ಲಂಡನ್: ಪ್ರಧಾನಿ ನರೇಂದ್ರ ಮೋದಿ ಬ್ರಿಟನ್ ಪ್ರವಾಸದ ಬಗ್ಗೆ ಅಲ್ಲಿನ ದಿನಪತ್ರಿಕೆ ಇಂಡಿಪೆಂಡೆಂಟ್ ಸಂಪಾದಕೀಯ ಬರೆದಿದ್ದು, ಭಾರತ ಉಪದೇಶ ಕೇಳುವುದನ್ನಾಗಲಿ ಆಶ್ರಯವನ್ನಾಗಲಿ ಬಯಸುವುದಿಲ್ಲ. ಭಾರತಕ್ಕೆ ಬ್ರಿಟನ್ ನ ಅವಶ್ಯಕತೆಗಿಂತಲೂ ಬ್ರಿಟನ್ ಗೆ ಭಾರತದ ಅವಶ್ಯಕತೆ ಹೆಚ್ಚಿದೆ. ಆದ್ದರಿಂದ ಬ್ರಿಟನ್ ಪ್ರಧಾನಿ ಮೋದಿ ಅವರೊಂದಿಗೆ ಏನೇ ಮಾತನಾಡಿದರೂ ಅದು ಯಥಾರ್ಥತೆ ಮತ್ತು ಪ್ರಾಮಾಣಿಕತೆಯಿಂದ ಕೂಡಿರಲಿ ಎಂದು ಸಲಹೆ ನೀಡಿದೆ.
ಮೋದಿ ಬ್ರಿಟನ್ ಗೆ ಪ್ರವಾಸ ಕೈಗೊಂಡಿರುವುದೇ ಗಮನಾರ್ಹ ವಿಷಯವಾಗಿದ್ದು ಮೋದಿ ಅವರ ಭೇಟಿ ಸೂಕ್ಷ್ಮ ವಿಚಾರಗಳನ್ನು ಪ್ರಸ್ತಾಪಿಸುವುದಕ್ಕೆ ಒಳ್ಳೆಯ ಅವಕಾಶ. ಗುಜರಾತ್ ಗಲಭೆಗೆ ಸಂಬಂಧಿಸಿದಂತೆ ಕಳೆದ ಒಂದು ದಶಕದಿಂದ ಮೋದಿ ಅವರನ್ನು ಬ್ರಿಟನ್ ಬಹಿಷ್ಕರಿಸಿತ್ತು. ಅಕ್ಟೋಬರ್ 2012 ರಲ್ಲಿ ಬ್ರಿಟನ್ ಮತ್ತೆ ಮೋದಿ ಅವರೊಂದಿಗೆ ಸೌಹಾರ್ದಯುತ ಸಂಬಂಧಕ್ಕೆ ಮುಂದಾಗಿದ್ದು ಸರಿಯಾದ ಕ್ರಮವಾಗಿತ್ತು ಎಂದು ದಿ ಇಂಡಿಪೆಂಡೆಂಟ್ ಅಭಿಪ್ರಾಯಪಟ್ಟಿದೆ.
ಭಾರತವನ್ನು ಅತ್ಯಂತ ಪ್ರಮುಖ ವ್ಯಾವಹಾರಿಕ ಹಾಗೂ ಕಾರ್ಯತಂತ್ರದ ಜೊತೆಗಾರ ಎಂದಿದ್ದ ಬ್ರಿಟನ್ ಪ್ರಧಾನಿ ಡೇವಿಡ್ ಕೆಮರೂನ್ ಈ ವರೆಗೂ ಮೂರು ಬಾರಿ ಭಾರತಕ್ಕೆ ಪ್ರವಾಸ ಕೈಗೊಂಡಿದ್ದಾರೆ. ಅಲ್ಲದೇ ಮೋದಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಪರಸ್ಪರ ಭೇಟಿಯ ಬಗ್ಗೆ ಪ್ರಸ್ತಾಪಿಸಿದ್ದರು. ಆದರೆ ಭಾರತಕ್ಕೆ ಬ್ರಿಟನ್ ನ ಅವಶ್ಯಕತೆಗಿಂತಲೂ ಬ್ರಿಟನ್ ಗೆ ಭಾರತದ ಅವಶ್ಯಕತೆ ಹೆಚ್ಚಿದೆ ಎಂಬುದನ್ನು ಪ್ರಧಾನಿ ಡೇವಿಡ್ ಕೆಮರೂನ್ ಮನಗಾಣಬೇಕು ಎಂದು ಇಂಡಿಪೆಂಡೆಂಟ್ ಅಭಿಪ್ರಾಯಪಟ್ಟಿದೆ.
ಭಾರತದಲ್ಲಿ ಉದ್ಯಮ ಸ್ಥಾಪನೆ ಮಾಡುವುದು ಈ ಹಿಂದೆ ಸುಲಭದ ಮಾತಾಗಿರಲಿಲ್ಲ. ಮೋದಿ ಅಧಿಕಾರಕ್ಕೆ ಬಂದಾಗಿನಿಂದಲು ಮೂವತ್ತಕ್ಕೂ ಹೆಚ್ಚು ರಾಷ್ಟ್ರಗಳಿಗೆ ಭೇಟಿ ನೀಡಿ, ಭಾರತ ಹೂಡಿಕೆ ಸ್ನೇಹಿ ರಾಷ್ಟ್ರ ಎಂಬುದನ್ನು ಪ್ರಚಾರ ಮಾಡುತ್ತಿದ್ದಾರೆ.
ಭಾರತ ಹಾಗೂ ಬ್ರಿಟನ್ ನಡುವಿನ ಉದ್ಯಮ ಸಂಬಂಧ ಯಶಸ್ವಿಯಾದರೆ ಅದರಿಂದಾಗಿ ಆರ್ಥಿಕ ಲಾಭದ ಜೊತೆಗೆ ಬ್ರಿಟನ್ ನಲ್ಲಿರುವ ಭಾರತೀಯ ಮೂಲದ ಮತದಾರಿಗೆ ಆತ್ಮೀಯವಾದ ಸಂದೇಶವನ್ನು ಕಳುಹಿಸುವುದಕ್ಕೂ ನೆರವಾಗಲಿದೆ ಎಂದು ಇಂಡಿಪೆಂಡೆಂಟ್ ಹೇಳಿದೆ. ಭಾರತದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆ ಬಗ್ಗೆ ಡೇವಿಡ್ ಕೆಮರೂನ್ ಪ್ರಸ್ತಾಪಿಸಲಿ, ಆದರೆ ಏನೇ ಮಾತನಾಡಿದರೂ ಅದು ಯಥಾರ್ಥತೆ ಮತ್ತು ಪ್ರಾಮಾಣಿಕತೆಯಿಂದ ಕೂಡಿರಲಿ ಎಂದು ಹೇಳಿದೆ.