ಪ್ರಧಾನ ಸುದ್ದಿ

ವಿವಾದಿತ ಧರ್ಮಗುರು ಝಾಕಿರ್ ನಾಯ್ಕ್ ವಿರುದ್ಧ ಎಫ್ ಐಆರ್ ದಾಖಲು!

Srinivasamurthy VN

ನವದೆಹಲಿ: ಪ್ರಮುಖ ಬೆಳವಣಿಗೆಯೊಂದರಲ್ಲಿ ವಿವಾದಿತ ಧರ್ಮ ಪ್ರಚಾರಕ ಝಾಕಿರ್ ನಾಯ್ಕ್ ವಿರುದ್ಧ ಎನ್ ಐಎ ಅಧಿಕಾರಿಗಳು ಎಫ್ ಐಆರ್ ದಾಖಲಿಸಲಿದ್ದು, ಝಾಕಿರ್ ನಾಯ್ಕ್ ಧಾರ್ಮಿಕ ಸಂಘಟನೆಗೆ ಕೇಂದ್ರ ಸರ್ಕಾರ ನಿಷೇಧ  ಹೇರಿದೆ.

ಭಯೋತ್ಪಾದನೆಗೆ ಪ್ರಚೋದನೆ ನೀಡುತ್ತಿರುವ ಆರೋಪದ ಮೇರೆಗೆ ಝಾಕಿರ್ ನಾಯ್ಕ್ ಹಾಗೂ ಅವರ ಇಸ್ಲಾಮಿಕ್ ರೀಸರ್ಚ್ ಫೌಂಡೇಷನ್ (ಐಆರ್ ಎಫ್) ವಿರುದ್ಧ ಎನ್ ಐಎ ಅಧಿಕಾರಿಗಳು ಸೆಕ್ಷನ್ 153 ಮತ್ತು ಯುಎಪಿಎ  ಕಾಯ್ದೆಯಡಿಯಲ್ಲಿ ಎಫ್ ಐಆರ್ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ. ಅಂತೆಯೇ ಝಾಕಿರ್ ನಾಯ್ಕ್ ಅವರ ಐಆರ್ ಎಫ್ ಸಂಘಟನೆಯನ್ನು ಕೇಂದ್ರ ಸರ್ಕಾರ ಭಾರತದಿಂದ ನಿಷೇಧಿಸಿದ್ದು, ಸಂಘಟನೆಗೆ ಬರುತ್ತಿರುವ ವಿದೇಶಿ  ಆರ್ಥಿಕ ನೆರವನ್ನು ತಡೆಹಿಡಿಯಲಾಗಿದೆ ಎಂದು ತಿಳಿದುಬಂದಿದೆ.

ಝಾಕಿರ್ ನಾಯ್ಕ್ ಮುಂಬೈ ಕಚೇರಿಗಳ ಮೇಲೆ ಎನ್ ಐಎ ದಾಳಿ
ಇದೇ ವೇಳೆ ಝಾಕಿರ್ ನಾಯ್ಕ್ ಕುರಿತು ಮಾಹಿತಿ ಕಲೆಹಾಕಿರುವ ಎನ್ ಐಎ ಅಧಿಕಾರಿಗಳು ಝಾಕಿರ್ ನಾಯ್ಕ್ ಸೇರಿದ ಮುಂಬೈನಲ್ಲಿರುವ 10 ಐಎರ್ ಎಫ್ ಸಂಘಟನೆಯ ಕೇಂದ್ರಗಳ ಮೇಲೆ ದಾಳಿ ಮಾಡಿ, ದಾಖಲೆಗಳನ್ನು  ವಶಪಡಿಸಿಕೊಂಡಿದ್ದಾರೆ. ಅಂತೆಯೇ ಶೀಘ್ರದಲ್ಲೇ ಝಾಕಿರ್ ನಾಯ್ಕ್ ಎನ್ ಐಎ ವಿಚಾರಣೆಗೆ ಆಗಮಿಸಿ ವಿಚಾರಣೆ ಎದುರಿಸುವಂತೆ ನೋಟಿಸ್ ನೀಡುವ ಕುರಿತು ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಮುಖಂಡ ಜಾಫರ್ ಇಸ್ಲಾಮ್ ಅವರು, ಝಾಕಿರ್ ನಾಯ್ಕ್ ಅವರ ಕಾನೂನು ಬಾಹಿರ ಚಟುವಟಿಕೆಗಳ ಕುರಿತು ಕೇಂದ್ರ ಸರ್ಕಾರ ಮಾಹಿತಿ ಕಲೆಹಾಕಿತ್ತು. ಅವುಗಳ ಆಧಾರದ ಮೇಲೆ ಇದೀಗ  ಕ್ರಮ ಕೈಗೊಳ್ಳಲಾಗಿದೆ. ಹೀಗಾಗಿ ವಿದೇಶದಲ್ಲಿರುವ ಝಾಕಿರ್ ನಾಯ್ಕ್ ಭಾರತಕ್ಕೆ ವಾಪಸ್ ಆಗಿ ವಿಚಾರಣೆ ಎದುರಿಸಲೇಬೇಕು ಎಂದು ಅವರು ಹೇಳಿದ್ದಾರೆ.

ಕಳೆದ ಮಂಗಳವಾರವಷ್ಟೇ ಕೇಂದ್ರ ಗೃಹ ಸಚಿವಾಲಯ ಝಾಕಿರ್ ನಾಯ್ಕ್ ಅವರ ಐಆರ್ ಎಫ್ ಸಂಘಟನೆಯನ್ನು ಕಾನೂನು ಬಾಹಿರ ಎಂದು ಘೋಷಿಸಿ ನಿಷೇಧ ಹೇರಿತ್ತು. ಪ್ರಚೋದನಾತ್ಮಕ ಭಾಷಣ ಹಾಗೂ ಭಯೋತ್ಪಾದನೆಗೆ  ಕುಮ್ಮಕ್ಕು ನೀಡಿದ ಆರೋಪದ ಮೇಲೆ ಐಆಱ್ ಎಫ್ ಗೆ ಕೇಂದ್ರ ಸರ್ಕಾರ 5 ವರ್ಷಗಳ ನಿಷೇಧ ಹೇರಿತ್ತು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಈ ಹಿಂದೆ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ  ನಿರ್ಣಯಕೈಗೊಳ್ಳಲಾಗಿತ್ತು ಎಂದು ತಿಳಿದುಬಂದಿದೆ.

SCROLL FOR NEXT