ವಿದೇಶ

ವ್ಯಾಪಂ ಹಗರಣ: ಮೃತ ಪತ್ರಕರ್ತನ ತನಿಖೆ ನಡೆಸಿ; ವಿಶ್ವಸಂಸ್ಥೆ

ವಿಶ್ವಸಂಸ್ಥೆ: ಮಧ್ಯಪ್ರದೇಶದ ಬಹುಕೋಟಿ ವ್ಯಾಪಂ ಹಗರಣ ಇದೀಗ ದೇಶ-ವಿದೇಶಗಳಲ್ಲೂ ಸುದ್ದಿ ಮಾಡುತ್ತಿದ್ದು, ಮೃತ ಪತ್ರಕರ್ತ ಅಕ್ಷಯ್ ಸಿಂಗ್ ಸಾವು ಕುರಿತಂತೆ ತನಿಖೆ ನಡೆಸಿ ಎಂದು ಭಾರತೀಯ ಅಧಿಕಾರಿಗಳಿಗೆ ವಿಶ್ವಸಂಸ್ಥೆ ಶನಿವಾರ ಹೇಳಿದೆ.

ಈ ಕುರಿತಂತೆ ಇಂದು ವಿಶ್ವಸಂಸ್ಥೆಯಲ್ಲಿ ಮಾತನಾಡಿರುವ ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯ ಮಹಾನಿರ್ದೇಶಕಿ (ಯುನೆಸ್ಕೋ) ಇರಿನಾ ಬೊಕೊವಾ ಅವರು, ನಿಗೂಢ ಸಾವು ಪ್ರಕರಣ ಸಂಬಂಧಿಸಿ ಅನುಮಾನಾಸ್ಪದವಾಗಿ ಸಾವಿಗೀಡಾದ ಪತ್ರಕರ್ತ ಅಕ್ಷಯ್ ಸಿಂಗ್ ಅವರ ಸಾವನ್ನು ನಾವು ಖಂಡಿಸುತ್ತೇವೆ. ಇದೊಂದು ಪತ್ರಿಕಾ ಸ್ವಾತಂತ್ರ್ಯದ ವಿರುದ್ಧವಾಗಿದ್ದು, ಪತ್ರಕರ್ತರ ವಿರುದ್ಧ ಅಪರಾಧ ಮಾಡುವವರಿಗೆ ಶಿಕ್ಷೆಯಾಗಲೇಬೇಕು. ಕೂಡಲೇ ಭಾರತೀಯ ಅಧಿಕಾರಿಗಳು ಪ್ರಕರಣ ಸಂಬಂಧ ತನಿಖೆ ನಡೆಸಬೇಕು ಎಂದು ಹೇಳಿದ್ದಾರೆ.

ಸಮಾಜದಲ್ಲಿ ನಡೆಯುವ ಆಗುಹೋಗುಗಳನ್ನು ಜನರಿಗೆ ತಿಳಿಸಬೇಕಾದದ್ದು ಇದು ಸಾಮಾಜಿಕ ಪತ್ರಕರ್ತನ ಜವಾಬ್ದಾರಿ. ಸಿಂಗ್ ಸಾವಿನ ರಹಸ್ಯ ಭೇದಿಸಲು ಅಧಿಕಾರಿಗಳು ಎಲ್ಲಾ ರೀತಿಯ ತನಿಖೆ ನಡೆಸಬೇಕಿದ್ದು, ಅಪರಾಧಿಗಳಿಗೆ ಶಿಕ್ಷೆಯಾಗಬೇಕು ಎಂದು ಹೇಳಿದ್ದಾರೆ.

ದೆಹಲಿ ಮೂಲದ ಸುದ್ದಿ ಸಂಸ್ಥೆಯೊಂದಕ್ಕೆ ಕೆಲಸ ಮಾಡುತ್ತಿದ್ದ ಅಕ್ಷಯ್ ಸಿಂಗ್ ಎಂಬ  ಪತ್ರಕರ್ತರೊಬ್ಬರು ವ್ಯಾಪಂ ಹಗರಣದಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದ ನಮ್ರತಾ ದಾಮೋರ್ ಎಂಬ ಯುವತಿಯ ಪೋಷಕರನ್ನು ಸಂದರ್ಶನ ಮಾಡಲು ಹೋಗಿದ್ದರು. ಆದರೆ, ಸಂದರ್ಶನಕ್ಕೆ ಹೋದ ದಿನವೇ ಅಕ್ಷಯ್ ಸಿಂಗ್ ಅವರು ನಿಗೂಢವಾಗಿ ಸಾವನ್ನಪ್ಪಿದ್ದರು.

SCROLL FOR NEXT