ಕೊಲೆಯಾದ ಇನ್ಫೋಸಿಸ್ ಉದ್ಯೋಗಿ ಎಸ್ ಸ್ವಾತಿ
ಚೆನ್ನೈ: ಹಾಡು ಹಗಲಲ್ಲೇ ಇನ್ಫೋಸಿಸ್ ಉದ್ಯೋಗಿ ಎಸ್ ಸ್ವಾತಿ ಅವರ ಕೊಲೆ ಪ್ರಕರಣದ ತನಿಖೆಯ ವಿಳಂಬ ಪ್ರಗತಿಯ ಬಗ್ಗೆ ಮದ್ರಾಸ್ ಹೈಕೋರ್ಟ್ ನ ವಿಭಾಗೀಯ ಪೀಠ ಅಸಮಾಧಾನ ವ್ಯಕ್ತಪಡಿಸಿದೆ.
ರೈಲೇ ಪೊಲೀಸರ ಮತ್ತು ರಾಜ್ಯ ಪೊಲೀಸರ ನಿಲುವುಗಳ ಮಧ್ಯೆ ಅಹಂಭಾವದ ಸಂಘರ್ಷ ಇದೆಯೇ ಎಂದು ಮುಕ್ತ ಕೋರ್ಟ್ ಹಾಲ್ ನಲ್ಲಿ ನ್ಯಾಯಾಧೀಶ ಎಸ್ ನಾಗಮುತ್ತು ಮತ್ತು ವಿ ಭಾರತಿದಾಸನ್ ಒಳಗೊಂಡ ನ್ಯಾಯಪೀಠ ಕೇಳಿದೆ.
ಜನನಿಬಿಡ ರೇಲ್ವೆ ನಿಲ್ದಾಣದಲ್ಲಿ ಹಾಡು ಹಗಲಲ್ಲೇ ನಡೆದ ಈ ಕೊಲೆ ಜನರ ಅದರಲ್ಲೂ ನ್ಯಾಯಾಧೀಶರ ಆತ್ಮಸಾಕ್ಷಿಯನ್ನು ಕಲಕಿದೆ ಎಂದು ಅವರು ಹೇಳಿದ್ದಾರೆ.
ಪತ್ರಿಕಾ ವರದಿಗಳನ್ನು ಆಧರಿಸಿ ಸ್ವಯಂಪ್ರೇತಿವಾಗಿ ಈ ವಿಚಾರಣೆ ನಡೆಸಿರುವ ನ್ಯಾಯಾಧೀಶರು ರೈಲ್ವೆ ಪೊಲೀಸರು ಮತ್ತು ಪ್ರಾದೇಶಿಕ ಪೊಲೀಸರ ನಡುವೆ ಸಮನ್ವಯ ಕೊರತೆ ಇದೆಯೇ ಎಂದು ಕೇಳಿ ರಾಜ್ಯದ ಪಬ್ಲಿಕ್ ಪ್ರಾಸೆಕ್ಯೂಟರ್ ನ್ಯಾಯಾಲಯಕ್ಕೆ ಹಾಜರಾಗುವಂತೆ ಹೇಳಿದ್ದಾರೆ. ಈ ಪ್ರಕರಣ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ನಗರ ಪೊಲೀಸ್ ಕಮಿಷನರ್ ಹೇಳಿದ್ದಾರೆ ಎನ್ನಲಾಗಿರುವ ಹೇಳಿಕೆಗೆ ಗಂಭೀರ ಆಕ್ಷೇಪ ವ್ಯಕ್ತಪಡಿಸಿರುವ ನ್ಯಾಯಪೀಠ ಪಬ್ಲಿಕ್ ಪ್ರಾಸೆಕ್ಯೂಟರ್ ಈ ಹೇಳಿಕೆಯ ಸತ್ಯಾಸತ್ಯವನ್ನು ತಿಳಿಸಲು ಹೇಳಿದ್ದು, ಕೇವಲ ಪಟ್ಟಿಯಾಗಿರುವ ಪ್ರಕರಣಗಳ ವಿಚಾರಣೆಯಷ್ಟೇ ನಮ್ಮ ಕರ್ತವ್ಯವಲ್ಲ, ಇಂತಹ ಪ್ರಕರಣಗಳನ್ನೂ ವಿಚಾರಿಸುವ ಸಾಮಾಜಿಕ ಜವಾಬ್ದಾರಿ ನಮಗಿದೆ ಎಂದಿದೆ.
ಪುದುಚೆರಿಯಲ್ಲಿ ನಡೆದ ಆಸಿಡ್ ದಾಳಿಯ ಬಗ್ಗೆಯೂ ಪ್ರತಿಕ್ರಿಯಿಸಿರುವ ನ್ಯಾಯಾಪೀಠ, ಈಗಾಗಲೇ ಆಸಿಡ್ ಮಾರಾಟ ಮತ್ತು ಕೊಳ್ಳುವುದರ ಬಗ್ಗೆ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಸೂಚನೆಗಳನ್ನು ಹೊರಡಿಸಿದೆ. "ಈ ಸೂಚನೆಗಳನ್ನು ಪಾಲಿಸಲಾಗುತ್ತಿದೆಯೇ?" ಎಂದು ಪ್ರಶ್ನಿಸಿ ಈ ಎರಡು ಪ್ರಕರಣಗಳ ಬಗ್ಗೆ ಸ್ವಯಂಪ್ರೇರಿತ ಕ್ರಮ ತೆಗೆದುಕೊಂಡು ಮಧ್ಯಾಹ್ನ ಮೂರು ಘಂಟೆಯೊಳಗೆ ವರದಿ ನೀಡುವಂತೆ ಪಬ್ಲಿಕ್ ಪ್ರಾಸೆಕ್ಯೂಟರ್ ಅವರಿಗೆ ಸೂಚನೆ ನೀಡಿದೆ.