ವಾಷಿಂಗ್ಟನ್: ಚೀನಾ ದೇಶವೇ ನೀವು ಪಾಕಿಸ್ತಾನದ ಭಯೋತ್ಪಾದನೆಯನ್ನು ಕಾಪಾಡುವ ಪ್ರಯತ್ನ ಮಾಡುತ್ತಿದ್ದೀರಿ, ಇದು ಸಂದೇಶದ ಒಳಾರ್ಥ. ಈ ಹೇಳಿಕೆಯಲ್ಲಿ ಆಕ್ರೋಶ, ಬೇಸರ, ಸಿಟ್ಟು ಎಲ್ಲವೂ ಇದೆ. ಆ ಸಂದೇಶದಲ್ಲಿ ಎರಡು ದೇಶಗಳ ಹೆಸರನ್ನು ಪ್ರಸ್ತಾಪಿಸಿಲ್ಲ. ಆದರೂ ಅರ್ಥವಿದೆ. ಇದು ಪಠಾಣ್ ಕೋಟ್ ವಾಯುನೆಲೆ ಮೇಲಿನ ದಾಳಿಯ ರೂವಾರಿ ಜೈಶ್ ಇ ಮೊಹಮ್ಮದ್ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ಗೆ ಬಹಿಷ್ಕಾರ ಹಾಕುವಂತೆ ವಿಶ್ವಸಂಸ್ಥೆಯನ್ನು ಭಾರತ ಕೋರಿರುವುದಕ್ಕೆ ಚೀನಾ ಅಡ್ಡಗಾಲು ಹಾಕಿರುವ ಕ್ರಮಕ್ಕೆ ಭಾರತ ನೀಡಿರುವ ಪ್ರತಿಕ್ರಿಯೆಯ ಸಾರಾಂಶ.
ವಾಷಿಂಗ್ಟನ್ ನಲ್ಲಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಆಯೋಜಿಸಿದ್ದ ನಾಲ್ಕನೇ ಪರಮಾಣು ಭದ್ರತೆ ಶೃಂಗಸಭೆಯಲ್ಲಿ ಮಾತನಾಡಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಯೋತ್ಪಾದನೆಗೆ ಸಂಬಂಧಪಟ್ಟಂತೆ ಅಂತರಾಷ್ಟ್ರೀಯ ಸಮುದಾಯದ ಬಣವೊಂದರ ಪ್ರತಿಕ್ರಿಯೆಗೆ ಬೇಸರ ವ್ಯಕ್ತಪಡಿಸಿದ್ದರು. ಜೈಶ್ ಇ ಮೊಹಮ್ಮದ್ ಸಂಘಟನೆಯ ನಾಯಕ ಮಸೂದ್ ಅಜರ್ ನನ್ನು ಬಹಿಷ್ಕರಿಸುವಂತೆ ವಿಶ್ವಸಂಸ್ಥೆಗೆ ಮಾಡಿದ ಮನವಿಗೆ ಚೀನಾ ಮತ್ತು ಪಾಕಿಸ್ತಾನ ಒಟ್ಟಾಗಿ ಅಡ್ಡಗಾಲು ಹಾಕಿರುವುದಕ್ಕೆ ಭಾರತ ತೀಕ್ಷ್ಮವಾಗಿ ಪ್ರತಿಕ್ರಿಯಿಸಿದೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿ ನಿರ್ಣಯದಲ್ಲಿ 2001ರಲ್ಲಿಯೇ ಪಾಕಿಸ್ತಾನ ಮೂಲದ ಮಸೂದ್ ಅಜರ್ ನನ್ನು ಆಲ್ ಖೈದಾ ಜೊತೆ ಸಂಪರ್ಕ ಹೊಂದಿದ್ದಾನೆ ಎಂದು ಭಯೋತ್ಪಾದಕರ ಪಟ್ಟಿಯ ಹೆಸರಲ್ಲಿ ಸೇರಿಸಲಾಗಿತ್ತು. ಕಳೆದ ಜನವರಿ 2ರಂದು ಪಠಾಣ್ ಕೋಟ್ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಕೂಡ ಮಸೂದ್ ಅಜರ್ ನ ಪಾತ್ರವಿದ್ದು, ಅವನನ್ನು ಬಹಿಷ್ಕರಿಸದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಭಾರತ ವಿಶ್ವಸಂಸ್ಥೆಗೆ ಬರೆದ ಪತ್ರದಲ್ಲಿ ತಿಳಿಸಿತ್ತು.