ಖಟ್ಮಂಡು: ನೇಪಾಳದಲ್ಲಿ ಪತಂಜಲಿ ಆಯುರ್ವೇದ ಕಾರ್ಖಾನೆ ಉದ್ಘಾಟಿಸಿದ ಭಾರತದ ಯೋಗ ಗುರು ಬಾಬಾ ರಾಮದೇವ್, ಮುಂದಿನ ದಶಕದಲ್ಲಿ ನೇಪಾಳದಲ್ಲಿ ೧೦೦ ಬಿಲಿಯನ್ ರೂ ಹೂಡುವುದಾಗಿ ಹೇಳಿದ್ದಾರೆ. ಹಿಮಾಲಯ ರಾಷ್ಟ್ರದಲ್ಲಿ ಇದರಿಂದ ಉತ್ಪಾದನೆ ಮತ್ತು ಉದ್ಯೋಗ ಹೆಚ್ಚಳವಾಗಲಿದೆ ಎಂದು ಕೂಡ ರಾಮದೇವ್ ಹೇಳಿದ್ದಾರೆ.
ಮಂಗಳವಾರದಿಂದ ಒಂದು ವಾರದ ಪ್ರವಾಸದಲ್ಲಿರುವ ರಾಮದೇವ್, ಪತಂಜಲಿ ಉತ್ಪನ್ನಗಳಿಂದ ಬಂದ ಲಾಭವನ್ನು ತೆಗೆದುಕೊಳ್ಳದೆ ನೇಪಾಳದಲ್ಲಿಯೇ ಮರುಹೂಡಿಕೆ ಮಾಡುವುದಾಗಿ ಹೇಳಿದ್ದಾರೆ.
ಪತಂಜಲಿ ಈಗಾಗಲೇ ದಕ್ಷಿಣ ಬಾರಾ ಜಿಲ್ಲೆಯಲ್ಲಿ ೧.೫ ಬಿಲಿಯನ್ ರೂ ಹೂಡಿಕೆಯೊಂದಿಗೆ ಕಾರ್ಖಾನೆ ಸ್ಥಾಪಿಸಿದ್ದು, ಇದನ್ನು ಬುಧವಾರ ನೇಪಾಳ ಅಧ್ಯಕ್ಷ ವಿದ್ಯಾ ದೇವಿ ಬಂಢಾರಿ ಮತ್ತು ರಾಮದೇವ್ ಉದ್ಘಾಟಿಸಿದ್ದಾರೆ.
ಹಂತಹಂತವಾಗಿ ಹೂಡಿಕೆ ಮಾಡುವುದಾಗಿ ಯೋಗ ಗುರು ಹೇಳಿದ್ದು, ಇದು ನೇಪಾಳದ ಜನರಿಗೆ ಲಾಭ ತರಲಿದೆ ಎಂದಿದ್ದಾರೆ.
"ನಾವು ಇಲ್ಲಿಂದ ಬರುವ ಲಾಭವನ್ನು ಭಾರತಕ್ಕೆ ಕೊಂಡೊಯ್ಯುವುದಿಲ್ಲ" ಎಂದು ಘೋಷಿಸಿರುವ ರಾಮದೇವ್ "ಆ ಲಾಭವನ್ನು ನೇಪಾಳದಲ್ಲಿಯೇ ಮರುಹೂಡಿಕೆ ಮಾಡಲಿದ್ದೇವೆ, ಇದರಿಂದ ಉತ್ಪಾದನೆ ಮತ್ತು ಉದ್ಯೋಗ ಹೆಚ್ಚಳಗೊಳ್ಳಲಿದೆ" ಎಂದಿದ್ದಾರೆ.
ನೇಪಾಳ ಭಾರತದಿಂದ ಪ್ರತಿ ವರ್ಷ ೧ ಬಿಲಿಯನ್ ರೂ ಮೌಲ್ಯದ ಪತಂಜಲಿ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುತ್ತದೆ.
ಈಮಧ್ಯೆ ಬೀರಗುಂಜ್ ನಲ್ಲಿ ಯೋಗ ಶಿಬಿರವನ್ನು ಕೂಡ ರಾಮದೇವ್ ಆಯೋಜಿಸಿದ್ದು, ರಾಷ್ಟ್ರಪತಿ ಬಂಢಾರಿ, ಪ್ರಧಾನಿ ಪುಷ್ಪ ಕಮಲ್ ದಹಲ್, ನೇಪಾಳ ಕಾಂಗ್ರೆಸ್ ಅಧ್ಯಕ್ಷ ಶೇರ್ ಬಹಾದ್ದೂರ್ ದೇವುಬಾ ಅವರುಗಳನ್ನು ಆಹ್ವಾನಿಸಲಾಗಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos