ವಾಷಿಂಗ್ಟನ್: ಭಯೋತ್ಪಾದನೆಯನ್ನು ರಾಜ ನೀತಿಯ ಸಾಧನವಾಗಿ ಬಳಸಿಕೊಳ್ಳುತ್ತಿದೆ ಎಂದು ಪಾಕಿಸ್ತಾನದ ವಿರುದ್ಧ ವಾಗ್ದಾಳಿ ನಡೆಸಿದ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ, ವಿಶ್ವದಲ್ಲಿ ನಡೆಯುವ ಪ್ರತಿ ಪ್ರಮುಖ ಭಯೋತ್ಪಾದಕ ಘಟನೆಗಳಲ್ಲಿ ಪಾಕಿಸ್ತಾನದ ಹೆಜ್ಜೆ ಗುರುತುಗಳಿವೆ, ಜಾಗತಿಕ ಭಯೋತ್ಪಾದನೆಯಲ್ಲಿ ಬ್ರಾಂಡ್ ಪಾಕಿಸ್ತಾನ ಎಂದು ಗುರುತಿಸಿಕೊಂಡಿದೆ ಎಂದು ಹೇಳಿದರು.
ವಾಷಿಂಗ್ಟನ್ ನಲ್ಲಿ ಅಂತಾರಾಷ್ಟ್ರೀಯ ಹಣಕಾಸು ನಿಧಿ ಮತ್ತು ವಿಶ್ವ ಬ್ಯಾಂಕ್ ಸಭೆಯಲ್ಲಿ ಮಾತನಾಡಿದ ಅವರು, ಭಯೋತ್ಪಾದನೆ ವಿಷಯದಲ್ಲಿ ಪಾಕಿಸ್ತಾನ ತುಂಬಾ ಕಡಿಮೆ ವಿಶ್ವಾಸಾರ್ಹತೆಯನ್ನು ಹೊಂದಿದೆ. 19ನೇ ಸಾರ್ಕ್ ಶೃಂಗಸಭೆಯಲ್ಲಿ ಬಹಳಷ್ಟು ದೇಶಗಳು ಪಾಕಿಸ್ತಾನವನ್ನು ದೂರವಿಟ್ಟಿದ್ದು ಅದರ ಬಗ್ಗೆ ಬೇರೆ ರಾಷ್ಟ್ರಗಳಿಗಿರುವ ಅಭಿಪ್ರಾಯವನ್ನು ತಿಳಿಸುತ್ತದೆ ಎಂದರು.
ಭಾರತದ ಸರ್ಜಿಕಲ್ ಸ್ಟ್ರೈಕ್ ಬಗ್ಗೆ, ಅದರ ಅಪಾಯದ ಬಗ್ಗೆ ಕೇಳಲಾದ ಅನೇಕ ಪ್ರಶ್ನೆಗಳಿಗೆ ಉತ್ತರಿಸಿದ ಜೇಟ್ಲಿ, ಸಮಸ್ಯೆಯನ್ನು ನಾವು ಅತಿಗೊಳಿಸಲು ಹೋಗಬಾರದು. ಎರಡೂ ದೇಶಗಳು ಪರಮಾಣು ಶಕ್ತಿಯುತವಾಗಿದ್ದು, ಪರಮಾಣು ಬೆದರಿಕೆಯೊಡ್ಡುವುದು ಪಾಕಿಸ್ತಾನದ ತಂತ್ರವಾಗಿದೆ. ಅದು ಎಂದಿಗೂ ಭಾರತದ ತಂತ್ರವಾಗಿಲ್ಲ. ನೀವು ಸರ್ಜಿಕಲ್ ಸ್ಟ್ರೈಕ್ ನ ಆರ್ಥಿಕ ಪರಿಣಾಮವನ್ನು ನೋಡಿದರೆ ಕರೆನ್ಸಿ ಮಾರುಕಟ್ಟೆಯಲ್ಲಿ ಕ್ರಾಂತಿಯನ್ನು ನೋಡಬಹುದು. ಖರ್ಚುವೆಚ್ಚದ ವಿಷಯದಲ್ಲಿ ರಕ್ಷಣಾ ವಲಯ ಯಾವತ್ತೂ ಮುಖ್ಯವಾಗುತ್ತದೆ. ಯಾಕೆಂದರೆ ಭಾರತಕ್ಕೆ ರಾಷ್ಟ್ರೀಯ ಭದ್ರತೆ ಮತ್ತು ಸಾರಭೌಮತ್ವ ಮುಖ್ಯವಾಗಿದೆ ಎಂದು ಹೇಳಿದರು.
ಪಾಕ್ ಆಕ್ರಮಿತ ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಬಳಿ ಉಗ್ರಗಾಮಿಗಳ ಲಾಂಚ್ ಪ್ಯಾಡ್ ಮೇಲೆ ಭಾರತೀಯ ಸೇನೆಯ ಸರ್ಜಿಕಲ್ ಸ್ಟ್ರೈಕ್ ನ್ನು ಸೇನೆಯ ಕಾರ್ಯತಂತ್ರ ಮತ್ತು ಭಯೋತ್ಪಾದನೆ ವಿರುದ್ಧ ಪೂರ್ವಭಾವಿ ದಾಳಿ ಎಂದು ಜೇಟ್ಲಿ ಬಣ್ಣಿಸಿದರು.