ವಿಜಯವಾಡ: ಯುಗಾದಿ ಸಂವತ್ಸರದ ಹೊಸವರ್ಷ ಬುಧವಾರ ಪ್ರಾರಂಭವಾಗಲಿದ್ದು, ಅದಕ್ಕೆ ಒಂದು ದಿನದ ಮುಂಚಿತವಾಗಿ ನಟ ಮತ್ತು ಜನಸೇನಾ ಪಕ್ಷದ ಅಧ್ಯಕ್ಷ ಪವನ್ ಕಲ್ಯಾಣ್, ಪಕ್ಷಕ್ಕೆ ಯುವ ಮುಖಂಡರು, ವಕ್ತಾರರು, ವಿಷಯ ಬರಹಗಾರರು ಮತ್ತು ವಿಶ್ಲೇಷಕರ ನೇಮಕಾತಿಯನ್ನು ಪ್ರಾರಂಭಿಸಿದ್ದಾರೆ. ಆದರೆ ಸದ್ಯಕ್ಕೆ ಈ ನೇಮಕಾತಿ ಅನಂತಪುರ ಜಿಲ್ಲೆಗಷ್ಟೇ ಸೀಮಿತವಾಗಿದೆ.
ಹೇಳಿಕೆ ಬಿಡುಗಡೆ ಮಾಡಿರುವ ಪವನ್ ಕಲ್ಯಾಣ್, ಸಾಮಾಜಿಕ ಸಮಸ್ಯೆಗಳ ವಿರುದ್ಧ ಹೋರಾಡುವವ ಮುಖಂಡರನ್ನು ರೂಪಿಸಲು ಈ ನೇಮಕಾತಿ ಎಂದಿದ್ದಾರೆ. ರಾಜ್ಯ ಮಟ್ಟದ ಮತ್ತು ಪ್ರಾದೇಶಿಕ ಮಟ್ಟದ ತೊಂದರೆಗಳ ಬಗ್ಗೆ ಆಳವಾದ ಜ್ಞಾನ ಹೊಂದಿರುವವರನ್ನು ಆಹ್ವಾನಿಸುತ್ತಿರುವುದಾಗಿ ಅವರು ಹೇಳಿದ್ದಾರೆ.
ಜನಸೇನಾ ಅಂತರ್ಜಾಲ ತಾಣದಲ್ಲಿ ಅರ್ಜಿ ಲಭ್ಯವಿದ್ದು, ಮಾರ್ಚ್ ೨೮ ರಿಂದ ಏಪ್ರಿಲ್ ೧೪ ರೊಳಗೆ ನೊಂದಾಯಿಸಿಕೊಳ್ಳುವಂತೆ ಕೇಳಿಕೊಳ್ಳಲಾಗಿದೆ.