ಸಂಗ್ರಹ ಚಿತ್ರ 
ಪ್ರಧಾನ ಸುದ್ದಿ

ನೋಟ್ ನಿಷೇಧದ ಬಳಿಕ ತೆರೆದ ಬ್ಯಾಂಕ್ ಗಳು; ನೋಟ್ ಬದಲಾವಣೆಗಾಗಿ ಸಾಲುಗಟ್ಟಿ ನಿಂತ ಜನ

500 ಮತ್ತು 1000 ಮುಖಬೆಲೆಯ ನೋಟುಗಳು ರದ್ದಾದ ಬಳಿಕ ಇದೇ ಮೊದಲ ಬಾರಿಗೆ ಬ್ಯಾಂಕ್ ಗಳು ಕಾರ್ಯಾರಂಭ ಮಾಡಿದ್ದು, ಹಳೆಯ ನೋಟುಗಳ ಬದಲಾವಣೆಗೆ ಜನತೆ ಬ್ಯಾಂಕ್ ಗಳ ಮುಂದೆ ಮುಗಿಬಿದ್ದಿದ್ದಾರೆ.

ಬೆಂಗಳೂರು: 500 ಮತ್ತು 1000 ಮುಖಬೆಲೆಯ ನೋಟುಗಳು ರದ್ದಾದ ಬಳಿಕ ಇದೇ ಮೊದಲ ಬಾರಿಗೆ ಬ್ಯಾಂಕ್ ಗಳು ಕಾರ್ಯಾರಂಭ ಮಾಡಿದ್ದು, ಹಳೆಯ ನೋಟುಗಳ ಬದಲಾವಣೆಗೆ ಜನತೆ ಬ್ಯಾಂಕ್ ಗಳ ಮುಂದೆ ಮುಗಿಬಿದ್ದಿದ್ದಾರೆ.

ರಾಜ್ಯದ ವಿವಿಧ ಜಿಲ್ಲೆಗಳ ಬ್ಯಾಂಕ್ ಗಳ ಮುಂದೆ ಬೆಳಗ್ಗಿನಿಂದಲೇ ಜನ ಸಾಲುಗಟ್ಟಿ ನಿಂತಿದ್ದು, ಹಳೆಯ ನೋಟುಗಳ ಬದಲಿಗೆ ಹೊಸ ನೋಟುಗಳನ್ನು ಪಡೆಯಲು ಹರಸಾಹಸ ಪಡುತ್ತಿದ್ದಾರೆ. ಹೊಸ ಮಾದರಿಯ ನೋಟುಗಳನ್ನು ಇಂದು ಆರ್ ಬಿಐ ಬಿಡುಗಡೆ ಮಾಡಿದ್ದು, ಈಗಾಗಲೇ ದೇಶಾದ್ಯಂತ ಎಲ್ಲ ಬ್ಯಾಂಕುಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಹೊಸ 500 ಮತ್ತು 1000 ರು. ಮುಖಬೆಲೆಯ ನೋಟುಗಳನ್ನು ರವಾನೆ ಮಾಡಿದೆ.

ಈ ಹಿನ್ನಲೆಯಲ್ಲಿ ಬ್ಯಾಂಕ್ ಗಳಿಗೆ ಜನತೆ ಧಾವಿಸುತ್ತಿದ್ದು, ಅಪಾರ ಪ್ರಮಾಣದ ಜನರು ಸಾಲುಗಟ್ಟಿ ನಿಂತಿದ್ದಾರೆ. ಮೈಸೂರು, ಮಂಡ್ಯ, ಚಾಮರಾಜನಗರ,  ಮಂಗಳೂರು ಸೇರಿದಂತೆ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿರುವ ಸರ್ಕಾರಿ ಮತ್ತು ಸರ್ಕಾರಿಯೇತರ ಬ್ಯಾಂಕ್ ಗಳ ಮುಂದೆ ಜನತೆ ಸಾಲುಗಟ್ಟಿ ನಿಂತಿದ್ದಾರೆ.

ಇನ್ನು ಬೆಂಗಳೂರಿನ ವಿವಿಧೆಡೆ ಬ್ಯಾಂಕ್ ಗಳ ಮುಂದೆ ಜನ ಸಾಲುಗಟ್ಟಿ ನಿಂತಿದ್ದು, ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕಚೇರಿಗೂ ಸಾಕಷ್ಟು ಮಂದಿ ಹೊಸ ನೋಟುಗಳಿಗಾಗಿ ಧಾವಿಸಿದ್ದಾರೆ  ಎಂದು ತಿಳಿದುಬಂದಿದೆ. ಇದಲ್ಲದೆ ಮೈಸೂರು ಬ್ಯಾಂಕ್ ವೃತ್ತ, ಚಾಮರಾಜಪೇಟೆ, ಶ್ರೀನಗರ, ಮಲ್ಲೇಶ್ವರಂ, ಜಯನಗರ ಸೇರಿದಂತೆ ವಿವಿಧೆಡೆ ಬ್ಯಾಂಕ್ ಗಳ ಮುಂದೆ ಸಾವಿರು ಜನ ಸಾಲುಗಟ್ಟಿ ನಿಂತಿರುವ ದೃಶ್ಯ ಸಾಮಾನ್ಯವಾಗಿದೆ.

ದಿನವೊಂದಕ್ಕೆ ಗರಿಷ್ಠ 4 ಸಾವಿರ ಮಾತ್ರ ಬದಲಾವಣೆ, ಠೇವಣಿಗೆ ಯಾವುದೇ ಮಿತಿಯಿಲ್ಲ
ಪ್ರಧಾನಿ ನರೇಂದ್ರ ಮೋದಿ ಅವರ ಸೂಚನೆ ಮೇರೆಗೆ ಬ್ಯಾಂಕ್ ಗಳಲ್ಲಿ ಹಳೆಯ ನೋಟುಗಳನ್ನು ಬದಲಾಯಿಸಲಿಚ್ಛಿಸುವವರು ದಿನವೊಂದಕ್ಕೆ ಕೇವಲ 4 ಸಾವಿರ ರುಗಳನ್ನು ಮಾತ್ರ ಬದಲಾಯಿಸಿಕೊಳ್ಳಬಹುದಾಗಿದೆ. ಅಂತೆಯೇ  ಎಟಿಎಂಗಳ ಮೂಲಕ ಹಣ ಪಡೆಯಲಿಚ್ಚಿಸುವವರು ದಿನಕ್ಕೆ ಗರಿಷ್ಠ 10 ಸಾವಿರ ರು. ಮತ್ತು ವಾರಕ್ಕೆ ಗರಿಷ್ಠ 20 ಸಾವಿರ ರು.ಹಣವನ್ನು ಮಾತ್ರ ಡ್ರಾ ಮಾಡಬಹುದಾಗಿದೆ. ಇನ್ನು ಹಳೆಯ ನೋಟುಗಳನ್ನು ಬ್ಯಾಂಕ್ ನಲ್ಲಿ ಠೇವಣಿ  ಇಡಲಿಚ್ಛಿಸುವವರಿಗೆ ಯಾವುದೇ ರೀತಿಯ ಮಿತಿ ಹೇರಲಾಗಿಲ್ಲ. ಎಷ್ಟು ಪ್ರಮಾಣದ ಮೊತ್ತವನ್ನಾದರೂ ಏಕಕಾಲದಲ್ಲಿ ಠೇವಣಿ ಇಡಬಹುದಾಗಿದೆ.

ಕೆವೈಸಿ (ನಿಮ್ಮ ಗ್ರಾಹಕರ ತಿಳಿಯಿರಿ) ಆಗಿರುವ ಗ್ರಾಹಕರು ಅನಿರ್ಧಿಷ್ಟ ಪ್ರಮಾಣದ ಮೊತ್ತವನ್ನು ಏಕಕಾಲದಲ್ಲಿ ಠೇವಣಿ ಇಡಬಹುದಾಗಿದೆ. ಕೈವೈಸಿ ಆಗಿರದ ಗ್ರಾಹಕರು ದಿನವೊಂದಕ್ಕೆ ಗರಿಷ್ಟ 50 ಸಾವಿರ ಹಣವನ್ನು ಮಾತ್ರ ಠೇವಣಿ  ಇಡಬಹುದಾಗಿದೆ. 50 ಸಾವಿರಕ್ಕೂ ಅಧಿಕ ಹಣ ಹೊಂದಿರುವ ಗ್ರಾಹಕರು ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್ ಅಥವಾ ಡ್ರೈವಿಂಗ್ ಲೈಸೆನ್ಸ್ ಮೂಲಕ ಹಣವನ್ನು ಠೇವಣಿ ಇಡಬಹುದಾಗಿದೆ. ಆದರೆ 2.5ಲಕ್ಷಕ್ಕೂ ಅಧಿಕ ಹಣವನ್ನು ಠೇವಣಿ  ಇಡಲಿರುವ ಗ್ರಾಹಕರಿಗೆ ತೆರಿಗೆ ಹಾಕುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಹೀಗಾಗಿ 2.5ಲಕ್ಷಕ್ಕೂ ಅಧಿಕ ಹಣವನ್ನು ಠೇವಣಿ ಇಡಲಿರುವ ಗ್ರಾಹಕರ ಆ ಹಣಕ್ಕೆ ತೆರಿಗೆ ಕೂಡ ನೀಡಬೇಕಿದೆ. ಅಲ್ಲದೆ ಆ ಹಣಕ್ಕೆ ಸೂಕ್ತ  ದಾಖಲೆಗಳನ್ನು ಅಧಿಕಾರಿಗಳಿಗೆ ಅಥವಾ ಬ್ಯಾಂಕ್ ಸಿಬ್ಬಂದಿಗೆ ನೀಡಬೇಕಿದೆ.

ಬ್ಯಾಂಕ್ ಗಳ ಭದ್ರತೆ ಹೆಚ್ಚಳ

ಬ್ಯಾಂಕ್ ಗಳತ್ತ ಜನ ಧಾವಿಸುತ್ತಿರುವ ಹಿನ್ನಲೆಯಲ್ಲಿ ಬ್ಯಾಂಕ್ ಗಳಿಗೆ ನೀಡಲಾಗಿರುವ ಭದ್ರತೆಯನ್ನು ದ್ವಿಗುಣಗೊಳಿಸಲಾಗಿದೆ.  ಸ್ಥಳೀಯ ಪೊಲೀಸ್ ಅಧಿಕಾರಿಗಳು ಹಾಗೂ ಹಲವು ಪೇದೆಗಳನ್ನು ಬ್ಯಾಂಕ್ ನಲ್ಲಿ ರಕ್ಷಣೆಗೆ  ನಿಯೋಜಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

ಬೆಂಗಳೂರು: 6 ವರ್ಷದ ಬಾಲಕಿ ಅಪಹರಿಸಿ ಹತ್ಯೆ ; ಕೊಲೆಗೂ ಮುನ್ನ ಲೈಂಗಿಕ ದೌರ್ಜನ್ಯ - ಶವ ಪರೀಕ್ಷೆ ವೇಳೆ ಸತ್ಯ ಬಹಿರಂಗ!

ಮಹಿಳಾ ಟೆಕ್ಕಿ ಸಾವಿನ ಕೇಸ್ ಗೆ ಬಿಗ್ ಟ್ವಿಸ್ಟ್: ಹತ್ಯೆಗೂ ಮುನ್ನ PU ವಿದ್ಯಾರ್ಥಿಯಿಂದ ರೇಪ್; ಸಾಕ್ಷಿ ನಾಶಕ್ಕೆ ಬೆಂಕಿ ಹಚ್ಚಿದ ಕರ್ನಲ್ ಕುರೈ!

SCROLL FOR NEXT