ಬೆಂಗಳೂರು: ಉತ್ತರ ಪ್ರದೇಶದಲ್ಲಿ ನಿಗೂಢವಾಗಿ ಮೃತಪಟ್ಟ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಆಯುಕ್ತ ಅನುರಾಗ್ ತಿವಾರಿ ಅವರಿಗೆ ಜೀವ ಬೆದರಿಕೆ ಇತ್ತು. ಈ ಕುರಿತು ಅವರು ಕುಟುಂಬದೊಂದಿಗೆ ಚರ್ಚಿಸಿದ್ದರು ಎಂದು ಅವರ ಸಹೋದರ ಮಾಯಾಂಕ್ ತಿವಾರಿ ಅವರು ಶನಿವಾರ ಹೇಳಿದ್ದಾರೆ.
ಮೇ 17ರಂದು ಲಖನೌನ ಹಜರತ್ ಗಂಜ್ ಮೀರಾಬಾಯ್ ಹೆಸ್ಟ್ ಹೌಸ್ ಬಳಿ 2007ನೇ ಬ್ಯಾಚ್ ನ ಕರ್ನಾಟಕ ವೃಂದದ ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಅವರ ಶವ ಪತ್ತೆಯಾಗಿತ್ತು. ರಾಜ್ಯದ ಐಎಎಸ್ ಅಧಿಕಾರಿ ತಮ್ಮ 36ನೇ ಹುಟ್ಟುಹಬ್ಬದಂದೆ ನಿಗೂಢವಾಗಿ ಸಾವನ್ನಪ್ಪಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ತಿವಾರಿ ಸಾವಿನ ಕುರಿತು ಇಂಡಿಯನ್ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿದ ಮಾಯಾಂಕ್ ತಿವಾರಿ ಅವರು, ನನ್ನ ಸಹೋದರನಿಗೆ ಕರ್ನಾಟಕ ಸರ್ಕಾರ ಹಿರಿಯ ಅಧಿಕಾರಿಗಳು ಕಿರುಕುಳ ನೀಡಿದ್ದಾರೆ. ಅಲ್ಲದೆ ತಿವಾರಿಗೆ ಕೆಲವು ವ್ಯಕ್ತಿಗಳು ಜೀವ ಬೆದರಿಕೆ ಹಾಕಿದ್ದನ್ನು ಆತ ನಮ್ಮ ಬಳಿ ಹೇಳಿಕೊಂಡಿದ್ದ. ಅಲ್ಲದೆ ನಮ್ಮ ಕುಟುಂಬಕ್ಕೂ ಬೆದರಿಕೆ ಹಾಕಲಾಗಿತ್ತು. ಇದೇ ಕಾರಣಕ್ಕೆ ಕಳೆದ ಮಾರ್ಚ್ ನಲ್ಲಿ ನನ್ನ ಪೋಷಕರು ಬೆಂಗಳೂರಿಗೆ ಹೋಗಲು ಬಯಸಿದ್ದರು. ಆದರೆ ಅನುರಾಗ್ ತಿವಾರಿ ಬರಬೇಡಿ ಎಂದು ಪೋಷಕರನ್ನು ತಡೆದಿದ್ದರು. ಇದರಲ್ಲಿ ಕೆಲವು ಅಧಿಕಾರಿಗಳು ಹಾಗೂ ಸಚಿವರು ಸಹ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಕಳೆದ ಕೆಲವು ತಿಂಗಳಿಂದ ಅನುರಾಗ್ ಅವರ ವೇತನವನ್ನು ತಡೆ ಹಿಡಿಯಲಾಗಿದೆ. ಆತನ ರಜೆಯನ್ನು ತಿರಸ್ಕರಿಸಿದ್ದಾರೆ. ಹೀಗೆ ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳು ನನ್ನ ಸಹೋದರನಿಗೆ ಹಲವು ರೀತಿಯಲ್ಲಿ ಕಿರುಕುಳ ನೀಡಿದ್ದಾರೆ ಎಂದು ಮಾಯಾಂಕ್ ಆರೋಪಿಸಿದ್ದಾರೆ.
ಅನುರಾಗ್ ಅವರು ಬೀದರ್ ಜಿಲ್ಲಾಧಿಕಾರಿಯಾಗಿದ್ದ ವೇಳೆ ಯಾವುದೇ ಸಮಸ್ಯೆಗಳಿರಲಿಲ್ಲ. ಆದರೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಆಯುಕ್ತರಾಗಿ ಬೆಂಗಳೂರಿಗೆ ಬಂದ ನಂತರ ಇಲಾಖೆಯಲ್ಲಿ ದೊಡ್ಡ ಹಗರಣ ನಡೆದಿರುವುದು ಅವರ ಗಮನಕ್ಕೆ ಬಂದಿದೆ. ಈ ಕುರಿತು ಆತ ತನಿಖೆ ಸಹ ನಡೆಸಿದ್ದರು ಎಂದು ಮಾಯಾಂಕ್ ತಿವಾರಿ ಆರೋಪಿಸಿದ್ದಾರೆ.
ನಾನು ಶೀಘ್ರದಲ್ಲೇ ಬೆಂಗಳೂರಿಗೆ ಬಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಈ ಕುರಿತು ಮಾಹಿತಿ ನೀಡುತ್ತೇನೆ ಮತ್ತು ಅನುರಾಗ್ ಸಾವಿನ ಕುರಿತು ಸೂಕ್ತ ತನಿಖೆ ನಡೆಸುವಂತೆ ಒತ್ತಾಯಿಸುವುದಾಗಿ ಮಾಯಾಂಕ್ ತಿಳಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos