ರೈತರನ್ನು ತಡೆಯುತ್ತಿರುವ ಪೊಲೀಸರು 
ಪ್ರಧಾನ ಸುದ್ದಿ

ಶಾಶ್ವತ ನೀರಾವರಿಗೆ ಆಗ್ರಹಿಸಿ ಬೃಹತ್ ರ್ಯಾಲಿ: ರೈತರ ಮೇಲೆ ಲಾಠಿ ಚಾರ್ಜ್

ಶಾಶ್ವತ ನೀರಾವರಿ ಯೋಜನೆ ಜಾರಿಗೆ ಒತ್ತಾಯಿಸಿ ಚಿಕ್ಕಬಳ್ಳಾಪುರ ಹಾಗೂ ಕೋಲಾರದಿಂದ ಸಾವಿರಾರು ರೈತರು ಬೃಹತ್ ಟ್ರ್ಯಾಕ್ಟರ್ ರ್ಯಾಲಿಯೊಂದಿಗೆ...

ಬೆಂಗಳೂರು: ಶಾಶ್ವತ ನೀರಾವರಿ ಯೋಜನೆ ಜಾರಿಗೆ ಒತ್ತಾಯಿಸಿ ಚಿಕ್ಕಬಳ್ಳಾಪುರ ಹಾಗೂ ಕೋಲಾರದಿಂದ ಸಾವಿರಾರು ರೈತರು ಬೃಹತ್ ಟ್ರ್ಯಾಕ್ಟರ್ ರ್ಯಾಲಿಯೊಂದಿಗೆ ವಿಧಾಸೌಧದತ್ತ ಬರುತ್ತಿದ್ದ ರೈತರನ್ನು ಪೊಲೀಸರು ಮೇಖ್ರಿ ಸರ್ಕಲ್ ಬಳಿ ತಡೆದಿದ್ದು, ರೊಚ್ಚಿಗೆದ್ದ ರೈತರು ರಸ್ತೆಯಲ್ಲೇ ಪ್ರತಿಭಟನೆ ನಡೆಸಿದರು. ಇದರಿಂದಾಗಿ ಏರ್ ಫೋರ್ಟ್ ರಸ್ತೆಯಲ್ಲಿ ಭಾರಿ ಟ್ರಾಫಿಕ್ ಜಾಮ್ ಉಂಟಾಗಿತ್ತು.
ವಿಧಾಸೌಧ ಹಾಗೂ ಮುಖ್ಯಮಂತ್ರಿಗಳ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ರೈತರನ್ನು ಪೊಲೀಸರು ಮೇಖ್ರಿ ಸರ್ಕಲ್ ಬಳಿ ತಡೆದರು. ಆಕ್ರೋಶಗೊಂಡ ರೈತರು ಬಿಎಂಟಿಸಿ ಬಸ್ ಹಾಗೂ ಕಾರುಗಳ ಮೇಲೆ ಕಲ್ಲು ತೂರಿದ ಘಟನೆಯೂ ನಡೆಯಿತು. ಈ ವೇಳೆ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ರೈತರ ಮೇಲೆ ಲಘು ಲಾಠಿ ಪ್ರಹಾರ ನಡೆಸಿದರು. ಅಲ್ಲದೆ ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಸೇರಿದಂತೆ ಹಲವು ಮುಖಂಡರನ್ನು ಬಂಧಿಸಿದರು.
ಪೊಲೀಸ್ ಲಾಠಿ ಪ್ರಹಾರದಲ್ಲಿ ಅಶ್ವತ್ಥಪ್ಪ ಎಂಬವರು ಸೇರಿದಂತೆ ಹಲವಾರು ರೈತರು ಗಾಯಗೊಂಡಿದ್ದಾರೆ. ಚಿಕ್ಕಬಳ್ಳಾಪುರದ ರೈತರೊಬ್ಬರಿಗೆ ತಲೆಗೆ, ಕೆಲವರ ಬೆರಳುಗಳಿಗೆ ಏಟು ಬಿದ್ದಿದೆ. ರೈತರ ಪ್ರತಿಭಟನೆಯಿಂದಾಗಿ ಮೇಖ್ರಿ ಸರ್ಕಲ್, ಮೆಜೆಸ್ಟಿಕ್ ಸುತ್ತಮುತ್ತ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ಥವಾಗಿತ್ತು.
ಇದಕ್ಕೂ ಮುನ್ನ ದೇವನಹಳ್ಳಿಯ ರಾಣಿಕ್ರಾಸ್ ಬಳಿಯೇ ಬ್ಯಾರಿಕೇಡ್ ಅನ್ನು ಹಾಕಿ ರೈತರನ್ನು ತಡೆಯಲು ಪೊಲೀಸರು ಯತ್ನಿಸಿದರು. ಆದರೆ ಬ್ಯಾರಿಕೇಡ್ ಮುರಿದು ನೂರಾರು ಟ್ರ್ಯಾಕ್ಟರ್ ಗಳ ಮೂಲಕ ರೈತರು ಮೇಖ್ರಿ ಸರ್ಕಲ್ ಗೆ ಆಗಮಿಸಿದ್ದರು.
ಈ ವೇಳೆ ಮಾತನಾಡಿದ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅವರು, ರೈತರ ಬೃಹತ್ ಪ್ರತಿಭಟನೆ ಹಿನ್ನೆಲೆಯಲ್ಲಿ ಬೆಂಗಳೂರಲ್ಲಿ ಬೆಳಗ್ಗೆ 6 ಗಂಟೆಯಿಂದ ಮಧ್ಯರಾತ್ರಿವರೆಗೆ ಟ್ರ್ಯಾಕ್ಟರ್, ಲಾರಿ ಸಂಚಾರಕ್ಕೆ ಪೊಲೀಸರು ನಿಷೇಧ ಹೇರಿದ್ದರು. ಆದರೆ ಕುಡಿಯಲು, ಬೆಳೆಗೆ ನೀರಿಲ್ಲದೇ ಸಂಕಷ್ಟಕ್ಕೆ ಸಿಲುಕಿರುವ ರೈತರ ಪ್ರತಿಭಟನೆಯನ್ನು ಹತ್ತಿಕ್ಕಲು ಸರ್ಕಾರ ಇಂತಹ ನಿಷೇಧದ ಕ್ರಮ ಕೈಗೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಟ್ರ್ಯಾಕ್ಟರ್, ಲಾರಿ ಸಂಚಾರ ನಿಷೇಧಿಸುವ ಪೊಲೀಸ್ ಕಮಿಷನರ್, ಮುಂದಿನ ದಿನಗಳಲ್ಲಿ ರೈತರು ಸ್ನಾನ ಮಾಡಿಲ್ಲ, ಫೇರ್ ಅಂಡ್ ಲವ್ಲಿ ಹಚ್ಚಿಕೊಂಡಿಲ್ಲ ಎಂದು ಸಬೂಬು ಹೇಳಿ ನಮ್ಮ ಪ್ರತಿಭಟನೆ ತಡೆಯಲೂಬಹುದು ಎಂದು ಕೋಡಿಹಳ್ಳಿ ವ್ಯಂಗ್ಯವಾಡಿದರು. ಏನೇ ಆದರೂ ನಾವು ಟ್ರ್ಯಾಕ್ಟರ್ ಮೂಲಕ ರಾಲಿ ನಡೆಸಿ ಶಾಶ್ವತ ನೀರಾವರಿ ಯೋಜನೆ ಜಾರಿಗೆ ಆಗ್ರಹಿಸುವ ಹೋರಾಟ ಮುಂದುವರಿಸುವುದಾಗಿ ಕೋಡಿಹಳ್ಳಿ ಹೇಳಿದರು. ಪ್ರತಿಭಟನೆಯಿಂದಾಗಿ ಕೋಲಾರ, ತುಮಕೂರು ರಸ್ತೆ ಬಂದ್ ಆಗಿದೆ. ಕೆಆರ್ ಪುರಂ ಬಳಿ ರಸ್ತೆ ತಡೆದ ರೈತರು ಪ್ರತಿಭಟನೆ ನಡೆಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ಮೊದಲ ಬಾರಿಗೆ ದಾಳಿ ಕುರಿತು ಇಸ್ರೇಲ್ ವಿಷಾದ

JC ರಸ್ತೆಯಲ್ಲಿ White-topping ಕಾಮಗಾರಿ: ಆ.30ರವರೆಗೆ ಭಾರಿ ಗಾತ್ರದ ವಾಹನಗಳ ಸಂಚಾರಕ್ಕೆ ನಿರ್ಬಂಧ

ಧರ್ಮಸ್ಥಳ ಪ್ರಕರಣ NIA ತನಿಖೆ ಮಾಡಿದರೆ ಆಕ್ಷೇಪವಿಲ್ಲ: ಸಚಿವ ಸತೀಶ್ ಜಾರಕಿಹೊಳಿ

ಭಾರತ- ಫಿಜಿ ರಕ್ಷಣಾ ಸಹಕಾರ ಕ್ರಿಯಾ ಯೋಜನೆ ಸಿದ್ಧ: ಇಂಡೋ ಪೆಸಿಫಿಕ್‌ ವಲಯದಲ್ಲಿ ಚೀನಾದ ಪ್ರಾಬಲ್ಯ ತಡೆಗೆ ಮಾಸ್ಟರ್ ಪ್ಲಾನ್!

US tariff deadline: ಅಮೆರಿಕದ ಶೇ. 50 ರಷ್ಟು ಸುಂಕ ಆಗಸ್ಟ್ 27 ರಿಂದ ಜಾರಿ; ಮಂಗಳವಾರ ಮಹತ್ವದ PMO ಸಭೆ; ಮೋದಿ ಹೇಳಿದ್ದೇನು? Video

SCROLL FOR NEXT