ಪ್ರಧಾನ ಸುದ್ದಿ

ಪರಪ್ಪನ ಅಗ್ರಹಾರ ಜೈಲು ಸೇರಿದ ಜಯಾ ಆಪ್ತೆ ಶಶಿಕಲಾ, ಮನೆ ಊಟಕ್ಕೆ ಕೋರ್ಟ್ ನಕಾರ

Lingaraj Badiger
ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ನಾಲ್ಕು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ.ಜಯಲಲಿತಾ ಅವರ ಆಪ್ತೆ ಹಾಗೂ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ.ಕೆ.ಶಶಿಕಲಾ ಅವರು ಬುಧವಾರ ಪರಪ್ಪನ ಅಗ್ರಹಾರದಲ್ಲಿರುವ ಕೇಂದ್ರ ಕಾರಾಗೃಹ ಸೇರಿದ್ದಾರೆ.
ಅಕ್ರಮ ಆಸ್ತಿ ಗಳಿಕೆ ಪ್ರಕರಣದ ಅಪರಾಧಿಗಳಾದ ವಿ.ಕೆ.ಶಶಿಕಲಾ, ಶಶಿಕಲಾ ಅಣ್ಣನ ಪತ್ನಿ ಇ.ಇಳವರಸಿ ಹಾಗೂ ಜಯಾ ದತ್ತು ಪುತ್ರ ಸುಧಾಕರನ್ ಅವರು ಇಂದು ಸಂಜೆ ಪರಪ್ಪನ ಅಗ್ರಹಾರದಲ್ಲಿರುವ ವಿಶೇಷ ನ್ಯಾಯಾಲಯಕ್ಕೆ   ಶರಣಾದರು. 
ಅಪರಾಧಿಗಳನ್ನು ವಿಚಾರಣೆ ನಡೆಸಿದ ನ್ಯಾ. ಅಶ್ವತ್ಥ ನಾರಾಯಣ ಅವರು, ಮೂವರು ಅಪರಾಧಿಗಳನ್ನು ವಶಕ್ಕೆ ಪಡೆದು ಸಾಮಾನ್ಯ ಕೈದಿಗಳಂತೆ ನೋಡಿಕೊಳ್ಳಿ ಹಾಗೂ ಅವರ ವೈದ್ಯಕೀಯ ತಪಾಸಣೆಯ ನಂತರ ವರದಿ ನೀಡುವಂತೆ ಜೈಲು ಅಧಿಕಾರಿಗಳು ಸೂಚಿಸಿದರು. 
ಈ ವೇಳೆ ಮನೆ ಊಟಕ್ಕೆ ಅವಕಾಶ ನೀಡಬೇಕು ಎಂದು ಶಶಿಕಲಾ ಅವರು ಕೋರ್ಟ್ ಗೆ ಮನವಿ ಮಾಡಿದರು. ಆದರೆ ಅವರ ಮನವಿಯನ್ನು ಕೋರ್ಟ್ ತಿರಸ್ಕರಿಸಿದೆ.
ನ್ಯಾಯಾಲಯದ ಪ್ರಕ್ರಿಯೆ ಪೂರ್ಣಗೊಂಡ ನಂತರ ಮೂವರು ಅಪರಾಧಿಗಳನ್ನು ಕೇಂದ್ರ ಕಾರಾಗೃಹಕ್ಕೆ ಕರೆದೊಯ್ಯಲಾಗಿದೆ.
ಈ ಮಧ್ಯೆ ಶಶಿಕಲಾ ಅವರು ಕೇಂದ್ರ ಕಾರಾಗೃಹದ ಸಮೀಪ ಬರುತ್ತಿದ್ದ ಅವರ ಬೆಂಬಲಿಗರ ಕಾರಿನ ಮೇಲೆ ಕಲ್ಲು ಮತ್ತು ಚಪ್ಪಲಿ ತೂರಾಟ ನಡೆದಿದ್ದು, ಕಾರಿನ ಗಾಜುಗಳನ್ನು ಜಖಂಗೊಳಿಸಲಾಗಿದೆ. ಜಯಲಲಿತಾ ಅವರಿಗೆ ಮೋಸ ಮಾಡಿರುವ ಕುರಿತು ಆಕ್ರೋಶ ವ್ಯಕ್ತಪಡಿಸಿದ ಕೆಲವರು ಕಾರಿನ ಮೇಲೆ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.
SCROLL FOR NEXT