಳಗ್ಗೆ ದಿಯು ವಿಮಾನನಿಲಾಣದಿಂದ ಉನ ತಾಲ್ಲೂಕಿನ ಸಮಾಧಿಯಾಳ ಗ್ರಾಮಕ್ಕೆ ತೆರಳಿದ ಮುಖ್ಯಮಂತ್ರಿ, ಹಲ್ಲೆಗೊಂಡ ನಾಲ್ಕು ದಲಿತ ಯುವಕರ ಕುಟುಂಬಗಳನ್ನು ಭೇಟಿ ಮಾಡಿದ್ದಾರೆ. ತಮ್ಮ ಮನೆಯಂಗಳದಲ್ಲಿ ಆನಂದಿಬೇನ್ ಅವರನ್ನು ಕಂಡ ಕುಟುಂಬಗಳು ಅಳುತ್ತಿದ್ದ ದೃಶ್ಯಗಳು ಕಂಡುಬಂದವು ಎಂದು ತಿಳಿದಿದೆ.
ಈ ಕುಟುಂಬದವರಿಗೆ ಧನಸಹಾಯ ಮಾಡುವುದಾಗಿ ಆನಂದಿಬೇನ್ ತಿಳಿಸಿದ್ದು ಮನೆ ಕಟ್ಟಿಕೊಡುವ ಭರವಸೆಯನ್ನು ನೀಡಿದ್ದಾರೆ. ಹಾಗೆಯೇ ಈ ಕುಟುಂಬಗಳಿಗೆ ಭದ್ರತೆ ನೀಡಲು ಪೊಲೀಸರಿಗೆ ಆದೇಶಿಸಿದ್ದಾರೆ.
ಎಎಪಿ ನಾಯಕ ಅರವಿಂದ್ ಕೇಜ್ರಿವಾಲ್ ಮತ್ತು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಭೇಟಿ ನೀಡಲಿದ್ದಾರೆ ಎಂಬ ಸುದ್ದಿಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಈ ಪ್ರಕರಣಕ್ಕೆ ರಾಜಕೀಯ ಬಣ್ಣ ನೀಡುವುದು ಸರಿಯಲ್ಲ ಎಂದಿದ್ದಾರೆ.
ಈ ಪ್ರಕರಣದಲ್ಲಿ ಇಲ್ಲಿಯವರೆಗೆ 16 ಜನರನ್ನು ಬಂಧಿಸಲಾಗಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos