ಪ್ರಧಾನ ಸುದ್ದಿ

ಲೋಕಸಭೆ ಕಲಾಪ ನಾಳೆಗೆ ಮುಂದೂಡಿಕೆ, ರಾಜ್ಯಸಭೆ ಕಲಾಪ ಆರಂಭ

Srinivasamurthy VN

ನವದೆಹಲಿ: ತೀವ್ರ ಕುತೂಹಲದೊಂದಿಗೆ ಆರಂಭವಾದ ಲೋಕಸಭಾ ಕಲಾಪವನ್ನು ಗುರುವಾರಕ್ಕೆ ಮುಂದೂಡಲಾಗಿದೆ.

ಒಂದು ತಿಂಗಳ ಕಾಲ ನಡೆಯುವ ಚಳಿಗಾಲದ ಸಂಸತ್ ಕಲಾಪ ಇಂದು ಆರಂಭವಾಗಿದ್ದು, ದಿವಂಗತ ಮಾಜಿ ಲೋಕಸಭಾ ಸದಸ್ಯರಿಗೆ ಸಂತಾಪ ಸೂಚಿಸಿದ ಬಳಿಕ ಕಲಾಪವನ್ನು ನಾಳೆಗೆ ಸ್ಪೀಕರ್ ಮುಂದೂಡಿದ್ದಾರೆ. ಕಳೆದ  ಆಗಸ್ಚ್ ತಿಂಗಳಲ್ಲಿ ಸಾವನ್ನಪ್ಪಿದ್ದ ಸಂಸದ ಟಿಎಂಸಿ ಸಂಸದೆ ರೇಣುಕಾ ಸಿನ್ಹಾ, ಮಾಜಿ ಸಂಸದ ಆರಿಫ್ ಬೇಗ್, ಪಿ. ಕಣ್ಣನ್, ಹರ್ಷವರ್ಧನ್, ಜಯವಂತಿಬೆನ್ ಮೆಹ್ತಾ ಹಾಗೂ ಉಷಾ ವರ್ಮಾ ಅವರಿಗೆ ಕಲಾಪದಲ್ಲಿ ಸಂತಾಪ ಸೂಚಿಸಿ  ಕಲಾಪವನ್ನು ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ನಾಳೆಗೆ ಮುಂದೂಡಿದರು.

ಇದೇ ವೇಳೆ ಕಳೆದ ಸೆಪ್ಟೆಂಬರ್ 28ರಂದು ಸಾವನ್ನಪ್ಪಿದ ಇಸ್ರೇಲ್ ಮಾಜಿ ಅಧ್ಯಕ್ಷ ಶಿಮಾನ್ ಪೆರೆಸ್, ಅಕ್ಟೋಬರ್ 13ರಂದು ಮೃತರಾದ ಥಾಯ್ ಲೆಂಡ್ ರಾಜ ಭುಮಿಬೋಲ್ ಅದುಲ್ಯಡೆಜ್ ಮತ್ತು ಸ್ವಾಮಿನಾರಾಯಣ ಸಂಸ್ಥೆಯ  ಹಿರಿಯ ಸ್ಪಾಮಿಜಿ ನಾರಾಯಣ ಸ್ವರೂಪದಾಸ್ ಅವರ ಸಾವಿಗೆ ಸಂತಾಪ ಸೂಚಿಸಲಾಯಿತು.

ರಾಜ್ಯಸಭೆ ಕಲಾಪ ಆರಂಭ
ಇನ್ನುನೋಟು ನಿಷೇಧ ಕುರಿತ ಚರ್ಚೆಯನ್ನೇ ಪ್ರಮುಖವಾಗಿಟ್ಟುಕೊಂಡು ರಾಜ್ಯಸಭೆ ಕಲಾಪ ಆರಂಭವಾಗಿದ್ದು, ರಾಜ್ಯಸಭೆ ಉಪಾಧ್ಯಕ್ಷ ಪಿಜೆ ಕುರಿಯನ್ ಅವರ ಉಪಸ್ಥಿತಯಲ್ಲಿ ರಾಜ್ಯಸಭೆ ಕಲಾಪ ನಡೆಯುತ್ತಿದೆ. ಇಂದು ಸಂಜೆ 6  ಗಂಟೆಯವರೆಗೂ ರಾಜ್ಯಸಭೆ ಕಲಾಪ ನಡೆಯಲಿದ್ದು, ನೋಟುನಿಷೇಧವೇ ಪ್ರತಿಪಕ್ಷಗಳ ಪ್ರಮುಖ ಅಸ್ತ್ರವಾಗಿದೆ. ಇದೇ ವಿಚಾರದ ಹಿನ್ನಲೆಯಲ್ಲಿ ಇಂದು ಚರ್ಚೆ ನಡೆಯುತ್ತಿದ್ದು, ರಾಜ್ಯಸಭೆ ಉಪಾಧ್ಯಕ್ಷ ಪಿಜೆ ಕುರಿಯನ್ ಈ ವಿಚಾರದ  ಕುರಿತು ಮಾತ್ರ ಚರ್ಚಿಸುವಂತೆ ಸದಸ್ಯರಿಗೆ ನೋಟಿಸ್ ನೀಡಿದ್ದಾರೆ. ಪ್ರಮುಖ ಪ್ರತಿಪಕ್ಷಗಳಾದ ಕಾಂಗ್ರೆಸ್, ಟಿಎಂಸಿ, ಎಡಪಕ್ಷಗಳು ಹಾಗೂ ಜೆಡಿಯು ಸದಸ್ಯರು ನೋಟು ನಿಷೇಧ ಕುರಿತಂತೆ ಚರ್ಚಿಸುವಂತೆ ನೋಟಿಸ್ ನೀಡಿದ್ದಾರೆ.

SCROLL FOR NEXT