ನವದೆಹಲಿ: ಪಾಕಿಸ್ತಾನದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್ ಅವರು ಜೀವಂತವಾಗಿದ್ದಾರೆ ಎಂದು ದೆಹಲಿಯಲ್ಲಿರುವ ಪಾಕಿಸ್ತಾನದ ಹೈಕಮಿಷನರ್ ಅಬ್ದಲ್ ಬಸಿತ್ ಅವರು ಮಂಗಳವಾರ ಹೇಳಿದ್ದಾರೆ.
'ಜಾಧವ್ ಜೀವಂತವಾಗಿದ್ದಾರೆ ಎಂಬ ಬಗ್ಗೆ ನಾನು ಭರವಸೆ ನೀಡಬಲ್ಲೆ' ಎಂದು ಅಬ್ದುಲ್ ಬಸಿತ್ ಅವರು ಸಿಎನ್ಎನ್ ನ್ಯೂಸ್ 18ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಇದೇ ವೇಳೆ ಜಾಧವ್ ಗಲ್ಲು ಶಿಕ್ಷೆ ಪ್ರಶ್ನಿಸಿ ಅವರ ತಾಯಿ ಸಲ್ಲಿಸಿರುವ ಮೇಲ್ಮನವಿಯನ್ನು ಭಾರತದ ಹೈಕಮಿಷನರ್ ಗೌತಮ್ ಬಂಬವಾಲೆ ಅವರ ಮೂಲಕ ಪಾಕಿಸ್ತಾನದ ವಿದೇಶಾಂಗ ಕಾರ್ಯದರ್ಶಿ ತೆಹಮಿನ ಜಂಜುವಾ ಅವರಿಗೆ ಕಳುಹಿಸಲಾಗಿದೆ ಎಂದು ಬಸಿತ್ ಹೇಳಿದ್ದಾರೆ.
ಗೂಢಚಾರಿಕೆ ನಡೆಸಿದ ಆರೋಪದ ಮೇಲೆ ಜಾಧವ್ ಅವರನ್ನು ಮಾರ್ಚ್ 3, 2016ರಂದು ಬಲೋಚಿಸ್ತಾನದಲ್ಲಿ ಬಂಧಿಸಲಾಗಿತ್ತು. ಆದರೆ ಇತ್ತೀಚಿಗೆ ಪಾಕಿಸ್ತಾನ ಸೇನಾ ಕೋರ್ಟ್ ಜಾಧವ್ ಗಲ್ಲು ಶಿಕ್ಷೆ ವಿಧಿಸಿದ ನಂತರ ಪಾಕಿಸ್ತಾನ ಜಾಧವ್ ಗೆ ರಾಜತಾಂತ್ರಿಕ ನೆರವು ನೀಡಲು ನಿರಾಕರಿಸುತ್ತಿದೆ. ಹೀಗಾಗಿ ಜಾಧವ್ ಜೀವಂತವಾಗಿರುವ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದೆ.