ಒಟಾವಾ: 100 ವರ್ಷಗಳ ಹಿಂದೆ ಭಾರತದಿಂದ ವಲಸೆ ಹೋಗಿದ್ದವರ ಪ್ರವೇಶಕ್ಕೆ ನಿರಾಕರಿಸಿದ್ದಕ್ಕೆ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೂ ಕ್ಷಮೆಯಾಚಿಸಿದ್ದಾರೆ.
376 ಸಿಖ್ ಪ್ರಯಾಣಿಕರಿದ್ದ ಕೊಮಗಟ ಹಡಗನ್ನು 1914ರಲ್ಲಿ ಬಲವಂತವಾಗಿ ವಾಪಸ್ ಕಳುಹಿಸಿದಕ್ಕೆ ನಾನು ಕ್ಷಮೆಯಾಚಿಸುತ್ತೇನೆ ಎಂದು ಪ್ರಧಾನಿ ಜಸ್ಟಿನ್ ಟ್ರುಡೂ ಹೇಳಿದ್ದಾರೆ.
ಅಂದು ಆಶ್ರಯ ಬಯಸಿ ಬಂದ ಸಿಖ್ ಜನಾಂಗವನ್ನು ವಾಪಸ್ ಕಳುಹಿಸಿ ಅವರನ್ನು ತೊಂದರೆಗೆ ಸಿಲುಕಿಸಿದ ಘಟನೆಯನ್ನು ನಾವು ಮರೆಯಬಾರದು, ಹಾಗೆ ನಾವು ಮರೆಯುವುದಿಲ್ಲ. ಹಾಗಾಗಿ ಅಂದು ವಲಸಿಗರನ್ನು ವಾಪಸ್ ಕಳುಹಿಸಿದಕ್ಕೆ ಇಂದು ಕ್ಷಮೆಯಾಚಿಸಿತ್ತೇನೆ ಎಂದು ಸಂಸತ್ ನಲ್ಲಿ ಅವರು ಹೇಳಿದ್ದಾರೆ.
ಮಲೇಷ್ಯಾ ಮೂಲದ ಶ್ರೀಮಂತ ಸಿಖ್ ಗುರುದಿತ್ ಸಿಂಗ್ ಎಂಬಾತ ವ್ಯಾಂಕೊವರ್ನ ಜನಾಂಗೀಯ ಕಾಯಿದೆ ವಿರೋಧಿಸಿ 376 ಭಾರತೀಯರನ್ನು ಹಾಂಕಾಂಗ್ ಮಾರ್ಗವಾಗಿ ವ್ಯಾಂಕೊವರ್ಗೆ ಕರೆದೊಯ್ಯಲು 1914ರಲ್ಲಿ ಜಪಾನ್ನ ಕೊಮಗಟ ಹಡಗನ್ನು ಬಾಡಿಗೆ ಪಡೆದಿದ್ದ. ಆದರೆ ವ್ಯಾಂಕೊವರ್ ಬಂದರಿನ ಬಳಿ ಬಂದ ಆ ಹಡಗು ನಿಲುಗಡೆಗೆ ಅವಕಾಶ ನೀಡದೇ, ಎರಡು ತಿಂಗಳು ಕಾಯಿಸಿದ ನಂತರ ಬಲವಂತವಾಗಿ ಭಾರತಕ್ಕೆ ವಾಪಸು ಕಳುಹಿಸಲಾಗಿತ್ತು.
ಅವರೆಲ್ಲಾ ಕೋಲ್ಕತ್ತಗೆ ಬಂದಿಳಿಯುತ್ತಿದ್ದಂತೆಯೇ ಪೊಲೀಸರು ಗುಂಡು ಹಾರಿಸಿ ಹಲವಾರು ಮಂದಿಯನ್ನು ಹತ್ಯೆ ಮಾಡಿದ್ದರು. ಅಂದು ಹಡಗಿನಲ್ಲಿದ್ದ ಪ್ರಯಾಣಿಕರು ಕೆನಡಾ ಪ್ರವೇಶಕ್ಕೆ 15000 ಡಾಲರ್ ಹಣವನ್ನು ‘ಪ್ರವೇಶ ತೆರಿಗೆ’ ರೂಪದಲ್ಲಿ ಪಾವತಿ ಮಾಡಿದ್ದರು.