ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್
ನವದೆಹಲಿ: ಅಮೆರಿಕಾದಲ್ಲಿ ಭಾರತೀಯರ ವಿದುದ್ಧ ನಡೆಯುತ್ತಿರುವ ಜನಾಂಗೀಯ ದ್ವೇಷ ಅಪರಾಧಗಳ ವಿರುದ್ಧ ಕೇಂದ್ರ ಗಂಭೀರವಾಗಿದ್ದು, ಈ ಪ್ರಕರಣಗಳಲ್ಲಿ ನರೇಂದ್ರ ಮೋದಿ ಸರ್ಕಾರ ಹೇಳಿಕೆ ನೀಡಲಿದೆ ಎಂದು ಗುರುವಾರ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
"ಈ ಸದನದಲ್ಲಿ ನಾನು ಧೃಢಪಡಿಸುವುದೇನೆಂದರೆ, ಅಮೆರಿಕಾದಲ್ಲಿ ಭಾರತೀಯರ ವಿದುದ್ಧ ನಡೆದ ದಾಳಿಗಳ ಬಗ್ಗೆ ಸರ್ಕಾರ ಗಂಭೀರವಾಗಿದೆ ಮತ್ತು ಮುಂದಿನ ವಾರ ಹೇಳಿಕೆ ಬಿಡುಗಡೆ ಮಾಡಲಿದೆ" ಎಂದು ಸಂಸತ್ತಿನದಲ್ಲಿ ಬಜೆಟ್ ಅಧಿವೇಶನ ಮರುಪ್ರಾರಂಭವಾದ ಇಂದು ಲೋಕಸಭೆಯಲ್ಲಿ ರಾಜನಾಥ್ ಸಿಂಗ್ ಹೇಳಿದ್ದಾರೆ.
ಇದಕ್ಕೂ ಮುಂಚಿತವಾಗಿ ಅಮೆರಿಕಾದಲ್ಲಿ ನಡೆಯುತ್ತಿರುವ ಈ ದಾಳಿಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮೌನವಾಗಿರುವುದೇಕೆ ಎಂದು ಕಾಂಗ್ರೆಸ್ ಪ್ರಶ್ನಿಸಿತ್ತು. "ಅಮೆರಿಕಾ ಅಧ್ಯಕ್ಷ ಅಧಿಕಾರ ಸ್ವೀಕರಿಸಿದ ನಂತರ ಇಂತಹ ಪ್ರಕರಣಗಳು ಹೆಚ್ಚಾಗಿವೆ. ಪ್ರಧಾನಿ ಪ್ರತಿ ವಿಷಯಗಳ ಬಗ್ಗೆಯೂ ಟ್ವೀಟ್ ಮಾಡುತ್ತಾರೆ. ಈ ಪ್ರಕರಣದ ಬಗ್ಗೆ ಮೌನವಾಗಿರುವುದೇಕೆ? ಇಂದು ಅವರು ಇದರ ಬಗ್ಗೆ ಹೇಳಿಕೆ ನೀಡಬೇಕು" ಎಂದು ವಿರೋಧ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಆಗ್ರಹಿಸಿದ್ದರು.
ಡೊನಾಲ್ಡ್ ಟ್ರಂಪ್ ಅವರು ಅಮೆರಿಕಾ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ ಭಾರತೀಯರ ವಿರುದ್ಧ ದಾಳಿಯಾದ ಹಲವು ಘಟನೆಗಳು ವರದಿಯಾಗಿವೆ. ಫೆಬ್ರವರಿ ೨೨ ರಂದು ಕನ್ಸಾಸ್ ನಗರದಲ್ಲಿ ಹೈದರಾಬಾದ್ ಮೂಲದ ಶ್ರೀನಿವಾಸ್ ಅವರನ್ನು ಹತ್ಯೆ ಮಾಡಲಾಗಿತ್ತು. ಮಾರ್ಚ್ ೨ ರಂದು ಭಾರತೀಯ ಮೂಲದ ಉದ್ದಿಮೆದಾರ ಹರ್ನಿಶ್ ಪಟೇಲ್ ಅವರನ್ನು ಸೌತ್ ಕರೋಲಿನಾದಲ್ಲಿ ಕೊಲೆಗೈಯ್ಯಲಾಗಿತ್ತು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos