ಡಿ ಎಂ ಕೆ ಅಧ್ಯಕ್ಷ ಎಂ ಕರುಣಾನಿಧಿ
ಚೆನ್ನೈ: ಅನಾರೋಗ್ಯದಿಂದ ಬಳಲುತ್ತಿರುವ ತಮಿಳುನಾಡಿನ ಮುಖ್ಯಮಂತ್ರಿ ಜೆ ಜಯಲಲಿತಾ ಅವರ ಬಳಿಯಿದ್ದ ಖಾತೆಗಳನ್ನು ವಿತ್ತ ಸಚಿವ ಓ ಪನ್ನೀರ್ಸೆಲ್ವಂ ಅವರಿಗೆ ರಾಜ್ಯಪಾಲ ವಿದ್ಯಾಸಾಗರ್ ರಾವ್ ಹಸ್ತಾಂತರಿಸಿರುವುದು, 'ನಡೆದಿರುವ ಅದ್ಭುತ' ಎಂದು ಡಿ ಎಂ ಕೆ ಅಧ್ಯಕ್ಷ ಎಂ ಕರುಣಾನಿಧಿ ಹೇಳಿದ್ದಾರೆ.
ಈ ವಿಷಯವಾಗಿ ಹೇಳಿಕೆ ಬಿಡುಗಡೆ ಮಾಡಿರುವ ಕರುಣಾನಿಧಿ, ಜಯಲಲಿತಾ ಕಳೆದ 19 ದಿನಗಳಿಂದ ಆಸ್ಪತ್ರೆಯಲ್ಲಿದ್ದಾರೆ ಮತ್ತು ಅವರು ಇನ್ನು ಹೆಚ್ಚು ದಿನಗಳವರೆಗೆ ಅಲ್ಲಿರುವಂತೆ ಸೂಚಿಸಲಾಗಿದೆ. ತಮಿಳು ನಾಡು ರಾಜ್ಯಪಾಲ, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಕೇಂದ್ರ ಸಚಿವ ಎಂ ವೆಂಕಯ್ಯ ನಾಯ್ಡು ಮತ್ತಿತರ ಮುಖಂಡರಿಗೆ ಅಪೋಲೋ ಆಸ್ಪತ್ರೆಯಲ್ಲಿ ಜಯಲಲಿತಾ ಅವರ ಆರೋಗ್ಯ ವಿಚಾರಿಸಲು ಕೂಡ ಅವಕಾಶ ನೀಡಿಲ್ಲ.
ಇಂತಹ ಪರಿಸ್ಥಿತಿಯಲ್ಲಿ, ಜಯಲಲಿತಾ ಅವರ ಸಲಹೆ ಮೇರೆಗೆ ಅವರ ಖಾತೆಗಳನ್ನು ಮರುಹಂಚಿಕೆ ಮಾಡಿರುವುದು ಅದ್ಭುತ ಎಂದು ಅವರು ಹೇಳಿದ್ದಾರೆ.
ಈ ಅಲ್ಪ ಸಮಯದಲ್ಲಿ ಸಂವಿಧಾನ ನೀಡುವ ಹಲವು ಮಾರ್ಗಗಳನ್ನು ಹಂಗಾಮಿ ರಾಜ್ಯಪಾಲ ವಿದ್ಯಾ ಸಾಗರ್ ರಾವ್ ಅವರು ಸಮಗ್ರವಾಗಿ ಪರಿಶೀಲಿಸಿದ್ದಾರೋ ಇಲ್ಲವೋ ಎಂಬ ಸಂದೇಹವನ್ನು ಕೂಡ ಅಲ್ಲಗೆಳೆಯಲು ಸಾಧ್ಯವಿಲ್ಲ ಎಂದು ಕರುಣಾನಿನಿಧಿ ಹೇಳಿದ್ದಾರೆ.
ಮಂಗಳವಾರ ರಾಜಭವನ ನೀಡಿದ್ದ ಹೇಳಿಕೆಯಲ್ಲಿ, ಸಂವಿಧಾನದ ವಿಧಿ 166 ಅಡಿ ಜಯಲಲಿತಾ ಅವರ ಸಲಹೆ ಮೇರೆಗೆ ಅವರ ಖಾತೆಗಳನ್ನು ಪನ್ನೀರ್ಸೆಲ್ವಂ ಅವರಿಗೆ ಮರುಹಂಚಿಕೆ ಮಾಡಲಾಗಿದೆ ಎಂದು ತಿಳಿಸಿತ್ತು.
ಜಯಲಲಿತಾ ಬಳಿ ಸಾರ್ವಜನಿಕ, ಭಾರತೀಯ ಆಡಳಿತ ಸೇವೆ, ಭಾರತೀಯ ಪೊಲೀಸ್ ಸೇವೆ, ಭಾರತೀಯ ವನ್ಯ ಸೇವೆ, ಸಾಮಾನ್ಯ ಆಡಳಿತ, ಜಿಲ್ಲಾ ಕಂದಾಯ ಅಧಿಕಾರಿಗಳು ಮತ್ತು ಗೃಹ ಖಾತೆಗಳು ಇದ್ದವು.
ಪನ್ನೀರ್ಸೆಲ್ವಂ ಇನ್ನುಮುಂದೆ ಸಂಪುಟ ಸಭೆಗಳ ನೇತೃತ್ವವನ್ನು ಕೂಡ ವಹಿಸಲಿದ್ದಾರೆ ಎಂದು ತಿಳಿಸಲಾಗಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos