ಪಾತ್ರನಾಮ: ಸನ್ನಿಧಿ (ಅಗ್ನಿ ಸಾಕ್ಷಿ ಧಾರವಾಹಿಯ ಪ್ರಮುಖ ಪಾತ್ರಧಾರಿ)
1. ಅಗ್ನಿಸಾಕ್ಷಿಯಲ್ಲಿನ ಸನ್ನಿಧಿಯ ಪಾತ್ರ ಒಂದು ರೋಲ್ ಮಾಡೆಲ್. ತಾಳ್ಮೆಯಿಂದ ಎಲ್ಲವನ್ನು ನಿಭಾಯಿಸುವ ಅಪ್ಪಟ ಗೃಹಿಣಿ. ನಿಮ್ಮ ಮತ್ತು ಸಿದ್ದಾರ್ಥ್ ನಡುವಿನ ಅನ್ ಟಚ್ ಡ್ ರೊಮ್ಯಾನ್ಸ್ ಬಗ್ಗೆ ಹೇಳಿ
ಮೊದಲಿಗೆ ಈ ಸೀರಿಯಲ್ ಸ್ಕ್ರಿಪ್ಟ್ ನೋಡಿದಾಗ ತುಂಬಾನೇ ಖುಷಿಯಾಯಿತು. ಹೊಸ ರೀತಿಯ ಕತೆ ಇದು. ಈಗಿನ ಕಾಲದಲ್ಲಿ ಪ್ರೀತಿ ಅಂದರೆ ಶಾರೀರಿಕ ಸಂಪರ್ಕ ವೇ ಮುಖ್ಯವಾಗಿ ಬರುತ್ತದೆ. ಆದರೆ ಇಲ್ಲಿ ಹಾಗಿಲ್ಲ, ಪ್ರೀತಿ ಎಂದರೆ ಫಿಸಿಕಲ್ ರಿಲೇಶನ್ ಶಿಪ್ ಇರಲೇಬೇಕು ಎಂಬ ಮಾತನ್ನು ಪಕ್ಕಕ್ಕಿಟ್ಟು ಮನಸ್ಸಿನ ಕನೆಕ್ಷನ್ ಬಗ್ಗೆ ತೋರಿಸಲಾಗಿದೆ. ನಾವು ಪ್ರೀತಿಸುವವರೊಂದಿಗೆ ನಮ್ಮ ಮನಸ್ಸಿನ ಒಳಗೆ ಒಂದು ಕನೆಕ್ಷನ್ ಇದ್ದೇ ಇರುತ್ತದೆ. ಆ ಪ್ರೀತಿಯನ್ನು ಯಾರೇ ದೂರ ಮಾಡಲು ಟ್ರೈ ಮಾಡಿದರೂ, ಅದು ಅವರಿಗೆ ಸಾಧ್ಯವಾಗಲ್ಲ . ಮನಸ್ಸಿನೊಳಗಿನ ನಿಷ್ಕಲ್ಮಶ ಪ್ರೀತಿ ತುಂಬಾನೇ ಗಾಢವಾಗಿರುತ್ತದೆ. ಚಿಕ್ಕ ಚಿಕ್ಕ ವಿಷಯಗಳೇ ಜೀವನದಲ್ಲಿ ಸಂತೋಷ ಕೊಡುವುದು. ಆದ್ದರಿಂದ ಇಲ್ಲಿ ಸನ್ನಿಧಿಯ ಪಾತ್ರವೂ ಇಂಥಾ ಪುಟ್ಟ ಪುಟ್ಟ ಸಂತೋಷಗಳನ್ನು ಕೊಡುತ್ತಿರುತ್ತದೆ.
2.ಸನ್ನಿಧಿಯಿಂದ ವೈಷ್ಣವಿ ಎಷ್ಟು ಭಿನ್ನ? ಕಣ್ಣಲ್ಲೇ ಎಲ್ಲವನ್ನೂ ಮಾತನಾಡುವ ಕಲೆಯ ಬಗ್ಗೆಯೂ ಹೇಳಿ..
ಸನ್ನಿಧಿ ಎಂಬ ಪಾತ್ರ ವೈಷ್ಣವಿಯ ಒಂದು ಭಾಗ ಎಂದೇ ಹೇಳಬಹುದು. ಅಲ್ಲಿ ಸನ್ನಿಧಿಯ ಸ್ಟೈಲ್ ಹೇಗಿದೆಯೋ ನಿಜ ಜೀವನದಲ್ಲೂ ನಾನು ಹಾಗೆಯೇ ಇರುತ್ತೇನೆ. ಕಣ್ಣಲ್ಲಿ ಮಾತಾಡುವ ಕಲೆ ಪ್ಲಸ್ ಪಾಯಿಂಟ್ (ನಗು)
3. ಅಗ್ನಿ ಸಾಕ್ಷಿ ಇಷ್ಟೊಂದು ಹಿಟ್ ಆಗುತ್ತದೆ ಎಂದು ಅನಿಸಿತ್ತಾ?
ಕತೆ ಕೇಳಿದಾಗ ಇದೊಂಥರಾ ವಿಭಿನ್ನವಾದ ಕತೆ ಎಂದು ಅನಿಸಿತ್ತು. ಹಾಗೆಯೇ ಒಳ್ಳೆ ಫಲ ನೀಡುತ್ತದೆ ಎಂಬ ನಿರೀಕ್ಷೆಯೂ ಇತ್ತು . ಈಗ ಅಗ್ನಿ ಸಾಕ್ಷಿಯ ಗೆಲವು ಖುಷಿಕೊಟ್ಟಿದೆ.
4.ವ್ಯಾಲೆಂಟೈನ್ಸ್ ಡೇ ಮತ್ತು ಪ್ರೀತಿ- ಇದರ ಬಗ್ಗೆ ನಿಮ್ಮ ಅನಿಸಿಕೆಯೇನು?
ಪ್ರೀತಿಗೆ ಒಂದು ದಿನ ಅಂತ ಬೇಕಾ?. ಪ್ರೀತಿ ಯಾವಾಗ ಬೇಕಾದರೂ ಮಾಡಬಹುದು. ಆ ದಿನವೇ ಪ್ರೀತಿ ಮಾಡ್ಬೇಕು ಅಂತದ್ದೇನಿಲ್ಲ. ಈಗಿನ ಕಾಲದ ಯುವಜನಾಂಗ ಇನ್ ಫ್ಯಾಕ್ಚುವೇಷನ್ ನ್ನೇ ಲವ್ ಎಂದು ತಿಳಿದುಕೊಂಡಿದ್ದಾರೆ. ಪ್ರೀತಿ ಎಂಬುದೇ ಬೇರೆ. ನಾವು ಯಾರನ್ನು ಬೇಕಾದರೂ ಪ್ರೀತಿ ಮಾಡಬಹುದು. ಅಪ್ಪ ಅಮ್ಮನನ್ನೂ ಪ್ರೀತಿಸಬಹುದಲ್ವಾ...
ನನ್ನ ಪ್ರಕಾರ ಮದುವೆಯ ನಂತರ ಹುಟ್ಟುವ ಪ್ರೀತಿ ಇದೆಯಲ್ಲಾ ಅದುವೇ ನಿಜವಾದ ಪ್ರೀತಿ. ನಮ್ಮ ಪ್ರೀತಿಗೆ ಅಪ್ಪ ಅಮ್ಮ ಅಡ್ಡ ಬರ್ತಾರೆ ಎಂದು ದೂರುತ್ತಾರೆ. ಕೆಲವರು ಓಡಿ ಹೋಗುತ್ತಾರೆ,. ಆದರೆ ನಿಜವಾದ ಪ್ರೀತಿಗೆ ಅಪ್ಪ ಅಮ್ಮ ತಡೆಯೊಡ್ಡಲ್ಲ, ಅವರನ್ನು ಒಪ್ಪಿಸಿ, ಪ್ರೀತಿಸುವರನ್ನು ಪಡೆದುಕೊಳ್ಳಬೇಕು. ಪ್ರೀತಿಗೆ ಬಾಳು ಕೊಡಬೇಕೇ ವಿನಾ ಓಡಿ ಹೋಗಬಾರದು.
5.ಸನ್ನಿಧಿ ಆ ಸಂಸಾರದಲ್ಲಿ ಗಂಡನನ್ನು ಪ್ರೀತಿಸುವ ಜತೆಗ ಇಡೀ ಸಂಸಾರವನ್ನೇ ಪ್ರೀತಿಸುತ್ತಾಳೆ. ಯಾರು ಎಷ್ಟೇ ನೋಯಿಸಿದರೂ, ಅವರಲ್ಲಿ ಪ್ರತಿಕಾರವನ್ನು ಮಾಡದೆ ಶಾಂತಚಿತ್ತಳಾಗಿ ಇರುತ್ತಾಳೆ. ಈ ವ್ಯಕ್ತಿತ್ವದ ಬಗ್ಗೆ ಏನಂತೀರಿ?
ನೋಡಿ, ಲೈಫ್ ಅನ್ನೋದು ಗಾಡಿ ಇದ್ದಂತೆ. ಗಂಡ ಮಾತ್ರ ಅಲ್ಲ ಅವನ ಫ್ಯಾಮಿಲಿ ಕೂಡಾ ಇಂಪಾರ್ ಟೆಂಟ್. ಇವುಗಳೆಲ್ಲವೂ ಒಂದು ಗಾಡಿಯ ಚಕ್ರವಿದ್ದಂತೆ. ಯಾವುದೇ ಚಕ್ರಕ್ಕೆ ಹಾನಿಯಾದರೂ ಗಾಡಿ ಮುಂದೆ ಹೋಗಲ್ಲ. ಹಾಗಾಗಿ ಎಲ್ಲರನ್ನೂ ಬ್ಯಾಲೆನ್ಸ್ ಮಾಡುತ್ತಾ, ಪ್ರೀತಿಯಿಂದ ಎಲ್ಲರನ್ನು ಗೆಲ್ಲುತ್ತಾ ಹೋಗಬೇಕು. ಜೀವನದಲ್ಲಿ ತಾಳ್ಮೆ ಮತ್ತು ಪ್ರೀತಿ ಗೆಲ್ಲುತ್ತದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos